ತಿಪಟೂರು: ಮತದಾರರ ಪಟ್ಟಿಯ ಶುದ್ಧೀಕರಣಕ್ಕೆ ವಿರೋಧವಿಲ್ಲ. ಆದರೆ ವಿಶೇಷ ತೀವ್ರ ಪರಿಷ್ಕರಣೆ (ಎಸ್ಇಆರ್) ಪ್ರಕ್ರಿಯೆ ಜಾರಿಯಾಗುತ್ತಿರುವ ವಿಧಾನದಿಂದ ಕೋಟ್ಯಂತರ ಅರ್ಹ ನಾಗರಿಕರ ಮತದಾನದ ಹಕ್ಕು ಕಸಿದುಕೊಳ್ಳುವ ಅಪಾಯ ಎದುರಾಗಿದೆ ಎಂದು ಜಾಗೃತ ಕರ್ನಾಟಕದ ಡಾ. ಹೆಚ್.ವಿ. ವಾಸು ಆತಂಕ ವ್ಯಕ್ತಪಡಿಸಿದರು.
ಗಾಂಧಿ ನಗರದ ಮಸ್ಜಿದ್—ಎ–ಮಹಾಜರೀನ್, ಜನಸ್ಪಂದನ ಟ್ರಸ್ಟ್ ಹಾಗೂ ಸೌಹಾರ್ದ ತಿಪಟೂರು ಸಹಯೋಗದಲ್ಲಿ ಎಸ್ ಇಆರ್ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೂನ್ 30 ರಿಂದ ಮನೆ ಮನೆಗೆ ಅಧಿಕಾರಿಗಳು ತೆರಳಿ, ಎಸ್ ಇಆರ್ ಅರ್ಜಿಗಳನ್ನು ವಿತರಿಸಲಿದ್ದಾರೆ. ಈ ಹಿಂದೆ ಎಷ್ಟು ಬಾರಿ ಮತ ಚಲಾಯಿಸಿದ್ದವರೂ ಸೇರಿದಂತೆ, ಎಲ್ಲರೂ ಮತ್ತೆ ದಾಖಲೆಗಳನ್ನು ಸಲ್ಲಿಸಿ, ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಮತದಾನದ ಹಕ್ಕು ದೀರ್ಘ ಹೋರಾಟದ ಫಲವಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲಾ ಸಮುದಾಯಗಳ ತ್ಯಾಗದ ಪ್ರತಿಫಲವಾಗಿ ಸಂವಿಧಾನ ಜಾರಿಗೆ ಬಂದ ಮೊದಲ ದಿನದಿಂದಲೇ ಸಾರ್ವತ್ರಿಕ ಮತದಾನದ ಹಕ್ಕು ನೀಡಲಾಗಿದೆ. ಮಹಿಳೆಯರು, ದಲಿತರು, ಆದಿವಾಸಿಗಳು, ಅಲೆಮಾರಿ ಸಮುದಾಯಗಳು ಹಾಗೂ ಅಲ್ಪಸಂಖ್ಯಾತರು ದಾಖಲೆಗಳ ತಾಂತ್ರಿಕ ಸಮಸ್ಯೆಯಿಂದ ಮತದಾನದ ಹಕ್ಕು ಕಳೆದುಕೊಳ್ಳುವಂತಾಗಬಾರದು ಎಂದರು.
ಮೃತಪಟ್ಟವರ ಹಾಗೂ ವಿದೇಶಿ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಅಗತ್ಯವೇ ಸರಿ. ಆದರೆ ಅನರ್ಹರನ್ನು ಹೊರಗಿಡುವ ಹೆಸರಿನಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದ ಸುಮಾರು 14 ರಾಜ್ಯಗಳಲ್ಲಿ ಈಗಾಗಲೇ ಆರು ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅವರಲ್ಲಿ ಬಹುಪಾಲು ಜೀವಂತ ನಾಗರಿಕರೇ ಆಗಿದ್ದಾರೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
| ಡಾ.ಹೆಚ್.ವಿ.ವಾಸು, ಜಾಗೃತ ಕರ್ನಾಟಕ.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ (ಟೂಡಾ) ಮಾತನಾಡಿ, ಮತದಾನದ ಹಕ್ಕಿನ ಸಂರಕ್ಷಣೆಗಾಗಿ ಬೂತ್ ಮಟ್ಟದ ಏಜೆಂಟ್ಗಳು ಮಹತ್ವದ ಪಾತ್ರ ವಹಿಸಬೇಕಿದ್ದು, ಮೊದಲು ತಮ್ಮ ಮನೆಯವರು ಹಾಗೂ ನೆರೆಹೊರೆಯವರ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಪರಿಶೀಲಿಸಿ, ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು. ಸರ್ಕಾರ ಅಥವಾ ಚುನಾವಣಾ ಆಯೋಗವೇ ಎಲ್ಲವನ್ನೂ ಮಾಡುತ್ತದೆ ಎಂದು ಕಾಯದೆ ನಾಗರಿಕರು ಸ್ವತಃ ಎಚ್ಚರಿಕೆ ವಹಿಸಬೇಕಾಗಿದೆ. ಬೆರಳೆಣಿಕೆಯ ಅನರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಉದ್ದೇಶದಿಂದ ಕೋಟ್ಯಂತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದನ್ನು ಈ ದೇಶದ ಕಾನೂನು ಒಪ್ಪುವುದಿಲ್ಲ.
ಅರಿವು ಕಾರ್ಯಕ್ರಮದಲ್ಲಿ ಜಾಗೃತ ಕರ್ನಾಟಕದ ಆದಂ ಖಾನ್ ಎಸ್ಇಆರ್ ಪ್ರಕ್ರಿಯೆ ಕುರಿತು, ಪ್ರೊಜೆಕ್ಟರ್ ಮೂಲಕ ಪರದೆಯ ಮೇಲೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಿಐಟಿಯು ಮುಖಂಡ ಎನ್.ಕೆ.ಸುಬ್ರಹ್ಮಣ್ಯ, ಹಜ್ರತ್ ಫಾರೂಕ್, ಜಲೀಲ್, ಸೌಹಾರ್ದದ ಅಲ್ಲಾಬಕಾಶ್, ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ನಗರಸಭೆ ಮಾಜಿ ಸದಸ್ಯ ಮಹಮದ್ ಗೌಸ್ ಮತ್ತು ಸೈಯದ್ ಸಾದತ್ ಸೇರಿದಂತೆ ಮಸೀದಿಯ ಮುತವಲ್ಲಿಗಳು, ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




