ವೈ.ಎನ್.ಹೊಸಕೋಟೆ : ಕನ್ನಡ ಮನಸ್ಸುಗಳ ಸಹಕಾರಿ ಗುಣವೇ ಕನ್ನಡ ಬೆಳವಣಿಗೆಗೆ ಶಕ್ತಿಯಾಗಿದೆ ಎಂದು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಹೊ.ಮ.ನಾಗರಾಜು ತಿಳಿಸಿದರು.
ಗ್ರಾಮದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಇತ್ತೀಚೆಗೆ ಹೋಬಳಿ ಘಟಕದ ವತಿಯಿಂದ ರಂಗಸಮುದ್ರದಲ್ಲಿ ಹಮ್ಮಿಕೊಂಡಿದ್ದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸು ಕಂಡಿದೆ. ಇದಕ್ಕೆ ರಂಗಸಮುದ್ರ ಮತ್ತು ಹೋಬಳಿಯ ಕನ್ನಡ ಮನಸುಗಳ ಸಹಕಾರ ಮತ್ತು ಸ್ಪಂದನೆಯೇ ಮೂಲ ಕಾರಣವಾಗಿದ್ದು, ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನಾಪೂರ್ವಕ ಧನ್ಯವಾದಗಳು. ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಪದಾಧಿಕಾರಿಗಳ ಮತ್ತು ಹಿರಿಯ ಕನ್ನಡ ಚೇತನಗಳ ಮಾರ್ಗದರ್ಶನ ಸಲಹೆ ಸೂಚನೆಗಳಂತೆ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ರೂಪಿಸಿದ ಪರಿಣಾಮ ಯಶಸ್ವಿ ಸಮ್ಮೇಳನ ನೆರವೇರಿಸಲು ಸಾಧ್ಯವಾಗಿದೆ. ಗಡಿಭಾಗದಲ್ಲಿ ಕನ್ನಡ ನಿರಂತರವಾಗಿ ಪಸರಿಸಲು ಪ್ರತಿಯೊಬ್ಬರ ಕೊಡುಗೆ ಅಪಾರವಾಗಿದೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ ಮಾತನಾಡಿ, ಕನ್ನಡ ಕಾರ್ಯಕ್ರಮ ರೂಪಿಸುವಲ್ಲಿ ಹಲವು ಎಡರು ತೊಡರುಗಳು ಬರುವುದು ಸಹಜ. ಅವುಗಳೆಲ್ಲವನ್ನೂ ಮೀರಿ ಹೋಬಳಿ ಪರಿಮಿತಿಯಲ್ಲಿ ಸಾಹಿತ್ಯ ಪರಿಷತ್ತಿನ ತತ್ವಗಳಡಿಯಲ್ಲಿ ೨ನೇ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಈ ಕಾರ್ಯ ಮಾಡುವಲ್ಲಿ ಹೋಬಳಿ ಘಟಕದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ರಂಗಸಮುದ್ರ ಮತ್ತು ದೊಡ್ಡೇನಹಳ್ಳಿಯ ಜನತೆಯ ಶ್ರಮ ಫಲಿಸಿದೆ. ಮುಂದಿನ ದಿನಗಳಲ್ಲಿ ಇದೇ ರಂಗಸಮುದ್ರ ಗ್ರಾಮದಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಮತ್ತಷ್ಟು ಕನ್ನಡ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಘಟಕದ ಕಾರ್ಯದರ್ಶಿ ಐ.ಎ.ನಾರಾಯಣಪ್ಪ ಪ್ರಾಸ್ಥಾವಿಕ ನುಡಿದರು. ಮತ್ತೋರ್ವ ಕಾರ್ಯದರ್ಶಿ ರಂಗಪ್ಪ, ರಂಗಸಮುದ್ರ ಗ್ರಾಮಪಂಚಾಯಿತಿ ಸದಸ್ಯ ನರಸಿಂಹನಾಯಕ, ಕಲಾವಿದ ಎನ್.ಅರ್.ಲಿಂಗಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಂಗಸಮುದ್ರದ ಗ್ರಾ.ಪಂ. ಸದಸ್ಯ ಮಹಲಿಂಗಪ್ಪ, ಕಸಾಪ ಹಿರಿಯ ಸದಸ್ಯರಾದ ಇ.ವಿ.ಶ್ರೀಧರ್, ಕಲಾವಿದರಾದ ಕೋಲಾಟ ನಾಗರಾಜು, ಬಲರಾಮ, ಮರಿಸ್ವಾಮಿ, ದೈಹಿಕ ಶಿಕ್ಷಕರಾದ ಮಾಲತಿ, ಮಾರಣ್ಣ, ಹೆಚ್.ಕೆ.ಅಶ್ವಥನಾರಾಯಣ, ದೇವಿಕ, ಶಿಕ್ಷಕಿಯರಾದ ಗಿರಿಜಮ್ಮ, ಜಯಶ್ರೀ ಇತರರನ್ನು ಅಭಿನಂದಿಸಲಾಯಿತು.
ಹೋಬಳಿ ಘಟಕದ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮುದ್ರಾಡಿ ಮತ್ತು ರಾಮಲಿಂಗಯ್ಯ, ಸದಸ್ಯರಾದ ಎ.ಓ.ನಾಗರಾಜು, ತಿರುಮಲೇಶ್, ಶ್ರೀಶೈಲಮೂರ್ತಿ, ಪಿ.ಹರಿಕೃಷ್ಣ, ಶಿವಯ್ಯ ಇತರರು ಇದ್ದರು.
ವರದಿ: ನಂದೀಶ್ ನಾಯ್ಕ ಪಾವಗಡ