ತುಮಕೂರು: ದಲಿತ ಸಮುದಾಯದ ವ್ಯಕ್ತಿಯನ್ನು ಜಮೀನು ದುರಸ್ತಿ ಮಾಡಿಕೊಡದೇ ಅಲೆದಾಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಸಿದ್ದೇಶ್ ಹಾಗೂ ಇನ್ನಿತರರ ವಿರುದ್ಧ ಪೊಲೀಸ್ ಉಪಾಧೀಕ್ಷಕ ಅವರಿಗೆ ದೂರು ನೀಡಲಾಗಿದ್ದರೂ, ದೂರು ನೀಡಿ 12 ದಿನಗಳಾದರೂ ಎಫ್ ಐಆರ್ ದಾಖಲಿಸದ ಹಿನ್ನೆಲೆಯಲ್ಲಿ ಮಂಗಳವಾರ(ನವೆಂಬರ್ 28) ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಹಕಾರೊಂದಿಗೆ ನೊಂದ ಯಲ್ಲಪ್ಪ ಕುಟುಂಬವು ಎಸ್ ಪಿ ಕಚೇರಿಯಲ್ಲಿ ಮತ್ತೆ ದೂರು ದಾಖಲಿಸಿದೆ.
ಗೌರಿಪುರ ಸರ್ವೇ ನಂಬರ್ 5ರಲ್ಲಿ ಸರ್ಕಾರವು 1988ರಲ್ಲಿ ತನ್ನ ಹೆಸರಿಗೆ ಸಾಗುವಳಿ ಪತ್ರ ನೀಡಿ 1.16 ಎಕರೆ ಜಮೀನು ಮಂಜೂರು ಮಾಡಿತ್ತು. ಇದೇ ಸರ್ವೇ ನಂಬರ್ ನಲ್ಲಿ ಇತರೆ ಹಿಡುವಳಿದಾರರ ಹೆಸರು ಜಂಟಿ ಪಹಣಿಯಲ್ಲಿ ನಮೂದಾಗಿದ್ದು, ಇದುವರೆಗೂ ತನ್ನ ಜಮೀನು ದುರಸ್ತಿಯಾಗಿರುವುದಿಲ್ಲ. ಸರಿಪಡಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮಕೈಗೊಳ್ಳದೇ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಅಲೆದಾಡಿಸುತ್ತಿದ್ದರು. ಆದ್ದರಿಂದ ತುಮಕೂರು ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ಇತರರ ವಿರುದ್ಧ ಯಲ್ಲಪ್ಪ ಅವರು ಪೊಲೀಸ್ ಉಪಾಧೀಕ್ಷಕ ಚಂದ್ರಶೇಖರ್ ಅವರಿಗೆ ದೂರು ನೀಡಿದ್ದರು. ಆದ್ರೆ, ದೂರು ನೀಡಿ 12 ದಿನಗಳಾದರೂ ಎಸ್ ಸಿ—ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಡಿಎಸ್ ಪಿ ಚಂದ್ರಶೇಖರ್ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ನೊಂದ ಕುಟುಂಬ ಭೂಮಿಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಹಕಾರೊಂದಿದಿಗೆ ನೊಂದ ಯಲ್ಲಪ್ಪ ಕುಟುಂಬವು ತುಮಕೂರು ಎಸ್ ಪಿ ಅವರನ್ನು ಭೇಟಿ ಮಾಡಲು ತೆರಳಿದ್ದರು. ಆದ್ರೆ ಎಸ್ ಪಿ ಅವರು ಕಚೇರಿಯಲ್ಲಿ ಲಭ್ಯವಿರದ ಹಿನ್ನೆಲೆಯಲ್ಲಿ ಲಿಖಿತ ದೂರು ನೀಡಿದ್ದಾರೆ.
ಯಲ್ಲಪ್ಪ ಅವರು ನೀಡಿದ ದೂರಿನ ಬಗ್ಗೆ ಡಿಎಸ್ ಪಿ ಚಂದ್ರಶೇಖರ್ ಅವರು, ಪೊಲೀಸ್ ಠಾಣೆಗೆ ನಿರ್ದೇಶನ ನೀಡಿ ಎಫ್ ಐಆರ್ ದಾಖಲಿಸಲು ಕ್ರಮಕೈಗೊಳ್ಳಬಹುದಾಗಿದ್ದರೂ, ದೂರು ನೀಡಿ 12 ದಿನಗಳಾದರೂ ಉದ್ದೇಶ ಪೂರ್ವಕ ಅಥವಾ ಯಾವುದೋ ಆಮಿಷ ಒತ್ತಡಕ್ಕೆ ಮಣಿದು, ಜಾಣ ಕುರುಡು ಪ್ರದರ್ಶಿಸಲಾಗುತ್ತಿದೆ, ಇದು ಎಸ್ ಸಿ—ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯ ಉಲ್ಲಂಘನೆ ಎಂದು ಭೂಮಿಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ದೂರು ನೀಡಿದರೂ ಕ್ರಮಕೈಗೊಳ್ಳದ ಡಿಎಸ್ ಪಿ ಚಂದ್ರಶೇಖರ್, ತುಮಕೂರು ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ಇತರರ ವಿರುದ್ಧ ಎಸ್ ಪಿ ಅವರ ಕಚೇರಿಯಲ್ಲಿ ಲಿಖಿತ ದೂರನ್ನು ನೀಡಲಾಗಿದೆ. ಕರ್ತವ್ಯ ಲೋಪ, ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಗೃಹ ಸಚಿವರ ಸ್ವಕ್ಷೇತ್ರದ ದಲಿತರ ದುಸ್ಥಿತಿ ಇದು:
ಗೃಹ ಸಚಿವರ ತವರಿನಲ್ಲೇ ದಲಿತರು ನ್ಯಾಯಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದು ದುರಂತ, ದಲಿತರು ದೂರು ನೀಡಿದರೆ, ಗೃಹ ಸಚಿವರ ತವರಿನಲ್ಲೇ ದೂರು ದಾಖಲಾಗುವುದಿಲ್ಲ, ಇದನ್ನು ಗಮನಿಸಿದರೆ, ತನ್ನ ಸ್ವ ಕ್ಷೇತ್ರದಲ್ಲೇ ದಲಿತರಿಗೆ ನ್ಯಾಯ ಕೊಡದ ಗೃಹ ಸಚಿವರು ಇನ್ನೂ ರಾಜ್ಯದ ದಲಿತರಿಗೆ ಏನು ನ್ಯಾಯ ಕೊಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಎಂದು ಭೂಮಿಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದೆ.
ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆ:
ತುಮಕೂರು ಎಸ್ ಪಿ ಅವರು ನೊಂದ ಕುಟುಂಬ ನೀಡಿರುವ ದೂರನ್ನು ಪರಿಶೀಲಿಸಿ ಮೂರು ದಿನಗಳೊಳಗೆ ತುಮಕೂರು ತಹಶೀಲ್ದಾರ್ ಸಿದ್ದೇಶ್ ಹಾಗೂ ಇನ್ನಿತರರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು. ಪೊಲೀಸರು ಕ್ರಮಕೈಗೊಳ್ಳದಿದ್ದಲ್ಲಿ, ಶೀಘ್ರದಲ್ಲೇ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರ ಮುಂಭಾಗ ಅನಿರ್ದಿಷ್ಠಾವಧಿ ನೊಂದ ಕುಟುಂಬದವರೂ ಸೇರಿದಂತೆ ನೂರಾರು ಜನರೊಂದಿಗೆ ಭೂಮಿಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೊಂದ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳುವುದಾಗಿ ಎಚ್ಚರಿಸಿದೆ