ಕೊರಟಗೆರೆ: ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಆಡಳಿತ ಕಚೇರಿಯವರಿಗೆ ತಾಲ್ಲೂಕಿನ ಹಲವು ಗ್ರಾಮಿಣ ಭಾಗದ ರೈತರು ಮತ್ತು ಸಾರ್ವಜನಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟಿಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು..
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ರಾಮಣ್ಣ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸರ್ಕಾರಿ ಜಮೀನುಗಳನ್ನು ಸುಮಾರು 30 ರಿಂದ 40 ವರ್ಷಗಳಿಂದ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವ ಬಡ ಭೂ ರಹಿತರಿಗೆ ಅವರ ಸ್ವಾಧೀನ ಅನುಭವದಂತೆ ಬಗರ್ ಹುಕುಂ ಕಮಿಟಿಯಿಂದ ಸಾಗುವಳಿ ಮಂಜುರಾತಿಯನ್ನು ನೀಡಿ, ಸಾಗುವಳಿ ಪತ್ರವನ್ನು ಕೊಡಬೇಕು ಹಾಗೂ ಗ್ರಾಮೀಣ ಪ್ರದೇಶದ ವಸತಿ ಹೀನರ ಶೋಷಿತ ಸಮುದಾಯಗಳಿಗೆ ಮತ್ತು ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಿಗೆ ಹಾಗೂ ಅಂಗವಿಕಲರನ್ನು ಗುರುತಿಸಿ ಸರ್ಕಾರದ ವತಿಯಿಂದಲೇ ಭೂಮಿಯನ್ನು ಖರೀದಿಸಿ ವಸತಿ ಕಲ್ಪಿಸುವುದರೊಂದಿಗೆ ಮನೆಯನ್ನು ಕಟ್ಟಿಸಿ ಕೊಡಬೇಕೆಂದು ಸರ್ಕಾರಕ್ಕೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ವಿದ್ಯಾವಂತ ನಿರುದ್ಯೋಗಿ ಯುವ ಜನರಿಗೆ ಜೀವನ ನಿರ್ವಹಣೆಗಾಗಿ ರಾಜ್ಯದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ಬಗೆಹರಿಸಿ ಕೊಡಬೇಕು, ಸರ್ಕಾರಿ ಇಲಾಖೆಗಳಲ್ಲಿ ತುಂಬಾ ವರ್ಷಗಳಿಂದ ಬೇರೂರಿರುವಂತಹ ಅಧಿಕಾರಿಗಳನ್ನು ಸುಮಾರು 3 ವರ್ಷಗಳಿಗೊಮ್ಮೆ ಬೇರೆ ಕಡೆ ವರ್ಗಾವಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಇದರಿಂದ ಭ್ರಷ್ಟಚಾರ ಮತ್ತು ಲಂಚಕೋರ ಪದ್ಧತಿಯನ್ನು ಮತ್ತು ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಲು ಸೂಕ್ತವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಕೇಶವಮೂರ್ತಿ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ರುದ್ರಭೂಮಿಯನ್ನು ಮಂಜುರಾತಿ ಮಾಡಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಅಸಂಘಟಿತ ತಮಟೆ ಕಲಾವಿದರನ್ನು ಗುರುತಿಸಿ ಮಾಸಾಶಸನವನ್ನು ಶೀಘ್ರವಾಗಿ ನೀಡಬೇಕು. ಪ್ರತಿ ತಾಲೂಕುಗಳಲ್ಲಿ ಶೋಷಿತ ಮಹಿಳೆ ಮತ್ತು ಮಕ್ಕಳು ಹಾಗೂ ವೃದ್ಧರಿಗೆ ಸಂರಕ್ಷಣಾ ಕೇಂದ್ರ ಹಾಗೂ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಕೃಷಿ ಉತ್ಪನ್ನ ಆರೋಗ್ಯ ಸೇವೆ, ದೈನಂದಿನ ಕೌಟುಂಬಿಕ ಬಳಕೆಯ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಸೇವಾ ಶುಲ್ಕ ಮತ್ತು ಜಿ ಎಸ್ ಟಿ ಯನ್ನು ಕೂಡಲೇ ರದ್ದು ಪಡಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಶ್ರೀ ಸಿದ್ದೇಶ್ವರ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದ ಸಾಧು ಸಂತ ಶರಣರು ಗಂಗಾ ಆಧ್ಯಾತ್ಮಿಕ ವೇದಾಂತ ಆಶ್ರಮವನ್ನು ಸ್ಥಾಪಿಸಿದ್ದು, ಯೋಗ ಮತ್ತು ಧ್ಯಾನ ಕೇಂದ್ರ ಸ್ಥಾಪನೆಗೆ ಹಲವಾರು ವರ್ಷಗಳಿಂದ ಬೇಡಿಕೆಯನ್ನು ಇಟ್ಟಿದ್ದರು ಸಹ ಯಾವುದೇ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆಯೂ ವಿಫಲವಾಗಿರುತ್ತದೆ. ಆದ್ದರಿಂದ ಆಶ್ರಮ ನಡೆಸುವ ಆಧ್ಯಾತ್ಮಿಕ ಚಿಂತನೆಗೆ ಭೂ ಮಂಜೂರಾತಿಯನ್ನು ಮಾಡಬೇಕೆಂದು ಸಂತ ಶಿವ ಶರಣರು ಆಗ್ರಹಿಸಿದ್ದರು.
ದಲಿತ ಮುಖಂಡರುಗಳು ಮಾತನಾಡಿ, ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಅಬಕಾರಿ ಇಲಾಖೆಯವರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನಾ ರಾಜ್ಯ ಅಧ್ಯಕ್ಷ ಸತ್ಯಪ್ಪ ಮಧುಗಿರಿ, ಕ.ರಾ.ಭೂ.ವ.ರ.ಒಕ್ಕೂಟದ ರಾಜ್ಯಾಧ್ಯಕ್ಷ ಎಸ್ ಎಸ್ ಯೋಗಿ, ಪ್ರಧಾನ ಕಾರ್ಯದರ್ಶಿ ವೈ ಕೃಷ್ಣಪ್ಪ, ಕಲಾವಿದ ವಿಭಾಗದ ಜಿಲ್ಲಾಧ್ಯಕ್ಷ ಬಾಲಕೃಷ್ಣ ಗೊಲ್ಲಹಳ್ಳಿ,ತಾಲ್ಲೂಕು ಅಧ್ಯಕ್ಷ ದೊಡ್ಡಯ್ಯ ಬುಕ್ಕಪಟ್ಟಣ, ತಾಲ್ಲೂಕು ಸಮಿತಿ ಉಪಾಧ್ಯಕ್ಷ ಗಂಗಣ್ಣ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ರಾಜಣ್ಣ, ಅರಸಪುರ ರಮೇಶ್ ಸೇರಿದಂತೆ ದಲಿತ ಮುಖಂಡರುಗಳು ನೂರಾರು ರೈತರು ಮತ್ತು ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz