ಲೇಖಕರು: ವಿ.ಎಂ.ಎಸ್.ಗೋಪಿ, ಬೆಂಗಳೂರು
ಆಗಸ್ಟ್ 15 ಬಂತೆಂದರೆ ಸಾಕು, ಇಡೀ ದೇಶದಲ್ಲೇ ಹಬ್ಬದ ವಾತಾವರಣ. ಸಿಲಿಕಾನ್ ಸಿಟಿ ಬೆಂಗಳೂರಿನ ಮಾಲ್ ಮತ್ತು ಮಳಿಗೆಗಳು ಶೃಂಗಾರಗೊಂಡು, ರಿಯಾಯಿತಿ ಹಾಗೂ ಆಕರ್ಷಕ ಆಫರ್ ಗಳ ಬ್ಯಾನರ್ ಗಳಿಂದ ಕಂಗೊಳಿಸುತ್ತಿದ್ದರೆ, ಇನ್ನೊಂದೆಡೆ ವರಮಹಾಲಕ್ಷ್ಮಿ ಹಬ್ಬ ಮತ್ತು ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಭಾರತವು ತನ್ನ ಸ್ವಾತಂತ್ರ್ಯದ ಹಾದಿಯಲ್ಲಿ 79 ವಸಂತಗಳನ್ನು ಪೂರೈಸಿ 80ನೇ ಸ್ವಾತಂತ್ರ್ಯೋತ್ಸವಕ್ಕೆ ಕಾಲಿಡುತ್ತಿರುವ ಈ ಸಂದರ್ಭವು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆಯ ಕ್ಷಣ.
ಜಾತಿ, ಮತ, ಧರ್ಮ, ಭಾಷೆ, ಬಡವ–ಶ್ರೀಮಂತ ಎಂಬ ಯಾವುದೇ ಭೇದಭಾವವಿಲ್ಲದೆ ನಾವೆಲ್ಲರೂ ‘ಭಾರತೀಯರು’ ಎಂಬ ಒಗ್ಗಟ್ಟಿನಿಂದ ಆಚರಿಸುವ ದಿನವಿದು. ದೇಶದ ಮೂಲೆಮೂಲೆಯಲ್ಲೂ ದೇಶಭಕ್ತಿಯ ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಾಷಣಗಳು ನಮ್ಮ ವೈವಿಧ್ಯಮಯ ಪರಂಪರೆಯನ್ನು ಎತ್ತಿಹಿಡಿಯುತ್ತವೆ.
ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಮಹಾನ್ ಹೋರಾಟಗಾರರ ತ್ಯಾಗದ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿದ್ದೇವೆ. ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ದೇಶವು ಅಪಾರ ಪ್ರಗತಿಯನ್ನು ಸಾಧಿಸಿದೆ:
ಗ್ರಾಮೀಣ ಮಟ್ಟದಿಂದ ಹಿಡಿದು ಜಾಗತಿಕ ಮಟ್ಟದವರೆಗೆ ಶಿಕ್ಷಣ ಹಾಗೂ ಆಹಾರ ಭದ್ರತೆಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಭಾರತದ ಹೆಜ್ಜೆಸಿನಿಮಾ, ಕ್ರೀಡೆ ಹಾಗೂ ವೈದ್ಯಕೀಯ ರಂಗಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಧಿಸಿದ ಅಭಿವೃದ್ಧಿಯಾಗಿದೆ.
ದೇಶದ ಈ ಸುದೀರ್ಘ ಪ್ರಗತಿ ಪಥದಲ್ಲಿ “ನಮ್ಮ ದೇಶದ ಪ್ರಗತಿಯೇ ನಮ್ಮ ಪ್ರಗತಿ” ಎಂಬ ಭಾವನೆ ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡಬೇಕಿದೆ.
ಚಿಂತಿಸಬೇಕಾದ ವಿಷಯಗಳು:
ನಮ್ಮ ರಾಷ್ಟ್ರೀಯ ಧೈಯವಾಕ್ಯ “ಸತ್ಯಮೇವ ಜಯತೇ” (ಸತ್ಯಕ್ಕೆ ಗೆಲುವು). ಆದರೆ ಇಂದಿನ ಸಮಾಜದಲ್ಲಿ ಸುಳ್ಳು, ವಂಚನೆ, ಮೋಸ ಮತ್ತು ಲಂಚಗುಳಿತನಗಳು ವ್ಯಾಪಿಸುತ್ತಿರುವುದು ದುರಂತ. ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಹೋರಾಡಿದ್ದಾರೆ. ಆದ್ದರಿಂದ ದೇಶಕ್ಕೆ ನೀಡುವ ಗೌರವವನ್ನು ಮನೆಯ ತಾಯಿ, ಮಗಳು, ಸೊಸೆ ಹಾಗೂ ಸಹೋದರಿಯರಿಗೂ ನೀಡಿ, ಮಹಿಳಾ ಗೌರವವನ್ನು ಎತ್ತಿಹಿಡಿಯುವುದು ನಮ್ಮ ಕರ್ತವ್ಯ.
ನಮ್ಮೆಲ್ಲರ ಸೃಷ್ಟಿಕರ್ತ ಒಬ್ಬನೇ. ಒಂದೇ ದೇಶದ ನಿವಾಸಿಗಳಾದ ನಾವು ಸಹೋದರತೆಯಿಂದ ಬಾಳಬೇಕಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಕೇವಲ ಆಗಸ್ಟ್ 15ರ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, “ನಾವೆಲ್ಲರೂ ಒಂದೇ” ಎಂಬ ಭಾವನೆಯನ್ನು ದಿನನಿತ್ಯದ ಜೀವನದಲ್ಲಿ ಗಟ್ಟಿಗೊಳಿಸೋಣ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
