ಕೊರಟಗೆರೆ: ಕೊರಟಗೆರೆ ತಾಲೂಕಿನಲ್ಲಿ ಇತ್ತೀಚಿಗೆ ನೂತನವಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಟರಾಜ್ ಹಲವು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಶಿಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.
ತಾಲೂಕಿನಲ್ಲಿ ಇತ್ತೀಚೆಗೆ ಅನಿರೀಕ್ಷಿತ ಭೇಟಿ ಕೊಡುತ್ತಿರುವ ಬಿಇಒ ನಟರಾಜ್ ಇಂದು ಯಾವ ಶಾಲೆಗೆ ಬರಲಿದ್ದಾರೆ ಎಂದು ಶಿಕ್ಷಕರಿಗೆ ನಡುಕ ಹುಟ್ಟುತ್ತಿದೆ, ಯಾವುದೇ ಮಾಹಿತಿ ಇಲ್ಲದೆ ಬೆಳ್ಳಂಬೆಳ್ಳಗೆ ಶಿಕ್ಷಕರು ಶಾಲೆಗೆ ಬರುವ ಮುಂಚೆಯೇ ಶಾಲೆಯ ಮುಂದೆ ಹಾಜರಾಗುವ ಬಿಇಓ ನಟರಾಜ್ ಶಾಲೆಯ ಪೂರ್ಣ ವಾತಾವರಣವನ್ನು ಕಲೆಹಾಕಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಲು , ಸರ್ಪ್ರೈಸ್ ವಿಸಿಟ್ ನೀಡುವ ಮೂಲಕ ತಾಲೂಕಿನಲ್ಲಿ ಮಿಂಚಿನ ಸಂಚಲನವನ್ನೇ ಮೂಡಿಸಿದ್ದಾರೆ.
ಬಿಇಒ ನಟರಾಜ್ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಬದಲಾವಣೆ ತರಲು ಒಂದು ವಿಶಿಷ್ಟ ರೀತಿಯಲ್ಲಿ ಪ್ರಯೋಗ ಮಾಡುತ್ತಿದ್ದು, ಕೊರಟಗೆರೆ ತಾಲೂಕಿನಲ್ಲಿ ಹಲವು ಶಾಲೆಗಳಿಗೆ ಇತ್ತೀಚಿಗೆ ಸರ್ಪ್ರೈಸ್ ವಿಸಿಟ್ ನೀಡುವ ಮೂಲಕ ನಿಗದಿತ ಸಮಯಕ್ಕೆ ಹಾಜರಾಗದ ಶಿಕ್ಷಕರುಗಳಿಗೆ ಶಾಕ್ ನೀಡಿದ್ದು, ಜೊತೆಗೆ ಶಾಲೆಯನ್ನು ಮುಕ್ತಾಯ ಸಮಯಕ್ಕಿಂತ ಮುಂಚೆ ಹೊರಹೋಗುವ ಶಿಕ್ಷಕರಿಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಕೊರಟಗೆರೆ ತಾಲೂಕಿನ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಗೆ ಶಾಲೆಯ ಬೆಲ್ ಹೊಡೆಯುವುದಕ್ಕಿಂತ ಮುಂಚೆಯೇ ಶಾಲೆಯ ಮುಂದೆ ಪ್ರತ್ಯಕ್ಷರಾಗಿದ್ದಾರೆ, ಇನ್ನು ಹಲವು ಶಿಕ್ಷಕರು ಶಾಲೆಗೆ ಆಗಮಿಸುವ ಮುಂಚೆ ಶಾಲೆಯ ಕೊಠಡಿಯಲ್ಲಿ ಕುಳಿತು, ಶಾಲೆಯ ವಾತಾವರಣವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಲ್ಲದೆ, ತಾವೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕರಂತೆ ಚಾಕ್ ಪೀಸ್ ಹಿಡಿದು ಅರ್ಧ ತಾಸಿಗೂ ಹೆಚ್ಚು ಕಾಲ ಪಾಠ ಪ್ರವಚನದ ಜೊತೆಗೆ ಶಿಸ್ತು ಬದ್ಧ ಜೀವನ, ಮುಂದಿನ ಕೆಲವೇ ದಿನಗಳಲ್ಲಿ ಬರಲಿರುವ ಪರೀಕ್ಷೆಯಲ್ಲಿ ಯಾವ ರೀತಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸಬೇಕು ಎಂಬುದನ್ನು ಹೇಳಿ ಹುರಿದುಂಬಿಸಿದರು.
ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಲಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರೌಢಶಾಲಾ ಮಕ್ಕಳಿಗೆ ಪ್ರಾರ್ಥನಾ ಸಂದರ್ಭದಲ್ಲಿಯೇ ವಿದ್ಯಾರ್ಥಿ ಜೀವನದ ಮೌಲ್ಯವನ್ನು, ಶಿಸ್ತು ಬದ್ಧ ಜೀವನವನ್ನು ರೂಪಿಸಿಕೊಳ್ಳಲು ನೀತಿ ಪಾಠ ಹೇಳಿದರು,
ನಂತರ ಶಿಕ್ಷಕರುಗಳಿಗೆ 5 ನಿಮಿಷಗಳ ಕಾಲ ಪ್ರತ್ಯೇಕವಾಗಿ ಮೀಟಿಂಗ್ ನಡೆಸಿ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರಬೇಕು, ಶಾಲೆಯ ವಾತಾವರಣವನ್ನು ತುಂಬಾ ವ್ಯವಸ್ಥಿತವಾಗಿ ನಿರ್ವಹಿಸಲು ಕಿವಿ ಮಾತು ಹೇಳಿದ್ದಲ್ಲದೆ ಯಾವುದೇ ಲೋಪ ಅಥವಾ ಆರೋಪಗಳು ಕೇಳಿ ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


