ತಿಪಟೂರು: ಒಳಮೀಸಲಾತಿ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನ ಸ್ವಾಗತಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಮಾದಿಗ ದಂಡೋರದಿಂದ ತುಮಕೂರು ಜಿಲ್ಲೆ ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೊಪ್ಪಶಾಂತಪ್ಪ, ಶೋಷಿತ ಸಮುದಾಯಗಳು ಸರ್ಕಾರದ ಮೀಸಲಾತಿ ಸವಲತ್ತುಗಳನ್ನ ಪಡೆಯಬೇಕು ಎಂದರೆ ಒಳಮೀಸಲಾತಿ ಜಾರಿಯಾಗಬೇಕು ಎಂದು ಕಳೆದ ಮೂರ್ನಾಲ್ಕು ದಶಕಗಳಿಂದ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳು ನಿರಂತರವಾಗಿ ಹೋರಾಟಮಾಡುತ್ತಾ ಬಂದಿದ್ದಾರೆ, ಹಲವಾರು ವರ್ಷಗಳ ನಿರಂತರ ಹೋರಾಟದಫಲವಾಗಿ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಒಳಮೀಸಲಾತಿ ಜಾರಿಗೊಳಿಸಿದರೂ. ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇದ್ದ ಕಾರಣ ಪೂರ್ಣಪ್ರಮಾಣದ ಮೀಸಲಾತಿ ಜಾರಿಯಾಗಿರಲ್ಲಿಲ್ಲ ಆದರೆ ಸರ್ವೋಚ್ಚ ನ್ಯಾಯಾಲಯದ 7 ಜನರ ನ್ಯಾಯಾಧೀಶರ ಪೂರ್ಣಪೀಠ, ಸಮಾಜದ ತುಳಿತಕೋಳಗಾದ ಜನಸಮುದಾಯಗಳಿಗೆ ನ್ಯಾಯಸಮ್ಮತ ತೀರ್ಪು ನೀಡಿರುವುದು, ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಸರ್ಕಾರದ ಮೀಸಲಾತಿ ಸವಲತ್ತು,ದೊರೆಯುತ್ತಿಲ್ಲ, ಮೀಸಲಾತಿ ಸವಲತ್ತುಗಳು ಸ್ಪೃಷ್ಯ ಪರಿಶಿಷ್ಟ ಜಾತಿಗಳ ಪಾಲಾಗುತ್ತಿದ್ದು, ಸರ್ವೋಚ್ಚನ್ಯಾಯಾಲಯ ನೀಡಿರುವ ತೀರ್ಪು ಶೋಷಿತ ಸಮುದಾಯಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ರಾಜ್ಯಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಶೋಷಿತ ಸಮುದಾಯಗಳಿಗೆ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ನಾಗ್ತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಪ್ರೊಫೆಸರ್ ಬಿ.ಕೃಷ್ಣಪ್ಪ ನವರು ಹಚ್ಚಿದ ಒಳಮೀಸಲಾತಿ ಹೋರಾಟದ ಕಿಚ್ಚು ಸುಪ್ರೀಂ ಕೋರ್ಟ್ ಆದೇಶದಿಂದ ಫಲಕೊಡುವ ಕಾಲಬಂದಿದೆ. ಹಲವಾರು ವರ್ಷಗಳ ಮಾದಿಗ ಹಾಗೂ ದಲಿತಪರ ಸಂಘಟನೆಗಳ ನ್ಯಾಯಸಮ್ಮತ ಹೋರಾಟಕ್ಕೆ ಸಂದಜಯವಾಗಿದೆ, ಹೋರಾಟದಲ್ಲಿ ಭಾಗವಹಿಸಿ ಸಮುದಾಯಕ್ಕೆ ದಾರಿದೀಪವಾದ ಎಲ್ಲಾ ಸಮಾಜದ ನಾಯಕರಹೋರಾಟ ಅವಿಸ್ಮರಣೀಯವಾಗಿದ್ದು, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯಕ್ಕೆ ಹೆಚ್ಚಿನ ಒಳಮೀಸಲಾತಿ ಸೌಲಭ್ಯದೊರಯಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ, ಡಿಎಸ್ಎಸ್ ಸಂಚಾಲಕ ಟಿ.ಕೆ ಕುಮಾರ್, ಗಾಂಧಿನಗರ ಬಸವರಾಜು, ಬಿಳಿಗೆರೆ ಚಂದ್ರಶೇಖರ್, ಯಗಚಿಕಟ್ಟೆ ರಾಘವೇಂದ್ರ, ಲಿಂಗದೇವರು, ಜಗದಾರ್ಯ, ಅಶೋಕ್ ಗೌಡನಕಟ್ಟೆ, ಈಚನೂರು ಸೇಮಶೇಖರ್, ಕೊಪ್ಪ ಉದಯ್ ಕುಮಾರ್, ಆನಂದ್ ಕುಮಾರ್, ರಮೇಶ್, ಶಿವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296