ಕೊರಟಗೆರೆ: ಕಾರ್ಯನಿರತರಾಗಿದ್ದ ಪತ್ರಕರ್ತರ ಮೇಲೆ ಹಲ್ಲೆ ಯತ್ನ ಮಾಡಿ, ಸುಳ್ಳು ಪ್ರಕರಣ ದಾಖಲಿಸಿದ ಕೊರಟಗೆರೆ ಸಾರ್ವಜನಿಕರ ಆಸ್ಪತ್ರೆಯ ಇ ಎನ್ ಟಿ ಡಾಕ್ಟರ್ ನವೀನ್ ಕುಮಾರ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ,ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಕಚೇರಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರಿನ ಮನವಿ ಪತ್ರ ನೀಡಿ ಪ್ರತಿಭಟಿಸಿದರು.
ರಸ್ತೆ ಅಪಘಾತ ಸಂಭವಿಸಿ ವಾಹನ ಸವಾರರು ಸಾವು ಬದುಕಿನ ನಡುವೆ ನರಳುತ್ತಿದ್ದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಂದಿರಲಿಲ್ಲ, ಆದರೂ ಸಾರ್ವಜನಿಕರ ಸಹಾಯದಿಂದ ಖಾಸಗಿ ವಾಹನದಲ್ಲಿ ಕೊರಟಗೆರೆಯ ಸಾರ್ವಜನಿಕ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿತ್ತು ಆಸ್ಪತ್ರೆಯಲ್ಲೇ ಇದ್ದ ವೈದ್ಯ ನವೀನ್ ಕುಮಾರ್ ವಿಶ್ರಾಂತಿ ಕೊಠಡಿಯಿಂದ ಹೊರ ಬಾರದೇ ಅಮಾನವೀಯತೆ ಮೆರೆದಿದ್ದರು. ಈ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಗತಿ ಟಿವಿ ವರದಿಗಾರ ಹರೀಶ್ ಬಾಬು ರವರ ಮೇಲೆ ಹಲ್ಲೆ ಯತ್ನ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪತ್ರಕರ್ತರಾದ ಪುರುಷೋತ್ತಮ್, ರಂಗಧಾಮಯ್ಯ ನರಸಿಂಹಮೂರ್ತಿ ರವರಿಗೆ ಬೆದರಿಕೆ ಹಾಕಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ ಘಟನೆ ನಡೆದಿತ್ತು.
ಈ ವಿಚಾರವಾಗಿ ಇಂದು ಬಿಎಸ್ಪಿ ಪಕ್ಷದ ಕಾರ್ಯಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಯತ್ನ ಮಾಡಿದ ಡಾಕ್ಟರ್ ನವೀನ್ ಕುಮಾರ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸೋಮವಾರ ಕೊರಟಗೆರೆಯ ಕನ್ನಡಪರ, ದಲಿತಪರ, ಪ್ರಗತಿಪರ ಮತ್ತು ಪತ್ರಕರ್ತರ ಸಂಘದ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಜಟ್ಟಿ ಅಗ್ರಹಾರ ನಾಗರಾಜು ಅಗ್ರಹಿಸಿದರು.
ನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ನಯಾಜ್ ಅಹ್ಮದ್, ಸಮವಸ್ತ್ರ ಧರಿಸದೆ, ಶತಸ್ಕೋಪ್ ಬಳಸದೆ, ಪ್ರಥಮ ಚಿಕಿತ್ಸೆಯನ್ನೂ ನೀಡದೇ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದ ಡಾಕ್ಟರ್ ನವೀನ್ ರವರನ್ನು ಕೂಡಲೇ ಪೊಲೀಸ್ ಇಲಾಖೆ ಬಂಧಿಸಬೇಕು ಮತ್ತು ರಾಜ್ಯ ಸರ್ಕಾರವು ಕೂಡಲೇ ವೈದ್ಯ ನವೀನ್ ರವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಪತ್ರಕರ್ತರ ಮೇಲೆ ಹಲ್ಲೆಯತ್ನ ಮಾಡಿದ ವೈದ್ಯನನ್ನು ವೃತ್ತಿಯಿಂದ ತಕ್ಷಣವೇ ವಜಾ ಮಾಡಿ ಪತ್ರಕರ್ತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy