ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಹೇಮಾವತಿ ನಾಲೆ ಕಾಮಗಾರಿಯ ವಿಳಂಬ ಧೋರಣೆ ಹಾಗೂ ಅಧಿಕಾರಿಗಳ ನೆಪಮಾತ್ರದ ಭರವಸೆಗಳ ವಿರುದ್ಧ ಆಕ್ರೋಶಗೊಂಡ ರೈತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ, ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಅಹೋರಾತ್ರಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ನೂರಾರು ರೈತರು, ಹೇಮಾವತಿ ಹೋರಾಟ ಸಮಿತಿಯ ನೇತೃತ್ವದಲ್ಲಿ ನೆಹರು ಸರ್ಕಲ್ನಿಂದ ಆರಂಭಗೊಂಡ ಬೃಹತ್ ರ್ಯಾಲಿಗೆ ದನ-ಕರುಗಳು, ಎತ್ತಿನಗಾಡಿಗಳು ಹಾಗೂ ಟ್ರ್ಯಾಕ್ಟರ್ಗಳೊಂದಿಗೆ ಸಾಲು ಸಾಲಾಗಿ ಹೆಜ್ಜೆ ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳ ಉದ್ದಕ್ಕೂ ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶದ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಧರಣಿ ಕುಳಿತರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೇಮಾವತಿ ಇಲಾಖೆಯ ಇಂಜಿನಿಯರ್ ಪ್ರಭಾಕರ್, ಇನ್ನೂ 5 ದಿನಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಡಲಾಗುವುದು ಎಂದು ಮನವಿ ಮಾಡಲು ಯತ್ನಿಸಿದರು. ಆದರೆ ಇಷ್ಟು ದಿನಗಳ ಕಾಲ ಪದೇ ಪದೇ ಸುಳ್ಳು ಆಶ್ವಾಸನೆ ನೀಡಿ ವಂಚಿಸಿರುವ ಇಂಜಿನಿಯರ್ ಮಾತನ್ನು ತಿರಸ್ಕರಿಸಿದ ರೈತ ಮುಖಂಡರು, ನಿಮ್ಮ ಸುಳ್ಳು ಭರವಸೆಗಳನ್ನು ಕೇಳಿ ಸಾಕಾಗಿದೆ. ಪ್ರತ್ಯಕ್ಷವಾಗಿ ನಾಳೆ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೂ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿರುವ ಅಹೋ ರಾತ್ರಿ ಪ್ರತಿಭಟನೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಖಡಕ್ಕಾಗಿ ಎಚ್ಚರಿಸಿದರು.
ತಾಲೂಕಿನ 24 ಕೆರೆಗಳಿಗೆ ಇನ್ನೂ ನೀರು ಹರಿಯದಿರುವುದು ಅತ್ಯಂತ ವಿಷಾದನೀಯ. ಮೂಲಭೂತ ಅವಶ್ಯಕತೆಯಾದ ನೀರಿಲ್ಲದೆ ಬದುಕು ಸಾಗಿಸುವುದು ಅಸಾಧ್ಯವಾಗಿದೆ. ರೈತರು ಹಮ್ಮಿಕೊಂಡಿರುವ ಈ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ತಾಲೂಕಿನ ಎಲ್ಲಾ ಮಠಾಧೀಶರ ಸಂಪೂರ್ಣ ಬೆಂಬಲವಿದೆ. ತಮ್ಮೆಲ್ಲರ ಈ ನ್ಯಾಯಯುತ ಹೋರಾಟವು ಸಂಪೂರ್ಣವಾಗಿ ಶಾಂತಿಯುತ ಮಾರ್ಗದಲ್ಲಿಯೇ ನಡೆಯಲಿ.
— ಡಾ.ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ತಮ್ಮಡಿಹಳ್ಳಿ ಮಠ
ಗೋಡೆಕೆರೆ ಮಠದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಗುತ್ತಿಗೆದಾರರು ಕೇವಲ ಗಣಿಬಾಧಿತ ಪ್ರದೇಶಾಭಿವೃದ್ಧಿ ನಿಧಿಯಡಿ ಬರುವ ಕಾಮಗಾರಿಗಳಲ್ಲಷ್ಟೇ ಆಸಕ್ತಿ ತೋರುತ್ತಿದ್ದು, ಹೇಮಾವತಿ ನಾಲಾ ಕಾಮಗಾರಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಒಗ್ಗೂಡಿ ಸತ್ಯಾಗ್ರಹ ನಡೆಸದಿದ್ದರೆ, ಇನ್ನು ಹತ್ತು ವರ್ಷಗಳಾದರೂ ತಾಲೂಕಿಗೆ ನೀರು ಬರುವುದು ಅಸಾಧ್ಯ ಎಂದರು.
ಕಾಮಗಾರಿ ನಡೆಯುವಾಗ ಎದುರಾಗುವ ಸಣ್ಣಪುಟ್ಟ ಅಡೆತಡೆಗಳನ್ನು ಹೋರಾಟಗಾರರೇ ಮುಂದೆ ನಿಂತು ಸರಿಪಡಿಸಿ ಕಾಮಗಾರಿ ಸುಗಮವಾಗಿ ನಡೆಯಲು ಸಹಕರಿಸಿದ್ದಾರೆ. ಆದರೂ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯ. ತಾಲೂಕು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದೆ. ರೈತರು ಕೊಳವೆ ಬಾವಿಗಳನ್ನು ಕೊರೆಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಹನಿ ನೀರು ಸಿಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ತಾಲೂಕು ಕೇವಲ ಒಂಟೆಗಳು ವಾಸಿಸುವ ಮರುಭೂಮಿಯಾಗಿ ಮಾರ್ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕುಪ್ಪೂರು ಮಠದ ಆಡಳಿತಾಧಿಕಾರಿ ವಾಗೀಶ್ ಮಾತನಾಡಿ, ತಾಲೂಕಿನ ನೀರಿನ ಹಕ್ಕಿಗಾಗಿ ನಮ್ಮ ತಾಲೂಕಿನ ಮೂರು ಮಠಗಳ ಸ್ವಾಮೀಜಿಗಳು ಈ ಹಿಂದೆ ಪಾದಯಾತ್ರೆ ನಡೆಸಿದ್ದರು. ಆದರೆ, ಎಂಟು ವರ್ಷಗಳು ಕಳೆದರೂ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ. ಅಂದಿನಿಂದ ಇಂದಿನವರೆಗೂ ನಮ್ಮ ಭಾಗದ ರೈತರು ಯೋಜನೆ ಪೂರ್ಣಗೊಳ್ಳಲಿದೆ ಎಂಬ ಕೇವಲ ಭರವಸೆಯಲ್ಲೇ ಬದುಕುವಂತಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಕೆ.ಆರ್.ಎಸ್ ಪಕ್ಷದ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ಶಾಂತಿ ಸ್ವಭಾವದ ಜನರೆಂದರೆ ಅದು ನಮ್ಮ ತಾಲೂಕಿನವರು. ಇದೇ ಕಾರಣಕ್ಕಾಗಿ ಸಂಬಂಧ ಪಟ್ಟವರು ಕೇವಲ ಫ್ಲೆಕ್ಸ್ ಹಾಗೂ ಬ್ಯಾನರ್ಗಳಲ್ಲಿ ಮಾತ್ರ ತಾಲೂಕಿಗೆ ಹೇಮಾವತಿ ನೀರನ್ನು ಹರಿಸುತ್ತಿದ್ದಾರೆ. ನಾವು ಎಂದೆಂದಿಗೂ ಶಾಂತಿಯುತ ಮಾರ್ಗದಲ್ಲಿಯೇ ಹೋರಾಟವನ್ನು ನಡೆಸುತ್ತೇವೆ ಎಂದರು.
ಈ ಬೃಹತ್ ಹೋರಾಟದ ಮುಂಚೂಣಿಯನ್ನು ಹೇಮಾವತಿ ಹೋರಾಟ ಸಮಿತಿಯ ಮುಖಂಡರಾದ ಶಾವಿಗೆಹಳ್ಳಿ ಮಧು, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ರೈತ ಸಂಘದ ಯದುಕುಮಾರ್, ಶರತ್ ಕುಮಾರ್ ಅಜ್ಜೇನಹಳ್ಳಿ, ಆಣೆಕಟ್ಟೆ ರಾಕೇಶ್, ಮರುಳುಸಿದ್ದಯ್ಯ, ಯೋಗೀಶ್ ಸೇರಿದಂತೆ ನೂರಾರು ರೈತ ನಾಯಕರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
