ಬೆಂಗಳೂರು: ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಸರ್ವ ಸಂಘಟನೆಗಳು ನಡೆಸಿದ ಕಾವೇರಿ ಹೋರಾಟದ ಜಾಗೃತಿ ಸಭೆಯಲ್ಲಿ ಸೆಪ್ಟೆಂಬರ್ 26ಕ್ಕೆ ಬೆಂಗಳೂರು ಬಂದ್ ಘೋಷಿಸಲಾಗಿದೆ. ಕಾವೇರಿ ನದಿ ಭಾಗದ ಎಲ್ಲ ಜಿಲ್ಲೆಯ ಜನರು ಬೆಂಗಳೂರು ಬಂದ್ಗೆ ಬೆಂಬಲಿಸುವಂತೆ ಕರೆ ನೀಡಲಾಗಿದೆ.
ಕುಡಿಯುವ ನೀರಿನ ಅಗತ್ಯತೆ ಅರಿಯದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಅವೈಜ್ಞಾನಿಕ ಆದೇಶ ಖಂಡಿಸಲು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ, ಮತ್ತಿತರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಒಟ್ಟಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಕಾವೇರಿ ಹೋರಾಟದ ಜಾಗೃತಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧಕ್ಷ ಮುಖ್ಯಮಂತ್ರಿ ಚಂದ್ರು, ಮೇಕೆದಾಟು ಯೋಜನೆ ಜಾರಿಗೆ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೀರಲ್ಲಾ ಏನು ಕಡಿದು ಕಟ್ಟೆ ಹಾಕಿದ್ದೀರಾ, ಮೇಕೆದಾಟು ಯೋಜನೆ ಯಾಕೆ ಪ್ರಾರಂಭಿಸಿಲ್ಲ, ಇದರ ಬದಲಾಗಿ ನೀವು ಎಲ್ಲಿದ್ದೀರಿ ಎಂದು ನಮಗೆ ಪ್ರಶ್ನೆ ಮಾಡ್ತೀರಾ? ಅಧಿವೇಶನ ಕರೆದು ನೀರು ಬಿಡಲ್ಲ ಎಂದು ನಿರ್ಣಯ ಮಾಡಿ, ಸುಪ್ರೀಂಕೋರ್ಟ್ಗೂ ವಿಚಾರ ತಿಳಿಸಿ, ಕೋರ್ಟ್ ಛೀಮಾರಿ ಹಾಕಬಹುದು, ಜೈಲಿಗೆ ಹಾಕಬಹುದು, ಏನೇನಕ್ಕೋ ಜೈಲಿಗೆ ಹೋಗ್ತಿರಾ ರಾಜ್ಯದ ಹಿತಕ್ಕಾಗಿ ಜೈಲಿಗೆ ಹೋಗಲು ಆಗಲ್ಲವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ನಾಡು, ನುಡಿ, ಜನ ರಕ್ಷಣೆ ಬಂದಾಗ ಆಮ್ ಆದ್ಮಿ ಪಕ್ಷ ಬೇಧಬಾವ ಇಲ್ಲದೆ ಹೋರಾಟ ಮಾಡುತ್ತದೆ. ಒಂದು ಕೋಟಿಗೂ ಹೆಚ್ಚು ಜನ ಬೆಂಗಳೂರಿನಲ್ಲಿದ್ದು, ಬೆಂಗಳೂರಿಗೆ 1450 ಎಂಎಲ್ಡಿ ನೀರು ಬೇಕು. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 150 ಲೀಟರ್ ನೀರು ಬೇಕು. ಆದರೆ, ಈಗ 108 ಲೀಟರ್ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ತಮಿಳುನಾಡಿಗೆ ನೀರು ಬಿಟ್ಟರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆಯಾಗಲಿದೆ. ಇಷ್ಟು ವರ್ಷ ಅಧಿಕಾರ ನಡೆಸಿದ ಮೂರು ಪಕ್ಷಗಳು, ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿವೆ. ನಿಮಗೆ ನಾಡಿನ ಹಿತ ಕಾಪಾಡುವ ಬದ್ಧತೆ ಇಲ್ಲವಾ ಎಂದು ಪ್ರಶ್ನಿಸಿದರು.


