ಉಡುಪಿ: ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಘಟಕವಾಗಿರುವ ಟಿ.ಎ.ಪೈ. ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ 10ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ಅವರು ತಮ್ಮ ಚಾತುರ್ಯ, ಸಮಯ ಪ್ರಜ್ಞೆ ಮತ್ತು ಧೈರ್ಯಶಾಲಿ ಮಹತ್ಕಾರ್ಯಕ್ಕಾಗಿ ರಾಜ್ಯ ಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರದಾನ ಮಾಡಿತು.
ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಐಸಿಡಿಎಸ್ ಗೋಲ್ಡನ್ ಜ್ಯೂಬಿಲಿ ಸಮಾರಂಭದಲ್ಲಿ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ, 2025ರ ನವೆಂಬರ್ 28ರಂದು, ಶುಕ್ರವಾರ, ಈ ಗೌರವವನ್ನು ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಸರ್ಕಾರವು ಮಕ್ಕಳ ಧೈರ್ಯ, ಸಮಯಪ್ರಜ್ಞೆ ಮತ್ತು ತ್ವರಿತ ನಿರ್ಧಾರಶಕ್ತಿಗೆ ನೀಡುವ ಅತ್ಯುನ್ನತ ಗೌರವಗಳಲ್ಲಿ ಹೊಯ್ಸಳ ಶೌರ್ಯ ಪ್ರಶಸ್ತಿಯು ಪ್ರಮುಖವಾಗಿದೆ. ಈ ಪ್ರಶಸ್ತಿ ದೊರೆತ ದೀಪೇಶ್ ಅವರು ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮತ್ತು ಟಿ.ಎ.ಪೈ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಇತಿಹಾಸದಲ್ಲಿ ರಾಜ್ಯ ಮಟ್ಟದ ಈ ಗೌರವವನ್ನು ಸ್ವೀಕರಿಸಿದ ಮೊದಲ ವಿದ್ಯಾರ್ಥಿಯಾಗಿ ಮಹತ್ವದ ಸಾಧನೆಯನ್ನು ನಿರ್ಮಿಸಿದ್ದಾರೆ. 2025–26 ನೇ ಸಾಲಿನಲ್ಲಿ ಶಿವಮೊಗ್ಗ ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ “ಏಕೈಕ ವಿಜೇತ” ಎಂಬ ವಿಶೇಷತೆಗೂ ಅವರು ಭಾಜಕರಾಗಿದ್ದಾರೆ.
ಶಾಲೆಯ ವ್ಯವಸ್ಥಾಪಕ ಮಂಡಳಿ, ಮುಖ್ಯೋಪಾಧ್ಯಾಯಿನಿ ವಿನೋದ ಶೆಟ್ಟಿ, ಶಿಕ್ಷಕ ವೃಂದ, ಶಿಕ್ಷಕ ರಕ್ಷಕ ಸಂಘ, ಹಳೆಯ ವಿದ್ಯಾರ್ಥಿ ಸಂಘ ಮತ್ತು ಎಲ್ಲಾ ವಿದ್ಯಾರ್ಥಿಗಳು ದೀಪೇಶ್ ಅವರ ಸಾಧನೆಯ ಬಗ್ಗೆ ಗಾಢ ಹೆಮ್ಮೆ ವ್ಯಕ್ತಪಡಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಮತ್ತು ಮುಂದಿನ ಯಶಸ್ಸಿಗೆ ಶುಭ ಹಾರೈಸಿದ್ದಾರೆ.
1978ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಟಿ.ಎಂ.ಎ. ಪೈ ಅವರು ಸ್ಥಾಪಿಸಿದ ಈ ಶಾಲೆಯು ಶೀಘ್ರದಲ್ಲೇ ತನ್ನ ಸುವರ್ಣ ಮಹೋತ್ಸವ ಹಂತವನ್ನು ತಲುಪುತ್ತಿರುವುದರಿಂದ, ಪ್ರಸ್ತುತ ಹೆಮ್ಮೆಯ ವಿದ್ಯಾರ್ಥಿಯಾದ ದೀಪೇಶ್ ದೀಪಕ್ ಶೆಣೈ ಪಡೆದ ಈ ಅತ್ಯುನ್ನತ ಗೌರವವು ಸಂಸ್ಥೆಯ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಗೆ ಇನ್ನಷ್ಟು ವಿಶೇಷ ನೀಡಿದೆ ಎಂದು ಶಾಲಾ ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


