ಕೊರಟಗೆರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಹುಲೀಕುಂಟೆ ಗ್ರಾಮ ಪಂಚಾಯತ್ ಇವರ ವತಿಯಿಂದ ದಸರಾ ಅಂಗವಾಗಿ ಸರ್ಕಾರದ ಆದೇಶದ ಪಾಲನೆಯಂತೆ ಹುಲೀಕುಂಟೆ ನಾರಾಯಣಸ್ವಾಮಿ ಕ್ರೀಡಾ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು.
ತಾಪಂ ಕಾರ್ಯನಿರ್ವಹಣಾ ಅಧಿಕಾರಿ ದೊಡ್ಡಸಿದ್ದಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣಾ ಭಾಗದ ಕ್ರೀಡಾ ಪಟುಗಳಿಗೆ ಕ್ರೀಡೆಯ ಮೇಲೆ ಆಸಕ್ತಿಯೇ ಕಡಿಮೆಯಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಯುವಕರು ತೊಡಗದೇ ದೈಹಿಕ ಹಾಗೂ ಮಾನಸಿಕವಾಗಿ, ಸದೃಡರಾಗದೆ, ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ಯುವಕರಿಗೆ ಕಬಡ್ಡಿ, ಖೋಖೋ, ಕುಸ್ತಿ, ಎತ್ತಿನಗಾಡಿ ಓಟ ಇನ್ನೂ ಮುಂತಾದ ಕ್ರೀಡೆಗಳನ್ನು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯತ್ ನವರು ಆಯೋಜನೆ ಮಾಡಬೇಕು. ಈ ಮೂಲಕ ಕ್ರೀಡಾ ಆಸಕ್ತಿಯನ್ನು ಹೆಚ್ಚಿಸಿ ಎಂದು ಅವರು ಹೇಳಿದರು.
ಹುಲೀಕುಂಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಣ್ಣ ಮಾತನಾಡಿ, ದೇಶದ ಕ್ರೀಡೆಗಳಲ್ಲಿ ಗ್ರಾಮೀಣ ಭಾಗದ ಜನರೇ ಹೆಚ್ಚಿನ ಸಾಧನೆ ಮಾಡಿದ್ದಾರೆ. ಹೀಗಾಗಿ ಕ್ರೀಡೆ ಮೇಲೆ ಇರುವಂತಹ ಆಸಕ್ತಿಯನ್ನು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಹೊರಹಾಕಿ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ರವಿಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಸುತ್ತಿರುವ ಈ ಕ್ರೀಡಾಕೂಟವು ಕೇವಲ ಗ್ರಾಮೀಣ ಭಾಗಕ್ಕೆ ಮೀಸಲಾಗಬಾರದು, ಇಲ್ಲಿನ ಪ್ರತಿಭೆಗಳು ತಾಲ್ಲೂಕು, ಜಿಲ್ಲೆ ಸೇರಿದಂತೆ ರಾಜ್ಯಮಟ್ಟದಲ್ಲಿ ಗುರುತಿಸಿ ಕೊಳ್ಳಬೇಕು. ಯಾರಿಗೆ ಗೊತ್ತು ಇಲ್ಲಿರುವ ಪ್ರತಿಭೆಗಳು ಮುಂದೊಂದು ದಿನ ದೇಶದ ಮಟ್ಟದಲ್ಲಿ ಗುರುತಿಸಿಕೊಂಡು ದೇಶಕ್ಕೆ ಕೀರ್ತಿ ಇರಬಹುದು ಆದ್ದರಿಂದ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ತಿಳಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೃಥ್ವಿಭಾ ಮಾತನಾಡಿ, ಸರ್ಕಾರ ಪ್ರತಿಯೊಂದು ಗ್ರಾಮ ಪಂಚಾಯತ್ ವತಿಯಿಂದ ಕ್ರೀಡಾಕೂಟ ಆಯೋಜನೆ ಮಾಡಲು ಆದೇಶಿಸಿದೆ. ಅದರಂತೆ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ದಸರಾ ಮಹೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಲಾಗಿದೆ, ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮದವರು ಕ್ರೀಡೆಯಲ್ಲಿ ಆಸಕ್ತಿ ಭಾಗವಹಿಸಿ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಎಇಇ ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ರವಿಕುಮಾರ್, ಕಂದಾಯ ಇಲಾಖೆಯ ಸಿಬ್ಬಂದಿ ಸದಸ್ಯರು, ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy