ಕೊರಟಗೆರೆ : ಇಂದು ಕೊರಟಗೆರೆ ಶಿಶು ಅಭಿವೃದ್ಧಿ ಯೋಜನೆಯಡಿ ಕರ್ನಾಟಕ ಸರ್ಕಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತುಮಕೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಂಕಷ್ಟದಲ್ಲಿರುವ ಮಕ್ಕಳ ಸಮಸ್ಯೆಗಳು ಮತ್ತು ಪುನರ್ವಸತಿ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾವಲು ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುತ್ತಿದ್ದು, ಇದರಲ್ಲಿ ಸಾಮಾಜಿಕ ಸಮಸ್ಯೆಗಳಾದ ಬಾಲ್ಯವಿವಾಹ ಮಹಿಳೆಯರ ಹಾಗೂ ಮಕ್ಕಳ ಅನೈತಿಕ ಕಳ್ಳಸಾಗಣಿಕೆ, ಪೋಕ್ಸೋ ಕಾಯ್ದೆ, ಮಕ್ಕಳ ಸಮಗ್ರ ರಕ್ಷಣೆ ಹೀಗೆ ಹಲವು ವಿಷಯಗಳಾದ ಮಹಿಳೆ, ಮಕ್ಕಳು ಮತ್ತು ವೃದ್ಧರು ಹಾಗೂ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಮಾಹಿತಿ ಪಡೆದು ಚರ್ಚಿಸಬೇಕು ಮತ್ತು ಸಮಸ್ಯೆಗಳು ಬಾರದಂತೆ ಕ್ರಮವಹಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜನಸಾಮಾನ್ಯರಿಗೆ ಹತ್ತಿರವಿರುವಿದರಿಂದ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಪೋಷಕರಿಗೆ ಅರಿವನ್ನು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿದ್ದು ಮುಂಜಾಗ್ರತವಾಗಿ ಕ್ರಮವಹಿಸಬೇಕು ಹಾಗೆಯೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲೆ ತಲುಪಿಸಬೇಕಾದ ಜವಾಬ್ದಾರಿ ಅಧಿಕಾರಿಗಳಾದ ನಮ್ಮ ನಿಮ್ಮ ಜವಾಬ್ದಾರಿ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಅಂಬಿಕಾ ತಿಳಿಸಿದರು.
ಸಂಕಷ್ಟದಲ್ಲಿರುವ ಮಕ್ಕಳು ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಪೋಷಕರನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ ಮತ್ತು ಮಾನಸಿಕವಾಗಿ ನೊಂದಿದ್ದಾರೆ. ಇಂತಹ ಮಕ್ಕಳಿಗೆ ಬಾಲ ಸ್ವರಾಜ್, ಬಾಲ ಸೇವಾ ಯೋಜನೆ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್,ಬಾಲ ಹಿತೈಷಿ ಇತ್ಯಾದಿ ಯೋಜನೆಗಳಡಿ ಪುನರ್ವಸತಿ ಕಲ್ಪಿಸಲಾಗುತ್ತಿದೆ ಇಂತಹ ಮಕ್ಕಳನ್ನು ಕೆಳಹಂತದಲ್ಲಿ ಗುರುತಿಸಿ ಮಾಹಿತಿ ನೀಡಬೇಕು, ಕೋವಿಡ್ ನಿಂದ ತಂದೆ ತಾಯಿಯನ್ನು ಕಳೆದುಕೊಂಡವರಿಗೆ ಮಾಸಿಕ 3,500 ಹಣ ಹಾಗೂ 18 ವರ್ಷ ತುಂಬಿದ ನಂತರ 1ಲಕ್ಷ ಮತ್ತು 23 ವರ್ಷ ತುಂಬಿದ ನಂತರ 10 ಲಕ್ಷ ಪರಿಹಾರ ಧನ ಸರ್ಕಾರ ಭರಿಸುತ್ತದೆ ಎಂದು ತಿಳಿಸಿದರು.
ಕೋವಿಡ್ ಅಲ್ಲದೆ ಇತರೆ ಕಾರಣಗಳಿಂದ ಪೋಷಕರು ಮರಣ ಹೊಂದಿದರೆ ಅಂತಹ ಮಕ್ಕಳ ಪರಿಸ್ಥಿತಿ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳ ಜೀವನಕ್ಕೆ ಉಪಯುಕ್ತವಾಗುವಂತಹ ಮಾರ್ಗದರ್ಶನ ನೀಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರಕರಣಗಳನ್ನು ಪಟ್ಟಿಮಾಡಿ ಯಾರು ಯಾರಿಗೆ ಏನು ಅವಶ್ಯಕತೆ ಇದೆ ಎಂಬುದರ ಬಗ್ಗೆ ತಿಳಿದು ಅವರಿಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಹಾಯ ಮಾಡಬೇಕು,ಸೌಲಭ್ಯಗಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಮತ್ತು ಸಾಂತ್ವನ ಹೇಳಬೇಕು. ಗಂಡನನ್ನು ಕಳೆದುಕೊಂಡ ವಿಧವೆ ತನ್ನ ಮಕ್ಕಳನ್ನು ಸಾಕಲು ಅಶಕ್ತರಾಗಿರುತ್ತಾರೆ ಅಂತವರಿಗೆ ವಿಧವಾ ವೇತನ ಸೌಲಭ್ಯ ಅವರ ಮನೆ ಬಾಗಿಲಿಗೆ ತಲುಪಿಸಬೇಕು ಹಾಗೂ ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ, ಟೈಲರಿಂಗ್ ಮತ್ತು ಹೈನುಗಾರಿಕೆ ಇತ್ಯಾದಿ ಕೆಲಸಗಳ ಬಗ್ಗೆ ತರಬೇತಿ ನೀಡಿ ಸಾಲ ಸೌಲಭ್ಯಗಳನ್ನು ಒದಗಿಸಿ ಅವರನ್ನು ಸ್ವಾವಲಂಬಿಗಳಾಗಲು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು
ಅಲ್ಲದೆ ಗ್ರಾಮ ಮಟ್ಟದಲ್ಲಿ ಕಾವಲು ಸಮಿತಿ, ತಾಲೂಕು ಮಟ್ಟದಲ್ಲಿ ಸಮನ್ವಯ ಸಮಿತಿ ಸಭೆ ನಡೆಸಿ ಸಭಾ ನಡವಳಿಕೆಯಲ್ಲಿ ನಡೆದ ಪ್ರಕರಣಗಳ ಬಗ್ಗೆ ದಾಖಲಾಗಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಾಗುವಂತೆ ಮತ್ತು ಕೊಳಗೇರಿ ಪ್ರದೇಶಗಳಲ್ಲಿನ ಮಕ್ಕಳನ್ನು ಗುರ್ತಿಸಿ ಏನೆಲ್ಲಾ ಕೃತಿಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಅರಿತು ಅವರನ್ನು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು ಹಾಗೂ ಬಾಲ ಹಿತೈಷಿ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛೆಯಿದ್ದಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಅತಿವೃಷ್ಟಿ-ಅನಾವೃಷ್ಟಿ, ಬೆಂಕಿಯ ಅವಗಡಗಳು, ಸಾಂಕ್ರಾಮಿಕ ರೋಗಗಳು,ಬಾಲ್ಯವಿವಾಹ, ದೌರ್ಜನ್ಯಕ್ಕೆ ಒಳಗಾಗುವುದು ಇತ್ಯಾದಿಗಳಿಗೆ ಬಲಿಯಾದ ಮಕ್ಕಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB