ತುಮಕೂರು: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರದಂತೆ ಪಾಲಿಕೆ ವತಿಯಿಂದ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತೆ ಅಶ್ವಿಜಾ ತಿಳಿಸಿದ್ದಾರೆ.
ತುಮಕೂರು ನಗರಕ್ಕೆ ನೀರು ಸರಬರಾಜು ಮಾಡುವ ಬುಗುಡನಹಳ್ಳಿ ಕೆರೆಯ ಸಾಮರ್ಥ್ಯ 363 ಎಂ.ಸಿ.ಎಫ್.ಟಿ ಇದ್ದು, ಪ್ರಸ್ತುತ ನೀರಿನ ಪ್ರಮಾಣ 204 ಎಂ.ಸಿ.ಎಫ್.ಟಿ ಇರುತ್ತದೆ. ಲಭ್ಯವಿರುವ ನೀರನ್ನು ಜೂನ್ ಅಂತ್ಯದವರೆಗೆ ನಗರಕ್ಕೆ ನೀರು ಸರಬರಾಜು ಮಾಡಬಹುದಾಗಿರುತ್ತದೆ ಹಾಗೂ ಪಾಲಿಕೆಗೆ ಸಂಬಂಧಿಸಿದ ಕೊಳವೆಬಾವಿಗಳ ಮೂಲಕ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದಿದ್ದಾರೆ.
ಪ್ರಸ್ತುತ ಲಭ್ಯವಿರುವ ನೀರನ್ನು ಬೇಸಿಗೆ ಅಂತ್ಯದವರೆಗೆ ಸರಬರಾಜು ಮಾಡಲು ಅನುವಾಗುವಂತೆ ಪಂಪಿಂಗ್ ಸಮಯವನ್ನು ಮಾರ್ಪಾಡು ಮಾಡಲಾಗಿದೆ ಹಾಗೂ ಸಾರ್ವಜನಿಕರಿಗೆ ನೀರಿನ ಮಿತಬಳಕೆ ಮಾಡಲು ಕೋರಿದ್ದಾರೆ.
ತುಮಕೂರು ನಗರಕ್ಕೆ ನೀರು ಸರಬರಾಜು ಮಾಡಲು ಸಂಬಂಧಿಸಿದಂತಹ ಎಲ್ಲಾ ಜಲಶುದ್ಧೀಕರಣ ಘಟಕಗಳು, ಜ್ಯಾಕ್ ವೆಲ್ ಗಳು ಹಾಗೂ ಪಂಪ್ ಹೌಸ್ಗಳ ಪರವೀಕ್ಷಣೆ ನಡೆಸಿದ್ದು, ಪಂಪ್–ಮೋಟಾರ್ ಗಳು ಸುಸ್ಥಿತಿಯಲ್ಲಿದ್ದು, ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮವಹಿಸಲಾಗಿದೆ ಎಂದಿದ್ದಾರೆ.
ಪಾಲಿಕೆಗೆ ಸಂಬಂಧಿಸಿದ ಒಟ್ಟು 04 ವಾಟರ್ ಟ್ಯಾಂಕರ್ ಗಳು ಇದ್ದು, ಇವುಗಳನ್ನು ಅವಶ್ಯವಿರುವ ಕಡೆಗಳಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಉಪಯೋಗಿಸಲಾಗುತ್ತಿದೆ ಎಂದಿದ್ದಾರೆ.
ವಾರ್ಡ್ವಾರು ಕೊಳವೆ ಬಾವಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಅಗತ್ಯವಾದ ಅಗತ್ಯವಾದ ಸಾಮಗ್ರಿಗಳನ್ನು ಹಾಗೂ ನೀರು ಶುದ್ಧೀಕರಿಸಲು ಅಗತ್ಯವಾದ ರಾಸಾಯನಿಕಗಳನ್ನು ದಾಸ್ತಾನು ಶಾಖೆಗೆ ಸರಬರಾಜು ಪಡೆಯಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾರ್ಡ್ವಾರು ಸಿಲ್ಟ್ ಬಂದು ಮುಚ್ಚಿಕೊಂಡಿರುವ ಕೊಳವೆ ಬಾವಿಗಳನ್ನು ಗುರುತಿಸಿ ಪ್ಲಶಿಂಗ್ ಹಾಗೂ ಹೊಸದಾಗಿ ಕೇಸಿಂಗ್ ಪೈಪ್ಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ.ವಾರ್ಡ್ಗಳ ವ್ಯಾಪ್ತಿಯಲ್ಲಿ ಪೈಪ್ಲೈನ್ಗಳು ಹಾಗೂ ಮುಖ್ಯ ಪೈಪ್ಲೈನ್ ಜಾಲಗಳನ್ನು ಪರಿಶೀಲಿಸಿ ಲೀಕೆಜ್ ಸರಿಪಡಿಸಿ ನೀರು ಪೋಲಾಗುವುದನ್ನು ತಡೆಯಲು ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4