ತುಮಕೂರು: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸಭಾಂಗಣ ಕಟ್ಟಡದ ನಿರ್ಮಾಣಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಬೇಕು. ಯಾವುದೇ ರೀತಿಯ ಆಪೇಕ್ಷೆ ಇಲ್ಲದೆ ಜನಸಮುದಾಯದ ಕೆಲಸಗಳು ಆಗಬೇಕು ಎಂದು ಸಚಿವರು ಹೇಳಿದರು.
ಸಾಮಾನ್ಯ ಪ್ರಜೆ, ಬಡ ರೈತರು ತಹಶೀಲ್ದಾರರ ಕಚೇರಿಗೆ ತೊಂದರೆ, ನೋವಿನಿಂದ ಬರುತ್ತಾರೆ. ಅಂತವರ ಕೆಲಸಗಳನ್ನು ಸುಲಭವಾಗಿ ಮಾಡಿಕೊಡಬೇಕು. ಆತ ನಗುವಿನಿಂದ ಹೋದರೆ ಅದೇ ಒಳ್ಳೆಯ ಆಡಳಿತ. ಒಂದು ದಾಖಲೆ ಪಡೆದುಕೊಳ್ಳಲು ಹತ್ತು ಬಾರಿ ಅಲೆಯಬಾರದು. ಈ ವಿಚಾರವನ್ನು ಅಧಿಕಾರಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಅವುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳನ್ನು ಸುಂದರವಾಗಿ, ಕಾರ್ಯಾತ್ಮಕವಾಗಿ ಹಾಗೂ ಆಧುನಿಕ ಆಡಳಿತಕ್ಕೆ ತಕ್ಕಂತೆ ನಿರ್ಮಿಸಿದ್ದಾರೆ. ನಮ್ಮಲ್ಲಿ ಅಂತಹ ಕಟ್ಟಡಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 2ನೇ ಹಂತದಲ್ಲಿ ನೇಮಕವಾಗಿರುವ 15 ಅಭ್ಯರ್ಥಿಗಳಿಗೆ ಸಚಿವರು ಆದೇಶ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW