ನಾನು ಸಚಿವನಾದ ಬಳಿಕ ದೆಹಲಿಗೆ ಅಧಿಕೃತ ಭೇಟಿ ನೀಡಿದ್ದು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನೀರು ಶುದ್ದೀಕರಿಸಿ ಕೋಲಾರ ಭಾಗಕ್ಕೆ ನೀಡುತ್ತಿರುವುದನ್ನು ಪ್ರಶ್ನಿಸಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. ಇದರಲ್ಲಿ ಟ್ರಿಬ್ಯೂನಲ್ ರಚನೆಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ಜುಲೈ 5ರ ಒಳಗಾಗಿ ಇದನ್ನು ಸ್ಥಾಪಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.
ನಾನು ಈ ಹಿಂದೆ ನೀರಾವರಿ ಸಚಿವನಾಗಿ ನಂತರ ಕೊಳಚೆ ನೀರು ಶುದ್ದೀಕರಣ ಮಾಡಿ ಅದನ್ನು ಬೇರೆ ಪ್ರದೇಶಗಳಿಗೆ ನೀಡಲಾಗಿತ್ತು. ಇನ್ನು ವೃಷಭಾವತಿ ಕಲುಷಿತ ನೀರು ಪರಿಷ್ಕರಿಸಿ ಅದನ್ನು ಕೆರೆ ತುಂಬಿಸಲಾಗಿತ್ತು. ನಮ್ಮ ಈ ಕೆಲಸವನ್ನು ಕೇಂದ್ರ ಸರ್ಕಾರ ಕೂಡ ಪ್ರಶಂಸೆ ಮಾಡಿತ್ತು. ಆದರೆ ಈಗ ತಮಿಳುನಾಡು ತಕರಾರು ಎತ್ತಿದ್ದು, ಜುಲೈ 5ರ ಒಳಗಾಗಿ ನ್ಯಾಯಾಧೀಕರಣ ರಚನೆಗೆ ಆದೇಶ ನೀಡಿದೆ.
ನಾವು ಈಗಾಗಲೇ 500mcft ಶೇಖರಣೆಯ ಮಾರ್ಕಂಡೇಯ ಯೋಜನೆ, ವರ್ತೂರು ಟ್ಯಾಂಕ್, ನರಸಾಪುರ ಯೋಜನೆ ಕೈಗೆತ್ತಿ ಕೊಂಡಿದ್ದೇವೆ. ಈ ವಿಚಾರವಾಗಿ ನ್ಯಾಯಾಧೀಕರಣ ರಚನೆ ಬೇಡ. ನಾವು ಕೂತು ಸಮಸ್ಯೆ ಬಗೆಹರಿಸಿಕೊಳ್ಳೋಣ. ದಿನನಿತ್ಯ ಈ ವಿಚಾರವಾಗಿ ಎರಡು ರಾಜ್ಯಗಳು ಸಂಘರ್ಷ ಮಾಡಿಕೊಳ್ಳುವುದು ಬೇಡ ಎಂದು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ.
ಕೃಷ್ಣಾ ಮೇಲ್ದಂಡೆ ಯೋಜನೆ ಗೆಜೆಟ್ ಅಧಿಸೂಚನೆ ಬಗ್ಗೆ ನಾನು ಕೇಂದ್ರ ಸಚಿವರ ಗಮನ ಸೆಳೆದಿದ್ದೇನೆ.
ಮಹದಾಯಿ ವಿಚಾರವಾಗಿ ಪರಿಸರ ಇಲಾಖೆಗೆ ಅನುಮತಿ ಸಿಕ್ಕಿಲ್ಲ. ಎಲ್ಲೆಲ್ಲಿ ನದಿ ಹರಿಯುತ್ತದೆಯೋ ಅಲ್ಲಿ ಕಾಡು ಇದ್ದೇ ಇರುತ್ತದೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುತ್ತೇನೆ. ಜಲಶಕ್ತಿ ಸಚಿವಾಲಯದಿಂದ ಅನುಮತಿ ಸಿಕ್ಕಿದ್ದು, ಅರಣ್ಯ ಇಲಾಖೆಯಲ್ಲಿ ನಿಂತಿದೆ. ಇಲ್ಲಿ ಅನುಮತಿ ಸಿಕ್ಕರೆ ಕಳಸಾ ಬಂಡೂರಿ ಯೋಜನೆ ಜಾರಿ ಆಗಲಿದೆ.
ಮೇಕೆದಾಟು ವಿಚಾರವಾಗಿ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿದೆ. ಯೋಜನೆ ತಡವಾದಷ್ಟು ರಾಜ್ಯಕ್ಕೆ ನಷ್ಟ ಹೆಚ್ಚು. ಈ ಮಧ್ಯೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ. ಕಾವೇರಿ ನೀರನ್ನು ನಾವು ಹೆಚ್ಚಾಗಿ ಬಳಸಲು ಸಾಧ್ಯವಿಲ್ಲ. ಕಾರಣ ಇದರ ಬೀಗ ಕೇಂದ್ರದ ಬಳಿ ಇದೆ. ಅದು ಅವರಿಗೂ ಗೊತ್ತಿದೆ. ಆದರೂ ಈ ವಿಚಾರವಾಗಿ ಅವರಿಗೆ ಮನದಟ್ಟು ಮಾಡಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


