ತುಮಕೂರು: ತುಮಕೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸುವ ಚಿಂತನೆ ಇದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಶನಿವಾರ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಟೆನ್ನಿಸ್ ಕೋರ್ಟ್ ಹಾಗೂ ಆಟಗಾರರ ಕೊಠಡಿಯ ನವೀಕರಣಗೊಳಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬಾರಿ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳು ನಡೆದಿವೆ. ಈ ಬಾರಿ ತುಮಕೂರಿನಲ್ಲಿ ಆಯೋಜಿಸುವಂತೆ ಅಸೋಸಿಯೇಷನ್ರವರನ್ನು ಕೇಳಿದ್ದೇನೆ. ಅವರು ಸಹ ನನ್ನ ಮನವಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಟೆನ್ನಿಸ್, ಬ್ಯಾಸ್ಕೆಟ್ ಬಾಲ್, ಜಿಮ್ನಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ಕ್ರೀಡೆಗಳು ನಡೆಯಲಿವೆ ಎಂದರು.
ತುಮಕೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲು ಸರ್ಕಾರವು 5 ಕೋಟಿ ರೂ. ಹಣ ಸಹ ನೀಡಲಿದೆ ಎಂದು ಅವರು ಹೇಳಿದರು.
ಈ ಟೆನ್ನಿಸ್ ಕೋರ್ಟ್ ನಿರ್ಮಾಣದ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಕರೆತಂದು ಆಡಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
ಶಿಕ್ಷಣ ಮತ್ತು ಕ್ರೀಡೆ ಒಟ್ಟೊಟ್ಟಿಗೆ ಕಲಿಯಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಈ ತಪ್ಪು ಕಲ್ಪನೆಯನ್ನು ಬಿಟ್ಟು ಕ್ರೀಡೆ ಮತ್ತು ಶಿಕ್ಷಣ ಎರಡಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ 2 ತಿಂಗಳ ಹಿಂದೆ ನಾನು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಈ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದ್ದೆವು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ಟೆನ್ನಿಸ್ ಕೋರ್ಟನ್ನು ಪುನರ್ ನಿರ್ಮಾಣ ಮಾಡಿಕೊಂಡುವಂತೆ ಕೇಳಿದ್ದರು. ಹಾಗಾಗಿ ಮತ್ತೆ ಈ ಟೆನ್ನಿಸ್ ಕೋರ್ಟನ್ನು ನವೀಕರಣಗೊಳಿಸುತ್ತಿದ್ದೇವೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತುಮಕೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರ. ದೂರದೃಷ್ಟಿಯಿಂದ ಅಗತ್ಯ ಸೌಲಭ್ಯ ಒದಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಯಾರಾದರೂ ಅಂತಾರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳಾಗಬಹುದು. ನಾನು ಹೈಸ್ಕೂಲ್ ಮೈದಾನದಲ್ಲಿ ಓಡುತ್ತಾ ಓಡುತ್ತಾ ಅಂತಾರಾಷ್ಟಿçÃಯ ಮಟ್ಟಕ್ಕೆ ಹೋಗಿದ್ದೆ ಎಂದು ಅವರು ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.
2003ರಲ್ಲಿ ತುಮಕೂರಿನಲ್ಲಿ ಎಟಿಪಿ ರ್ಯಾಂಕ್ ಟೆನ್ನಿಸ್ ಟೂರ್ನಿಮೆಂಟ್ ಮಾಡಬೇಕು. ಅವಕಾಶ ಕೊಡುತ್ತೀರಾ? ಎಂದು ಅಂದಿನ ಅಸೋಸಿಯೇಷನ್ ಅಧ್ಯಕ್ಷ ಸುಂದರ್ರಾಜ್ ಅವರು ನನ್ನನ್ನು ಕೇಳಿದ್ದರು. ಆಗ ಕೇವಲ 2 ತಿಂಗಳಲ್ಲಿ ಈ ಗ್ರೌಂಡ್ ನಿರ್ಮಾಣ ಮಾಡಿ ಅವಕಾಶ ಮಾಡಿಕೊಟ್ಟಿದ್ದೆವು ಎಂದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಮಾತನಾಡಿ, ಕರ್ನಾಟಕ ಸೋಲಾರ್ ಪವರ್ ಡೆವಲಪ್ಮೆಂಟ್ ಕಾರ್ಪೋರೇಷನ್ನವರು ಈ ಟೆನ್ನಿಸ್ ಕೋರ್ಟ್ ಹಾಗೂ ಕೊಠಡಿಗಳ ನವೀಕರಣಕ್ಕೆ ಸಿಎಸ್ಆರ್ ಫಂಡ್ನಲ್ಲಿ 75ಲಕ್ಷ ರೂ. ವೆಚ್ಚ ಮಾಡುತ್ತಿದ್ದಾರೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರಲ್ಲದೆ, 2003ರಲ್ಲಿ ಈ ಟೆನ್ನಿಸ್ ಕೋರ್ಟನ್ನು ಸಚಿವ ಪರಮೇಶ್ವರ್ ಉದ್ಧಾಟಿಸಿದ್ದರು. ಮತ್ತೆ 23 ವರ್ಷಗಳ ಬಳಿಕ ಅವರೇ ನವೀಕರಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದು ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಎಲ್ಲ ವಯೋಮಾನದವರು ವಾಯು ವಿಹಾರಕ್ಕೆ ಬರುತ್ತಾರೆ. ಹಾಗೆಯೇ ಕ್ರೀಡಾಪಟುಗಳು ಸಹ ಇಲ್ಲಿಗೆ ಬರುತ್ತಾರೆ. ಈ ಕಾಮಗಾರಿಯನ್ನು ಮುಂದಿನ 3 ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಅವರು ಹೇಳಿದರು.
ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಮಾತನಾಡಿ, ಬಿದರಕಟ್ಟೆ ಕ್ಯಾಂಪಸ್ನ್ನು ಆದಷ್ಟು ಬೇಗ ಉದ್ಘಾಟಿಸುವಂತೆ ಸಚಿವ ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಟೆನ್ನಿಸ್ ಕೋರ್ಟ್ ನಿರ್ಮಾಣದ ಬಳಿಕ ಸಾರ್ವಜನಿಕರು, ವಿದ್ಯಾರ್ಥಿಗಳು ಎಲ್ಲರಿಗೂ ಮುಕ್ತವಾಗಿರುತ್ತದೆ. ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW