ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರ ಕಾರ್ಯಾಚರಣೆ ಹಾಗೂ ಇಲಾಖಾ ತನಿಖೆಯಲ್ಲಿ ಹಲವು ಆಘಾತಕಾರಿ ಮತ್ತು ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ.
ಪ್ರಜ್ವಲ್ ರೇವಣ್ಣ ಜೈಲಿನ ಬ್ಯಾರಕ್ ನಲ್ಲಿ ನಿಷೇಧಿತ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಬಳಸುತ್ತಿರುವುದು ದೃಢಪಟ್ಟಿದ್ದು, ತನಿಖೆ ತೀವ್ರಗೊಂಡಿದೆ.
ತಂದೆ-ತಾಯಿಯ ನಂಬರ್ಗೆ ಕೋಡ್ ನೇಮ್:
ಸಿಕ್ಕಿಬಿದ್ದ ಆಂಡ್ರಾಯ್ಡ್ ಮೊಬೈಲ್ನಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ತಂದೆ ಹೆಚ್.ಡಿ. ರೇವಣ್ಣ ಅವರ ಮೊಬೈಲ್ ಸಂಖ್ಯೆಯನ್ನು ‘ಶಿವ’ ಹಾಗೂ ತಾಯಿ ಭವಾನಿ ರೇವಣ್ಣ ಅವರ ಸಂಖ್ಯೆಯನ್ನು ‘ಪಾರ್ವತಿ’ ಎಂದು ಗೌಪ್ಯವಾಗಿ ಸೇವ್ ಮಾಡಿಕೊಂಡಿರುವುದು ಪತ್ತೆಯಾಗಿದೆ. ಪ್ರಜ್ವಲ್ ಬಳಿಯಿದ್ದ ನೋಟ್ಬುಕ್ನಲ್ಲಿ 40ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು, ಆಪ್ತರು ಹಾಗೂ ಅಪರಿಚಿತರ ಫೋನ್ ನಂಬರ್ಗಳನ್ನು ಬರೆದಿಟ್ಟುಕೊಂಡಿರುವುದು ಪತ್ತೆಯಾಗಿದೆ.
ಸಿಸಿಬಿ ದಾಳಿ ವೇಳೆ ಹಾಸಿಗೆ ಕೆಳಗೆ ಮೊಬೈಲ್ ಸಿಕ್ಕ ತಕ್ಷಣ, ಪ್ರಜ್ವಲ್ ಅದನ್ನು ‘ನನ್ನದೇ ಮೊಬೈಲ್’ ಎಂದು ಒಪ್ಪಿಕೊಂಡಿದ್ದರು. ಆದರೆ, ಪಾಸ್ವರ್ಡ್ ಅನ್ಲಾಕ್ ಮಾಡಲು ಸೂಚಿಸಿದಾಗ “ಇದು ನನ್ನದಲ್ಲ, ಆಗಾಗ ಮನೆಯವರ ಬಳಿ ಮಾತನಾಡಲು ಮಾತ್ರ ಬಳಸುತ್ತಿದ್ದೆ” ಎಂದು ಮಾತು ಬದಲಿಸಿದ್ದರು. ಪತ್ತೆಯಾದ ಮೊಬೈಲ್ ಫೋನ್ ಹಾಗೂ ಪೆನ್ಡ್ರೈವ್ಗಳನ್ನು ಹೆಚ್ಚಿನ ವಿಧಿವಿಜ್ಞಾನ ತನಿಖೆಗಾಗಿ ಎಫ್ ಎಸ್ಎಲ್ಗೆ (FSL) ಕಳುಹಿಸಲಾಗಿದೆ.
2 ವರ್ಷಗಳಿಂದ ಮೊಬೈಲ್ ಬಳಕೆ?
ಇಲಾಖಾ ತನಿಖೆಯಲ್ಲಿ ತಿಳಿದುಬಂದ ಮತ್ತೊಂದು ಸ್ಫೋಟಕ ಅಂಶವೆಂದರೆ, ಪ್ರಜ್ವಲ್ ರೇವಣ್ಣ ಕಳೆದ 2024ರಿಂದಲೂ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. 2024ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಅವರ ರೂಮ್ಮೇಟ್ ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದು ಈಗ ವೈರಲ್ ಆಗಿದೆ.
ಜೈಲಿನಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಂಡಗಳು ಪದೇ ಪದೇ ಪರಿಶೀಲನಾ ದಾಳಿ ನಡೆಸಿದ್ದರೂ, ಜೈಲಿನ ಕೆಲವು ಭ್ರಷ್ಟ ಸಿಬ್ಬಂದಿಯ ಮುನ್ಸೂಚನೆ ಹಾಗೂ ಸಹಕಾರದಿಂದ ಪ್ರಜ್ವಲ್ ಒಟ್ಟು 6 ಬಾರಿ ಸಿಸಿಬಿ ಮತ್ತು ಜೈಲು ಅಧಿಕಾರಿಗಳ ದಾಳಿಯಿಂದ ಬಚಾವ್ ಆಗುವಲ್ಲಿ ಯಶಸ್ವಿಯಾಗಿದ್ದರು ಎಂದು ವರದಿಯಾಗಿದೆ.
ಕಟ್ಟುನಿಟ್ಟಿನ ಕ್ರಮ:
ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಪೂರೈಸಲು ಹಾಗೂ ಭದ್ರತಾ ಪರಿಶೀಲನೆಯ ವೇಳೆ ಮಾಹಿತಿ ಸೋರಿಕೆ ಮಾಡಲು ಸಹಕರಿಸಿದ ಜೈಲಿನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದಾರೆ.
ಕರ್ತವ್ಯಲೋಪ ಎಸಗಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಯಾಗುತ್ತಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳು (VIP ರಾಜ್ಯಾತಿಥ್ಯ) ಮತ್ತು ಭದ್ರತಾ ವೈಫಲ್ಯದ ಕುರಿತು ಉನ್ನತ ಮಟ್ಟದ ತನಿಖೆ ಚುರುಕುಗೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
