ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸುವಂತೆ ಹಾಗೂ ಆಸ್ಪತ್ರೆಯ ಅವ್ಯವಸ್ಥೆಯನ್ನು ಆರೋಪಿಸಿ ಗ್ರಾಮಸ್ಥರು ಅಹೋರಾತ್ರಿ ಧರಣಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಧರಣಿಯನ್ನು ಉದ್ದೇಶಿಸಿ ಯುವ ಮುಖಂಡ ರಮೇಶ್ ಮಾತನಾಡಿ, ಹಲವಾರು ವರ್ಷಗಳಿಂದ ಮಾಯಸಂದ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಮತ್ತು ಸಿಬ್ಬಂದಿಗಳನ್ನು ಸರ್ಕಾರ ನೇಮಕ ಮಾಡಿಲ್ಲ, ಹೋಬಳಿಯ ಹತ್ತಾರು ಹಳ್ಳಿಗಳಿಂದ ನೂರಾರು ಬಡವರು, ರೈತರು, ಸಾರ್ವಜನಿಕರು ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಹಾಗೂ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ, ಆಸ್ಪತ್ರೆಯಲ್ಲಿ ಕೆಲವು ಔಷಧಿಗಳು ದೊರೆಯುತ್ತಿಲ್ಲ, ರಕ್ತಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಗಳಿಲ್ಲ, ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು, ಹೀಗಾದರೆ ಬಡವರ ಕಥೆ ಏನು? ಆಸ್ಪತ್ರೆಯಲ್ಲಿ ಕೆಲವು ಸಿಬ್ಬಂದಿಗಳು ರೋಗಿಗಳೊಂದಿಗೆ, ಸಾರ್ವಜನಿಕರೊಂದಿಗೆ ನಿರ್ಲಕ್ಷದಿಂದ ವರ್ತಿಸುತ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು.
ದಲಿತ ಯುವ ಮುಖಂಡ ಜಯಣ್ಣ ಮಾತನಾಡಿ, ಮಾಯಸಂದ್ರ ಹೋಬಳಿಯಾದ್ಯಂತ ಹಲವಾರು ಖಾಸಗಿ ಕ್ಲಿನಿಕ್ ಗಳು ಮತ್ತು ಲ್ಯಾಬ್ ಗಳು ದಿನೇ ದಿನೇ ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ, ಅತಿ ದುಬಾರಿ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿಗದಿತ ಚಿಕಿತ್ಸೆ ಸಿಗದ ಕಾರಣ, ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿದೆ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದರೆ, ಬೇರೊಂದು ಕಡೆಗೆ ಶಿಫಾರಸು ಮಾಡುತ್ತಾರೆ, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ, ಅಲ್ಲದೆ ಬೀದಿ ಬದಿ ರಸ್ತೆಗಳಲ್ಲಿ ಪ್ಲಾಸ್ಟಿಕ್ ಬಳಸುವ ಮೂಲಕ ಆಹಾರವನ್ನು ತಯಾರಿಸುತ್ತಿರುವುದು, ರಾಸಾಯನಿಕದಂತಹ ವಸ್ತುಗಳನ್ನು ಬಳಸಿ ಜಂಕ್ ಫುಡ್ ಗಳನ್ನು ತಯಾರಿಸುತ್ತಿರುವುದು ಕಂಡುಬಂದಿದ್ದು, ಇದರ ಕ್ರಮಕ್ಕೆ ಮುಂದಾಗಲು ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಆಸ್ಪತ್ರೆಯಲ್ಲಿ ಪ್ರಸ್ತುತ ಔಷಧಿಗಳು ದೊರೆಯುವ ಬಗ್ಗೆ ನಾಮಫಲಕವನ್ನು ಅಳವಡಿಸಿಲ್ಲ ಮಾಹಿತಿ ನೀಡುವುದಿಲ್ಲ, ಹಿರಿಯರಿಗೆ, ಅಂಗವಿಕಲರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸುವಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ನಿರ್ಲಕ್ಷ ತೋರುವ ಮೂಲಕ ಬೇಜವಾಬ್ದಾರಿ ತೋರಿಸುವ ಕೆಲವು ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಹಾಗೂ ಅನಧಿಕೃತವಾಗಿ ನಡೆಸುತ್ತಿರುವ ಖಾಸಗಿ ಕ್ಲಿನಿಕ್, ಲ್ಯಾಬ್ ಗಳು, ಪ್ಲಾಸ್ಟಿಕ್ ಬಳಕೆಯ ಆಹಾರ ತಯಾರಿಕೆ ಕುರಿತಂತೆ, ಗಂಭೀರವಾದ ಕ್ರಮ ಕೈಗೊಳ್ಳಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು.
ತಡರಾತ್ರಿ ಧರಣೀಯ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಪ್ರಿಯಾ ರವರು ಧರಣಿ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ದೂರನ್ನು ಸ್ವೀಕರಿಸಿ ಸ್ಥಳದಲ್ಲಿ ಸಂಬಂಧಪಟ್ಟ ದೂರುಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯೊಂದಿಗೆ ಕ್ರಮದ ಬಗ್ಗೆ ಹಿಂಬರಹವನ್ನು ಸಹ ನೀಡಿದರು, ತದನಂತರ ಪ್ರತಿಭಟನಾಕಾರರು ಧರಣಿಯನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಂಜುನಾಥ್, ಕರಿಬಸವಯ್ಯ, ಗೋವಿಂದಪ್ಪ, ಕುಮಾರ್, ಶೇಖರ್ ,ಹನುಮಂತು, ವಿನಯ್, ಸೇರಿದಂತೆ ಮುಂತಾದ ಯುವಕರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ.


