ಕೊರಟಗೆರೆ : ಬಡಜನರ ತುರ್ತು ಸೇವೆಗಾಗಿ ಸರಕಾರ ನೀಡಿರುವ ತುರ್ತುವಾಹನದ ನಿರ್ವಹಣೆ ವಿಫಲವಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುವಾಹನದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಬಡಜನರ ಆರೋಗ್ಯಕ್ಕೆ ತಕ್ಷಣ ರಕ್ಷಣೆ ನೀಡಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗ್ರಹಿಸಿದ್ದಾರೆ.
ಶನಿವಾರ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿರತೆ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವಯೋವೃದ್ದ ರೈತ ಮತ್ತು ಇಬ್ಬರು ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಂತರ ಚರ್ಚಿಸಿ ಮಾತನಾಡಿದರು.
ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ತುರ್ತುವಾಹನ, ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು ತುರ್ತುವಾಹನದ ಸೌಲಭ್ಯವಿದೆ. ತುರ್ತುವಾಹನ ಲಭ್ಯವಿದ್ದರೂ ಸಹ ಅಧಿಕಾರಿಗಳ ನಿರ್ವಹಣೆ ವಿಫಲತೆಯಿಂದ ಬಡಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಸಚಿವರು ತಕ್ಷಣ ತುರ್ತುಸೇವೆಯ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯ ಮಾಡಿದರು.
ಅಪಘಾತ ಆದಾಗ ತುರ್ತುವಾಹನ ಬರೋದಿಲ್ಲ. ಗರ್ಭೀಣಿಯರ ಹೆರಿಗೆ ವೇಳೆಯು ಸಹಾಯಕ್ಕೆ ತುರ್ತಾಗಿ ವಾಹನ ಸೀಗೋದಿಲ್ಲ. ಈಗ ಚಿರತೆ ದಾಳಿ ಆದಾಗಲೂ ತುರ್ತುವಾಹನ ಸೀಗದೇ ಖಾಸಗಿ ವಾಹನದಲ್ಲಿ ರೈತರು ಮತ್ತು ಮಕ್ಕಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ಮೌನವು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪ ಮಾಡಿದರು.
ಚಿರತೆ ದಾಳಿಯಿಂದ 4 ಜನರಿಗೆ ಗಾಯ..
ಐ.ಕೆ.ಕಾಲೋನಿಯ ಬಳಿಯ ಬಸ್ ನಿಲ್ದಾಣದ ಸಮೀಪ ಶ್ರೀನಿವಾಸ್(60), ರಾಜು(47) ಮೇಲೆ ಚಿರತೆ ದಾಳಿ ನಡೆಸಿದೆ. ನಂತರ ದನದ ಕೊಟ್ಟಿಗೆಯಲ್ಲಿ ಹಾಲು ಕರೆಯುತ್ತಿದ್ದ ಧನುಷ್(13), ಚೇತನ್(15) ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ. ಕಳೆದ ವಾರದಿಂದ ನಾಲ್ಕೈದು ಬಾರಿ ಚಿರತೆಯು ಕಾಣಿಸಿಕೊಂಡು ರೈತರನ್ನು ಭಯಗೊಳಿಸಿದೆ.
ತಹಶೀಲ್ದಾರ್ ನಾಹೀದಾ ಆಸ್ಪತ್ರೆಗೆ ಭೇಟಿ ನೀಡಿ ಚಿರತೆ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ಜನರ ಆರೋಗ್ಯವನ್ನು ವಿಚಾರಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸುತ್ತೇನೆ ಎಂದರು..
ಸ್ಥಳಕ್ಕೆ ಅರಣ್ಯ ಇಲಾಖೆಯ ಸುರೇಶ್, ಆರೋಗ್ಯ ಇಲಾಖೆಯ ಮುಖ್ಯಾಧಿಕಾರಿ ಪುಪ್ಪಲತಾ ಸೇರಿದಂತೆ ಇತರರು ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz