ಪಾವಗಡ: ವಿದ್ಯುತ್ ಆಘಾತದಿಂದ ಇಬ್ಬರು ಯುವಕರು ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಪಾವಗಡ ತಾಲ್ಲೂಕಿನ ಟಿ.ಎನ್.ಬೆಟ್ಟದ ಹೊರವಲಯದ ಸರ್ವೇ ನಂಬರ್ 293 ರ ಜಮೀನಿನಲ್ಲಿ ನಡೆದಿದೆ.
ಅನಿಲ್ ಕುಮಾರ್(29), ಪುಟ್ಟರಾಜು(35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ರೈತಾಪಿವರ್ಗದವರಾಗಿದ್ದಾರೆ.
ಸುಮಾರು 3 ಎಕರೆ ಜಮೀನಿನಲ್ಲಿ ಇವರು ಶೇಂಗಾ ಬಿತ್ತನೆ ಮಾಡಿದ್ದರು. ಕಾಡು ಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳಲು ಪ್ರತಿನಿತ್ಯ ಹೊಲಕ್ಕೆ ಬಂದು ನೀರು ಹಾಯಿಸುತ್ತಿದ್ದರು. ಶುಕ್ರವಾರ ರಾತ್ರಿಯೂ ಹೊಲಕ್ಕೆ ಬಂದಿದ್ದರು. ರಾತ್ರಿ ವಿಪರೀತ ಮಳೆ ಕೂಡ ಇತ್ತು. ಬೆಳಗ್ಗಿನ ವೇಳೆ ಇಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಹೊಲಕ್ಕೆ ತಂತಿಬೇಲಿ ಕಟ್ಟಿದ್ದರು. ಆದರೆ ವಿದ್ಯುತ್ ಸಂಪರ್ಕಕೊಟ್ಟಿರಲಿಲ್ಲ, ಈ ಹುಡುಗರು ನಮಗೆ ಗೊತ್ತಿಲ್ಲದೆ ವಿದ್ಯುತ್ ಸಂಪರ್ಕ ಕೊಟ್ಟಿದ್ದರೋ ಗೊತ್ತಿಲ್ಲ ಅಂತ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕೂಡಲೇ ಪಾವಗಡ ಅರಸೀಕೆರೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಮುಖ್ಯಪೇದೆ ಸಿದ್ದೇಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಅನಾಹುತದ ಮಾಹಿತಿ ಪಡೆದಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q