ನಾನು ನೀಲಿ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೆ ಎಂದು ಆರೋಪ ಮಾಡಿರುವ ಕುಮಾರಣ್ಣ ಬುದ್ದಿ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ನಾನು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಟೂರಿಂಗ್ ಟಾಕೀಸ್ ಗಳನ್ನು ಇಟ್ಟಿದ್ದೇ. ಒಂದಲ್ಲ ಮೂರ್ನಾಲ್ಕು ಕಡೆ ಟೆಂಟ್ಗಳನ್ನು ಇಟ್ಟಿದ್ದೆ. ದೊಡ್ಡಆಲಹಳ್ಳಿ, ಹಾರೋಬೆಲೆ, ಕೋಡಿಹಳ್ಳಿಗಳಲ್ಲಿ ನಡೆಸುತ್ತಿದ್ದೆ. ಹುಣಸೇಹಳ್ಳಿಯಲ್ಲಿ ಈಗಲೂ ಟೆಂಟ್ ಇದೆ. ಈ ಊರುಗಳಿಗೆ ಹೋಗಿ ಮಾದ್ಯಮದವರೇ ಸಮೀಕ್ಷೆ ನಡೆಸಿ, ನಾನು ಯಾವ ಚಿತ್ರಗಳ ಪ್ರದರ್ಶನ ಮಾಡಿಸುತ್ತಿದ್ದೆ ಎಂದು ಜನರ ಬಳಿ ಕೇಳಿ. ಕುಮಾರಸ್ವಾಮಿ ಅವರಿಗೆ ನೀವೆ ಉತ್ತರಿಸಿ ಎಂದರು.
ಕುಮಾರಸ್ವಾಮಿ ಪದೇ, ಪದೇ ನಿಮ್ಮ ಮೇಲೆ ಸರಣಿ ಆರೋಪಗಳನ್ನು ಮಾಡುತ್ತಿರುವುದರ ಹಿಂದಿನ ಕಾರಣವೇನು ಎಂದು ಕೇಳಿದಾಗ “ಅವರು ದೊಡ್ಡವರು, ಏನೇ ಹೇಳಿದರು ನಾವು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಬಳಸುತ್ತಾರೆ ಎಂದು ನಾನು ಏಕವಚನ ಬಳಸುವುದಿಲ್ಲ ಎಂದರು.


