- ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮದಿಂದ ಸುಮಾರು ಅರ್ಧ ಮೈಲಿ ದೂರದಲ್ಲಿ ಕೊರಟಗೆರೆಗೆ ಮಾರ್ಗವಾಗಿದ್ದ ಪ್ಯಾಟೇದಾರಿಯ ಎಡ ಭಾಗದಲ್ಲಿ ಹತ್ತಿಮರದ ಬಳಿ ಜಯರಾಮಯ್ಯನವರ ಜಮೀನಿನಲ್ಲಿ ಶಿಲ್ಪ ನೆಡಲಾಗಿದೆ.
ಬ್ರಿಟೀಷ್ ಸರ್ವೆ ದಾಖಲೆಯ ಪ್ರಕಾರ ಇದು ಹಿಂದೆ ದೇಗುಲವಾಗಿತ್ತು ಎಂದು ತಿಳಿದುಬರುತ್ತದೆ. ಆದರೆ ಇಂದು ದೇಗುಲ ಪಾಳು ಬಿದ್ದಿದ್ದು ಬಳಸಿದ್ದ ಕಲ್ಲುಕಂಬಗಳು, ತೊಲೆಗಳು ಮತ್ತು ಚಪ್ಪಡಿಗಳು ಅಲ್ಲೇ ಬಿದ್ದಿವೆ. ಶಿಲ್ಪವು ಸುಮಾರು ಮೂರು ಅಡಿ ಎತ್ತರ ಮತ್ತು ಐದು ಅಡಿ ಅಗಲದ ಕಲ್ಲಿನಿಂದ ಮಾಡಲ್ಪಟ್ಟಿದೆ. ಮೇಲ್ಭಾಗದ ಇಕ್ಕೆಲದಲ್ಲಿ ಸೂರ್ಯಚಂದ್ರರ ಜೊತೆಗೆ ಎರಡು ರಂಧ್ರಗಳಿದ್ದು ವಿಜಯನಗರ ಕಾಲಘಟ್ಟ ಎಂದು ತಿಳಿಯಬಹುದು.
ಶಿಲ್ಪದಲ್ಲಿ ವ್ಯಕ್ತಿಯೋರ್ವ ಅಶ್ವಾರೂಢನಾಗಿದ್ದು ಬಲಗೈನಲ್ಲಿ ಭರ್ಜಿಯನ್ನು ಎಡಗೈನಲ್ಲಿ ಕುದುರೆಯ ಲಗಾಮನ್ನು ಹಿಡಿದಿದ್ದಾನೆ. ನೀಳಮುಡಿಯಿದ್ದು ಕರ್ಣಕುಂಡಲ, ಕಂಠಿಹಾರ, ತೋಳ್ಬಂದಿ, ಕೈಕಡಗ, ಕಾಲೊಂದಿಗೆ ಮುಂತಾದ ಆಭರಣಗಳಿಂದ ಅಲಂಕೃತಗೊಳಿಸಲಾಗಿದೆ. ಕುದುರೆ ಸವಾರನ ಮುಂದೆ ನಾಟ್ಯ ಭಂಗಿಯ ನರ್ತಕಿಯ ಶಿಲ್ಪವಿದೆ. ಭರತನಾಟ್ಯ ಶೈಲಿಯ ವಸ್ತ್ರವನ್ನು ಧರಿಸಿದ್ದಾಳೆ. ಒಂದು ಕೈಯಲ್ಲಿ ಕನ್ನಡಿಯನ್ನು ಹಿಡಿದಿದ್ದು ಮತ್ತೊಂದು ಕೈಯಲ್ಲಿ ಅಲಂಕಾರಿಕ ವಸ್ತುವಿರುವಂತಿದೆ. ಈಕೆಯ ಮುಡಿಯನ್ನು ನಾಟ್ಯದ ಭಂಗಿಯಲ್ಲೇ ಕಟ್ಟಲಾಗಿದೆ. ಸೇವಕನೊಬ್ಬ ಅಶ್ವಾರೂಢನಿಗೆ ಶ್ವೇತಛತ್ರವನ್ನು ಹಿಡಿದಿದ್ದಾನೆ. ಕೈಯಲ್ಲಿ ಹಿಡಿದಿರುವ ಭರ್ಜಿ ಮತ್ತು ಶ್ವೇತಛತ್ರದ ಶೈಲಿಯ ಪ್ರಕಾರ ಇದು ಕುಮಾರರಾಮನ ಸ್ಮಾರಕಶಿಲ್ಪ. ಕುದುರೆಯ ಮೇಲೆ ಕೂರಲು ಗೌನನ್ನು ಹಾಕಲಾಗಿದೆ, ಇದರ ಹೆಸರು ಬೊಲ್ಲ. ಹಾಗಾದರೆ ಕುಮಾರರಾಮನ ಮುಂದೆ ನಾಟ್ಯಭಂಗಿಯಲ್ಲಿರುವ ಮಹಿಳಾ ಶಿಲ್ಪ ಯಾರದ್ದು? ಕುಮಾರರಾಮನಿಗೂ ಆಕೆಗು ಏನು ಸಂಬಂಧ ಎಂದು ಕಾಡುತ್ತದೆ. ಕುಮಾರರಾಮನ ಜನಪದ ಕಾವ್ಯ ಮತ್ತು ಕತೆಗಳ ಪ್ರಕಾರ ಈತನನ್ನು ಇಬ್ಬರು ಮಹಿಳೆಯರು ಮೋಹಿಸುತ್ತಾರೆ. ಒಬ್ಬಳು ಮಲತಾಯಿಯಾದ ರತ್ನಜೆ, ಮತ್ತೊಬ್ಬಳು ಮಾತಂಗಿ. ಇವರಲ್ಲಿಬ್ಬರಲ್ಲಿ ಯಾರೋ ಒಬ್ಬರು ಕುಮಾರರಾಮನನ್ನು ತನ್ನತ್ತ ಸೆಳೆಯಲು ನಾಟ್ಯ ಮಾಡಿರುತ್ತಾರೆ. ಆ ದೃಶ್ಯದ ಸಲುವಾಗಿ ಈ ರೀತಿಯ ವೀರಗಲ್ಲನ್ನು ಖಂಡರಿಸಿರಬಹುದು.
ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗು ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವಂತೆ ಎಲ್ಲಿಯ ಕುಮ್ಮಟದುರ್ಗ! ಎಲ್ಲಿಯ ಗುಪ್ಪಟ್ಣ? ‘ಪರನಾರಿ ಸಹೋದರ’, ದೆಹಲಿ ಸುಲ್ತಾನರ ಮಿಂಡ’ ಎಂದು ಬಿರುದಾಂಕಿತನಾದ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮನ ಮರಣದ ನಂತರ ಆತನ ಅನುಯಾಯಿಗಳಾದ ನಾಯಕ ಸಮುದಾಯ ದಕ್ಷಿಣಕ್ಕೆ ವಲಸೆ ಬಂದು ಸುರಕ್ಷಿತ ಸ್ಥಳಗಳಲ್ಲಿ ನೆಲೆ ನಿಲ್ಲುತ್ತಾರೆ. ಹೀಗೆ ಬಂದವರು ತಾವು ನಿಂತ ಸ್ಥಳದಲ್ಲಿ ಪುನರ್ಜೀವನ ಕಟ್ಟಿಕೊಂಡು ಕಾಲಾನಂತರದಲ್ಲಿ ತಮ್ಮ ಸಮುದಾಯದ ರಾಜನನ್ನು ಸ್ಮರಿಸುವ ಸಲುವಾಗಿ ಶಿಲ್ಪಗಳನ್ನು ನೆಟ್ಟು ಆರಾಧಿಸಿಕೊಂಡು ಬಂದಿದ್ದಾರೆ. ಅಥವಾ ಈ ಸ್ಥಳದಲ್ಲಿ ಮೊದಲೇ ಇಲ್ಲಿದ್ದ ನಾಯಕ ಸಮುದಾಯ ಕುಮಾರರಾಮನ ಸ್ಮರಣೆಗಾಗಿ ನೆಟ್ಟಿರಬಹುದು. “ಹೆಸರಿಸುವಂತಹ ರಾಜವಂಶದಲ್ಲಿ ಹುಟ್ಟದಿದ್ದರೂ, ಗಮನಾರ್ಹವಾದ ರಾಜ್ಯವನ್ನು ನಿರ್ಮಾಣ ಮಾಡದಿದ್ದರೂ, ಜನರ ಗೌರವಕ್ಕೆ ಪಾತ್ರನಾದವನು, ಒಂದು ಜನಾಂಗದ ಕುಲದೈವವಾದವನು ಎಂದರೆ ಕುಮಾರರಾಮ” ಎಂದು ಡಾ.ಆರ್.ಶೇಷಶಾಸ್ತ್ರಿಯವರು ಅಭಿಪ್ರಾಯ ಪಟ್ಟಿದ್ದಾರೆ.
ಕೊರಟಗೆರೆ ತಾಲ್ಲೂಕಿನಲ್ಲಿ ಬರುವ ತೋವಿನಕೆರೆ, ದೊಡ್ಡಪಾಲನಳ್ಳಿ, ಬೈಚೇನಳ್ಳಿ ಹಾಗೂ ಅಗೇ ಮಾರ್ಗದಲ್ಲಿನ ಊರ್ಡಿಗೆರೆ ಬಳಿಯ ಬ್ಯಾತದಲ್ಲಿಯೂ ಕೂಡ ಕುಮಾರರಾಮನ ದೇವಾಲಯಗಳಿವೆ. ಇಲ್ಲೆಲ್ಲಾ ನಾಯಕ ಸಮುದಾಯವೇ ಹೆಚ್ಚು ಸಂಖ್ಯೆಯಲ್ಲಿರುವುದಲ್ಲದೇ ಇವರೇ ಪೂಜಾರರು ಕೂಡ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಬುಕ್ಕಪಟ್ಟಣದ ಕುಮಾರರಾಮನ ಶಿಲ್ಪವಿರುವ ಸ್ಥಳವು ಮೊದಲು ದೇಗುಲವಾಗಿತ್ತು ಎಂಬುದಕ್ಕೆ ಭೂದಾಖಲೆಗಳು ಇಂಬು ನೀಡುತ್ತವೆ.
ಕುಮಾರರಾಮನ ತಾಯಿಯಾದ ಹರಿಯಮ್ಮ ನಾಯಕರ ಗುಜ್ಜಲೋರು ಬೆಡಗಿನ ಮಗಳು. ಇಲ್ಲಿಯೂ ಕೂಡ ನಾಯಕ ಸಮುದಾಯ ಅಧಿಕವಾಗಿದ್ದು ಅದರಲ್ಲಿ ಗುಜ್ಜಲೋರು ಬೆಡಗಿನವರೇ ಬಹುಸಂಖ್ಯಾತರು. ಗುಜ್ಜಲೋರು ಬೆಡಗಿನವರಿಗೆ ಹರಿಯಮ್ಮ ಕುಲದೇವತೆಯೂ ಹೌದು. ಈಕೆಯನ್ನು ಗುಜ್ಜಲರಿಯಮ್ಮ ಎಂತಲೂ ಕೆರೆವರು. ಗುಜ್ಜಲೋರು ಬೆಡಗಿನ ನಾಯಕರು ಅಧಿಕವಾಗಿದ್ದು ತಮ್ಮ ಕುಲದೇವತೆಯಾದ ಗುಜ್ಜಲರಿಯಮ್ಮನ ಮಗನಾಗಿರುವ ಕುಮಾರರಾಮನ ತ್ಯಾಗ, ವೀರಾವೇಶ, ಬಲಿದಾನದ ಸಂಕೇತವಾಗಿ ಆತನ ಸ್ಮಾರಕಶಿಲ್ಪ ನೆಟ್ಟಿರುವಂತಿದೆ.
( ಕ್ಷೇತ್ರಕಾರ್ಯದಲ್ಲಿ ಜೊತೆಯಾಗಿ ಸಹಕಾರ ನೀಡಿದವರು ವಸಂತ್ ವಿ ವಜ್ರ )
ಆಕರ ಗ್ರಂಥಗಳು :-
೧. ಕರ್ನಾಟರದ ವೀರಗಲ್ಲುಗಳು – ಡಾ.ಆರ್.ಶೇಷಶಾಸ್ತ್ರಿ
೨. ಸರಳ ಕುಮಾರರಾಮ ಸಾಂಗತ್ಯ ಸಂಗ್ರಹ – ಡಾ.ಎಸ್.ಎಸ್.ಅಂಗಡಿ. ಕಾಂತರಾಜು ಗುಪ್ಪಟ್ಣ ಸಂಶೋಧಕರು. ಇತಿಹಾಸ