ಡಾ.ಜಿ.ಪರಮೇಶ್ವರ್ ಗೆ ಕೊರಟಗೆರೆ ಕ್ಷೇತ್ರದಲ್ಲಿ ಸೋಲಿನ ಭಯ ಕಾಡ್ತಿದೆ. ಅದಕ್ಕಾಗಿಯೇ ನಮ್ಮ ವೀರಶೈವ–ಲಿಂಗಾಯಿತ ಸಮಾಜದ ಸಮಾವೇಶ ಮಾಡ್ತಾ ಇದ್ದಾರೆ. ಕೊರಟಗೆರೆ ವೀರಶೈವ–ಲಿಂಗಾಯಿತರ ನಡೆ ಪರಮೇಶ್ವರ್ ಕಡೆ ಸಮಾವೇಶಕ್ಕೆ ನಮ್ಮ ಸಮಾಜದ ಮುಖಂಡರು ಬರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರೈತಮೋರ್ಚ ಜಿಲ್ಲಾಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ ತಿಳಿಸಿದರು.
ಕೊರಟಗೆರೆ ಪಟ್ಟಣದ ಕಾಮಧೇನು ಭವನದಲ್ಲಿ ಕೊರಟಗೆರೆ ವೀರಶೈವ ಲಿಂಗಾಯಿತ ಸಮುದಾಯದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ವೀರಶೈವ ಮತ್ತು ಲಿಂಗಾಯಿತ ಸಮುದಾಯ ಬೇರ್ಪಡಿಸುವ ಕೆಲಸವನ್ನು ಸಿದ್ದರಾಮಯ್ಯ ಸರಕಾರ ಮಾಡಿತ್ತು. ನಮ್ಮ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿರುವ ಬೊಮ್ಮಾಯಿ ನೇತೃತ್ವದ ಬಿಜೆಪಿ ಪಕ್ಷದ ಪರವಾಗಿಯೇ ವೀರಶೈವ ಲಿಂಗಾಯಿತ ಸಮುದಾಯ ಇರಲಿದೆ. ಕೊರಟಗೆರೆ ಕ್ಷೇತ್ರದಲ್ಲಿ ಅತೀ ಶೀಘ್ರದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಬೃಹತ್ ಸಮಾವೇಶ ಏರ್ಪಡಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಯುವಮೋರ್ಚ ರಾಜ್ಯಕಾರ್ಯ ಕಾರಣಿ ಸದಸ್ಯ ರುದ್ರೇಶ್ ಮಾತನಾಡಿ, ವೀರಶೈವ ಲಿಂಗಾಯಿತ ಸಮಾಜವು ಬಿಜೆಪಿ ಸರಕಾರದ ಪರವಾಗಿಯೇ ಇದೆ. ನಮ್ಮ ಸಮಾಜಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಅನ್ಯಾಯ ಆಗಿದೆ. ಚುನಾವಣೆಗೆ ಮಾತ್ರ ಸೀಮಿತವಾದ ಕಾಂಗ್ರೆಸ್ ಸಮಾವೇಶ ಮತದಾರನ ಸೆಳೆಯುವ ಪ್ರಯತ್ನವಷ್ಠೆ. ಸಮಾಜದ ಮುಖಂಡರು ಯಾರು ಸಮಾವೇಶಕ್ಕೆ ಹೋಗದೇ ಬಿಜೆಪಿ ಪಕ್ಷದ ಪರವಾಗಿಯೇ ಇರಬೇಕಿದೆ ಎಂದು ಮನವಿ ಮಾಡಿದರು.
ಕೊರಟಗೆರೆ ಲಿಂಗಾಯಿತ ಸಮಾಜದ ಮುಖಂಡ ಶಿವರುದ್ರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಲಿಂಗಾಯಿತ ಸಮಾಜಕ್ಕೆ ಅನ್ಯಾಯ ಮಾಡಿದೆ. ಕಳೆದ 5 ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಜನರ ಮೇಲೆ ಜಾತಿನಿಂದನೆ ಪ್ರಕರಣ ಹೆಚ್ಚಾಗಿ ದಾಖಲಾಗಿವೆ. ಕಾಂಗ್ರೆಸ್ ಪಕ್ಷ ವೀರಶೈವ–ಲಿಂಗಾಯಿತ ಸಮುದಾಯವನ್ನ ಒಡೆಯುವ ಕೆಲಸವನ್ನು ಮಾಡಿದೆ. ಬಿಜೆಪಿ ಪಕ್ಷದಿಂದ ಮಾತ್ರ ರಕ್ಷಣೆ ಸಾಧ್ಯ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ನಟರಾಜ್, ರೈತಮೋರ್ಚ ಅಧ್ಯಕ್ಷ ಮುಕ್ಕಣ್ಣಯ್ಯ, ಪ.ಪಂ. ಸದಸ್ಯ ಪ್ರದೀಪ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಉಮೇಶ್ಚಂದ್ರ, ಮುಖಂಡರಾದ ಚಂದ್ರಪ್ಪ, ಆರಾಧ್ಯ, ಶ್ರೀಧರ್, ಶಿವಕುಮಾರ್, ದಯಾನಂದ, ರವಿಕುಮಾರ್, ನಂಜಾರಾಧ್ಯ, ವೀರಭದ್ರಯ್ಯ, ಗಂಗಾಧರ್, ಬಸವರಾಜು, ನಂಜಪ್ಪ, ರಾಜಕುಮಾರ್, ರಾಜೇಂದ್ರ ಸೇರಿದಂತೆ ಇತರರು ಇದ್ದರು.
ವರದಿ : ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy