ತುಮಕೂರು : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಾಂಜಾ ಮಾರಾಟ, ಮನೆ ಕಳ್ಳತನ, ಬೋರ್ವೆಲ್ ಸ್ಟಾರ್ಟರ್ ಕಳ್ಳತನ ಹಾಗೂ ಹೆದ್ದಾರಿ ಮತ್ತು ಒಂಟಿ ಮನೆಗಳಲ್ಲಿ ನಡೆದ ಸುಲಿಗೆ ಪ್ರಕರಣಗಳನ್ನು ತುಮಕೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ ಎಂದು ಎಸ್ಪಿ ಅಶೋಕ್ ಕೆ.ವಿ. ತಿಳಿಸಿದರು.
ನಗರದ ಎಸ್ ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಜಾ ಮಾರಾಟ ಪ್ರಕರಣಗಳನ್ನು ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿ, ಗಾಂಜಾ ಮಾರಾಟ, ಮನೆ ಕಳ್ಳತನ, ಬೋರ್ವೆಲ್ ಸ್ಟಾರ್ಟರ್ ಕಳ್ಳತನ ಹಾಗೂ ಹೆದ್ದಾರಿ ಮತ್ತು ಒಂಟಿ ಮನೆಗಳಲ್ಲಿ ನಡೆದ ಸುಲಿಗೆ ಪ್ರಕರಣಗಳ ಮಾಹಿತಿ ನೀಡಿದರು.
ಪ್ರಕರಣ 1: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಂಧನ
ತುಮಕೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮತ್ತು ಹೈಡ್ರೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಸದಸ್ಯರ ಗ್ಯಾಂಗ್ ಅನ್ನು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಜುಲೈ 10ರಂದು ಶೇಷಾದ್ರಿಪುರಂ ಕಾಲೇಜು ಸಮೀಪ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖಾ ತಂಡ ರಚಿಸಿ, ಜುಲೈ 11ರಂದು ಕಾರ್ಯಾಚರಣೆ ನಡೆಸಿ 6 ಆರೋಪಿಗಳನ್ನು ಬಂಧಿಸಿತು. ಬಂಧಿತರಾದ ಸತೀಶ್ ಸಿ. (37), ಪ್ರಮೋದ್ ಕುಮಾರ್ (28), ದಿಶಾಂತ್ ಆರ್. (21), ದರ್ಶನ್ (28), ಅಮೋಘ ನಾಗಭೂಷಣ್ (31) ಹಾಗೂ ಮಂಜುನಾಥ್ (35).
ಬಂಧಿತರಿಂದ ಸುಮಾರು 1 ಕೆ.ಜಿ. 655 ಗ್ರಾಂ ಗಾಂಜಾ, 23 ಗ್ರಾಂ ಹೈಡ್ರೋವಿಡ್ ಗಾಂಜಾ ಹಾಗೂ 40 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರು ಸೇರಿದಂತೆ ಒಟ್ಟು 44.30 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ತನಿಖಾ ತಂಡದ ತಿಲಕ್ ಪಾರ್ಕ್ ವೃತ್ತದ ಸಿಪಿಐ ಎಫ್.ಕೆ. ನಡಾಫ್, ಪಿಎಸ್ಐ ಯೋಗೀಶ್ ಟಿ.ಕೆ., ಲೋಕೇಶ್ ಬಾಬು ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಪ್ರಕರಣ 2: ಮನೆ ಕಳ್ಳತನ ಪ್ರಕರಣ ಭೇದಿಸಿದ ಜಯನಗರ ಪೊಲೀಸರು: ಅಂತರರಾಜ್ಯ ಕಳ್ಳನ ಬಂಧನ
ತುಮಕೂರು ನಗರದ ಗೋಕುಲ ಬಡಾವಣೆಯಲ್ಲಿ 2023ರ ಡಿಸೆಂಬರ್ನಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಜಯನಗರ ಪೊಲೀಸರು ಭೇದಿಸಿ, ಅಂತರರಾಜ್ಯ ಕಳ್ಳನನ್ನು ಬಂಧಿಸಿ 55 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. 2023ರ ಡಿಸೆಂಬರ್ 30ರಂದು ಗೋಕುಲ ಬಡಾವಣೆಯ ಮನೆಯಲ್ಲಿ ಬೀಗ ಮುರಿದು ಸುಮಾರು 200 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ವಿಶೇಷ ತಂಡವು ಜೂನ್ 23, 2026ರಂದು ಉತ್ತರ ಪ್ರದೇಶ ಮೂಲದ ಫಹೀಮ್ ಎ.ಟಿ.ಎಂ. ಫಹೀಮ್ ಇಸ್ಲಾಮುದ್ದೀನ್ (38) ಎಂಬ ಆರೋಪಿಯನ್ನು ಬಂಧಿಸಿದೆ.
ಆರೋಪಿಯಿಂದ ಒಟ್ಟು 401.12 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 55 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಲಕ್ಷದ್ವೀಪ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿ ಒಟ್ಟು 66 ಕಳವು ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ತನಿಖಾ ತಂಡದ ಸಿಪಿಐ ಎಫ್.ಕೆ. ನಡಾಫ್, ಪಿಎಸ್ಐ ಮೋಹನ್ ಎನ್., ಎಎಸ್ಐ ಮೋಹನ್ ಕುಮಾರ್ ಹಾಗೂ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿದ್ದರು. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತನಿಖಾ ತಂಡವನ್ನು ಪ್ರಶಂಸಾಪತ್ರ ನೀಡಿ ಗೌರವಿಸಿದರು.
ಪ್ರಕರಣ 4
ಒಂಟಿ ಮನೆಯ ಮಹಿಳೆಗೆ ಕಾರದ ಪುಡಿ ಎರಚಿ ಸರ ಕದ್ದ ಇಬ್ಬರ ಬಂಧನ:
ತುಮಕೂರು: ಒಂಟಿ ಮನೆಯಲ್ಲಿ ಇದ್ದ ಶಿಕ್ಷಕಿಯೊಬ್ಬರಿಗೆ ಕಾರದ ಪುಡಿ ಎರಚಿ ಚಿನ್ನದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ, ಕಳವಾದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಜೂನ್ 28ರಂದು ತಿಮ್ಮಲಾಪುರದ ತೋಟದ ಮನೆಯಲ್ಲಿ ಇದ್ದ ಶಿಕ್ಷಕಿ ಚಂದ್ರಮ್ಮ ಅವರ ಮನೆಗೆ ಬುರ್ಖಾ ಧರಿಸಿದ್ದ ಮಹಿಳೆ ಊಟ ಕೇಳುವ ನೆಪದಲ್ಲಿ ಪ್ರವೇಶಿಸಿದ್ದಳು. ಬಳಿಕ ಕಣ್ಣಿಗೆ ಕಾರದ ಪುಡಿ ಎರಚಿ, ಸುಮಾರು 73.480 ಗ್ರಾಂ ತೂಕದ 4 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಸಿದು, ಹೊರಗೆ ಬೈಕ್ನೊಂದಿಗೆ ಕಾಯುತ್ತಿದ್ದ ಸಹಚರನೊಂದಿಗೆ ಪರಾರಿಯಾಗಿದ್ದಳು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವಿಶೇಷ ತಂಡ ಜುಲೈ 2ರಂದು ಆರೋಪಿಗಳಾದ ನಾಗರತ್ನ (34) ಹಾಗೂ ಶಿವಕುಮಾರ್ ಟಿ.ಆರ್. ಶೆಟ್ಟಿ (34) ಅವರನ್ನು ಬಂಧಿಸಿದೆ. ಆರೋಪಿಗಳಿಂದ ಸುಲಿಗೆ ಮಾಡಿದ್ದ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಬುರ್ಖಾವನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ವೃತ್ತ ನಿರೀಕ್ಷಕ ಪುಟ್ಟೇಗೌಡ ಕೆ.ಬಿ., ಪಿಎಸ್ಐ ಪಿ.ಎಂ. ಆಮಣಿ ಹಾಗೂ ಇತರ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತು. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ತನಿಖಾ ತಂಡವನ್ನು ಪ್ರಶಂಸಾಪತ್ರ ನೀಡಿ ಗೌರವಿಸಿದರು.
ಪ್ರಕರಣ 5
ಹೆದ್ದಾರಿ ಸುಲಿಗೆ ಪ್ರಕರಣ ಭೇದಿಸಿದ ಪೊಲೀಸರು: ಓರ್ವ ಆರೋಪಿ ಬಂಧನ:
ತುಮಕೂರು: ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಲಾರಿ ಚಾಲಕ ಹಾಗೂ ಕಾರು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಸುಲಿಗೆ ನಡೆಸಿದ್ದ ಪ್ರಕರಣವನ್ನು ತುಮಕೂರು ಗ್ರಾಮಾಂತರ ಪೊಲೀಸರು ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಮೇ 16ರಂದು ಊರುಕೆರೆ ಸರ್ವಿಸ್ ರಸ್ತೆಯಲ್ಲಿ ಲಾರಿ ಚಾಲಕ ನಾಗೇಶ್ ಯಮನಪ್ಪ ಗೊಂಡಿ ಅವರು ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಇಬ್ಬರು ಆರೋಪಿಗಳು 57,400 ರೂ. ನಗದು ಹಾಗೂ ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದರು. ಅದೇ ದಿನ ಕೋರ ಪೊಲೀಸ್ ಠಾಣೆ ವ್ಯಾಪ್ತಿಯ ವಿ.ಆರ್.ಎಲ್ ಹೋಟೆಲ್ ಸಮೀಪ ಕಾರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಿಂಧು ಅವರಿಂದ 1.80 ಲಕ್ಷ ರೂ. ಮೌಲ್ಯದ 10.300 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಸುಲಿಗೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ವಿಶೇಷ ತಂಡ ಸೈಯದ್ ಉಸ್ಮಾನ್ (22) ಎಂಬ ಆರೋಪಿಯನ್ನು ಬಂಧಿಸಿ, ಸುಲಿಗೆ ಮಾಡಿದ್ದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದೆ. ಮತ್ತೊಬ್ಬ ಆರೋಪಿ ಆಕಾಶ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ತನಿಖಾ ತಂಡವನ್ನು ಪ್ರಶಂಸಾಪತ್ರ ನೀಡಿ ಗೌರವಿಸಿದರು.
ಬೋರ್ ವೆಲ್ ಸ್ಟಾರ್ಟರ್ ಕಳ್ಳತನ ಪ್ರಕರಣ: ಮಧುಗಿರಿ ಪೊಲೀಸರಿಂದ ಬಂಧನ
ತುಮಕೂರು: ಮಧುಗಿರಿ ತಾಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಬೋರ್ವೆಲ್ ಸ್ಟಾರ್ಟರ್ ಹಾಗೂ ಸಿಸಿ ಕ್ಯಾಮೆರಾ ಕಳವು ಪ್ರಕರಣವನ್ನು ಮಧುಗಿರಿ ಪೊಲೀಸರು ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿ 12.25 ಲಕ್ಷ ರೂ. ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ. ಜುಲೈ 6ರಂದು ರಾತ್ರಿ ಶೆಟ್ಟಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಬೋರ್ವೆಲ್ಗೆ ಅಳವಡಿಸಿದ್ದ ಸ್ಟಾರ್ಟರ್, ರೋಟೇಟಿಂಗ್ ಸೈರನ್ ಹಾಗೂ ಸಿಸಿ ಕ್ಯಾಮೆರಾವನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ಜುಲೈ 8ರಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ರಚಿಸಲಾದ ವಿಶೇಷ ತಂಡ ಜುಲೈ 11ರಂದು ಮಹೇಶ್ ಎಂ.ಎ. (28), ಮುರಿತಿಮ್ಮನಹಳ್ಳಿ ಮೂಲದ ಆರೋಪಿಯನ್ನು ಬಂಧಿಸಿತು. ಆರೋಪಿಯಿಂದ ವಿವಿಧ ಕಂಪನಿಗಳ 66 ಬೋರ್ ವೆಲ್ ಸ್ಟಾರ್ಟರ್ಗಳು (9.50 ಲಕ್ಷ ರೂ.), ಒಂದು ರೋಟೇಟಿಂಗ್ ಸಿಸಿ ಕ್ಯಾಮೆರಾ (25 ಸಾವಿರ ರೂ.), ಒಂದು ಓಮ್ನಿ ಕಾರು (2 ಲಕ್ಷ ರೂ.) ಹಾಗೂ ಒಂದು ಹೀರೊ ಸ್ಪ್ಲೆಂಡರ್ ಪ್ಲಸ್ ಬೈಕ್ (50 ಸಾವಿರ ರೂ.) ಸೇರಿದಂತೆ ಒಟ್ಟು 12.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಸಿಪಿಐ ಹನುಮಂತರಾಯಪ್ಪ ಎಚ್.ಜಿ., ಪಿಎಸ್ಐ ಚಂದ್ರಶೇಖರ್ ಎಂ.ಎಸ್. ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


