ತುಮಕೂರು: 7ನೇ ವೇತನ ಆಯೋಗದ ಅವಧಿಯಲ್ಲಿ ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ನಿವೃತ್ತಿ ಸೌಲಭ್ಯ ನೀಡಿರುವುದನ್ನು ಖಂಡಿಸಿ ನಿವೃತ್ತ ನೌಕರರ ವೇದಿಕೆ ವತಿಯಿಂದ ನಗರದ ಬಾಲಭವನದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಎಂ.ಜಿ. ರಸ್ತೆಯಲ್ಲಿರುವ ಬಾಲಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ನಿವೃತ್ತ ನೌಕರರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ 7ನೇ ವೇತನ ಆಯೋಗದ ವರದಿಯಂತೆ ಸರ್ಕಾರಿ ನೌಕರರಿಗೆ ದಿನಾಂಕ: 01—08–2024 ರಿಂದ ಅನ್ವಯವಾಗುವಂತೆ ಆರ್ಥಿಕ ಸೌಲಭ್ಯವನ್ನು ಅನುಷ್ಠಾನಗೊಳಿಸಲು ಕ್ರಮವಹಿಸಿದೆ. ಆದರೆ 01–07–2022 ರಿಂದ ಕಾಲ್ವನಿಕ ವೇತನ ನಿಗದಿಪಡಿಸಿ 1—08–2024 ರಿಂದ ಆರ್ಥಿಕ ಸೌಲಭ್ಯ ನೀಡುವುದರಿಂದ 01—07–2022 ರಿಂದ 31—07–2024 ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ 6ನೇ ವೇತನದ ಮೂಲ ವೇತನಕ್ಕೆ ಡಿ.ಸಿ.ಆರ್.ಜಿ. ಕಮ್ಯುಟೇಷನ್ ಆಫ್ ಪೆನ್ಷನ್ ಮತ್ತು ಲೀವ್ ಎನ್ಕ್ಯಾಷ್ ಮೆಂಟ್ ಲೆಕ್ಕಾಚಾರ ಮಾಡುವುದರಿಂದ ಸುಮಾರು 8 ರಿಂದ 20 ಲಕ್ಷದವರೆಗೆ ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.
7ನೇ ವೇತನ ಆಯೋಗದ ವರದಿಯನ್ನು 25 ತಿಂಗಳ ನಂತರ ಅನುಷ್ಠಾನ ಮಾಡಿರುವುದರಿಂದ ಹಾಗೂ ಆರ್ಥಿಕ ಸೌಲಭ್ಯವನ್ನು 7ನೇ ವೇತನಕ್ಕೆ ಒಳಪಡುವ ನೌಕರರಿಗೆ ಆರ್ಥಿಕ ಸೌಲಭ್ಯ ನೀಡದೇ ಇರುವುದರಿಂದ ಸಂಧ್ಯಾ ಕಾಲದಲ್ಲಿರುವ ವಯೋ ನಿವೃತ್ತ ನೌಕರರಿಗೆ ಅನ್ಯಾವಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
2022ರ ಜುಲೈ 1 ರಿಂದ 2024ರ ಜುಲೈ 31 ರ ಅವಧಿಯಲ್ಲಿ ನಿವೃತ್ತಿ ಹಾಗೂ ಮರಣ ಹೊಂದಿದ ನೌಕರರಿಗೆ 7ನೇ ವೇತನದಲ್ಲಿ 2022ರ ಜುಲೈ 1 ರಿಂದ ನಿಗದಿಪಡಿಸಿದ ಹೊಸ ಮೂಲ ವೇತನಕ್ಕೆ ಲೆಕ್ಕಾಚಾರ ಮಾಡಿ ಮಹಾಲೇಖಾಪಾಲಕರಿಗೆ ಆದೇಶ ನೀಡುವುದರೊಂದಿಗೆ ನಿವೃತ್ತಿ ಉಪಧನ, ಪರಿವರ್ತಿತ ಪಿಂಚಣಿ ಮೌಲ್ಯ ಹಾಗೂ ನಿವೃತ್ತಿ ನಂತರದ ಗಳಿಕೆ ರಜಾ ನಗದೀಕರಣದ ಆರ್ಥಿಕ ಸೌಲಭ್ಯವನ್ನು ನೀಡುವಂತೆ ಮುಖ್ಯಮಂತ್ರಿಗಳನ್ನು ಪ್ರತಿಭಟನಾನಿರತ ನಿವೃತ್ತ ನೌಕರರು ಆಗ್ರಹಿಸಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ನಿವೃತ್ತ ನೌಕರರು ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ನೌಕರರ ವೇದಿಕೆಯ ಚಂದ್ರಶೇಖರ್, ಎಂ.ಆರ್. ಶಿವಣ್ಣ, ರಾಜಣ್ಣ, ವೆಂಕಟ ನಂಜಪ್ಪ, ಮುದ್ದಪ್ಪ, ಸಿದ್ದಯ್ಯ, ದಯಾನಂದ್, ಜಗದಾಂಬ, ನಾಗರಾಜು, ರಾಮಚಂದ್ರಪ್ಪ, ಶೇಖ್ಮಹಿದಿನ್, ಗಂಗಾಧರ್, ಸುಬ್ಬರಾಯಪ್ಪ ಸೇರಿದಂತೆ ಎಲ್ಲ ತಾಲ್ಲೂಕುಗಳ ನಿವೃತ್ತ ನೌಕರರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296