ಬೀದರ್: ನಾಗರ ಪಂಚಮಿ ಹಬ್ಬದ ಸಂಭ್ರಮದ ದಿನವೇ ದುರಂತವೊಂದು ಸಂಭವಿಸಿದ್ದು, ನೀರು ಪೂರೈಕೆ ಮಾಡಲು ತೆರಳಿದ್ದ ಗ್ರಾಮ ಪಂಚಾಯಿತಿ ವಾಟರ್ಮ್ಯಾನ್ ಹಾವು ಕಡಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ನಡೆದಿದೆ.
ಹುಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಲದಾಪಕಾ ಗ್ರಾಮದ ನಿವಾಸಿ ಭೀಮ ಮಾಧವರಾವ ಜಾಧವ್ (48) ಮೃತಪಟ್ಟ ದುರದೃಷ್ಟಕರ ವಾಟರ್ಮ್ಯಾನ್.
ಸೋಮವಾರ ನಾಗರ ಪಂಚಮಿ ಹಬ್ಬದ ದಿನದಂದು ಗ್ರಾಮದ ಹೊರವಲಯದ ಹಾಲಹಳ್ಳಿ ರಸ್ತೆಯಲ್ಲಿರುವ ಮಹಾದೇವ ಮಂದಿರದ ಸಮೀಪದ ಬೃಹತ್ ನೀರಿನ ಟ್ಯಾಂಕರ್ ಕೆಳಗೆ ನೀರು ಬಂದ್ ಮಾಡಲು ಭೀಮ ಜಾಧವ್ ತೆರಳಿದ್ದರು. ಈ ವೇಳೆ ಟ್ಯಾಂಕರ್ ಕೆಳಗೆ ಅಡಗಿದ್ದ ವಿಷಕಾರಿ ಹಾವು (ನಾಗರಹಾವು) ಅವರ ಕಾಲಿಗೆ ಕಚ್ಚಿದೆ. ಹಾವಿನ ತೀವ್ರ ವಿಷದ ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಗ್ರಾಮಕ್ಕೆ ನೀರು ಪೂರೈಸುವ ಬೃಹತ್ ನೀರಿನ ಟ್ಯಾಂಕರ್ ಕೆಳಭಾಗದಲ್ಲಿ ದಟ್ಟವಾಗಿ ಹುಲ್ಲು ಹಾಗೂ ಮುಳ್ಳಿನ ಕಂಟಿಗಳು ಬೆಳೆದಿದ್ದವು. ಈ ಕುರಿತು ಹುಲ್ಲು–ಗಂಟಿಗಳನ್ನು ಕಟಾವು ಮಾಡಿಸಿ ಜಾಗ ಶುಚಿಗೊಳಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಗ್ರಾಮ ಪಂಚಾಯಿತಿಯ ಈ ನಿರ್ಲಕ್ಷ್ಯವೇ ವಾಟರ್ಮ್ಯಾನ್ ಸಾವಿಗೆ ಕಾರಣ ಎಂದು ಸೋಲದಾಪಕಾ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹುಲಸೂರು ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ಪಂಡಿತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
