ತುಮಕೂರು: ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಇದ್ದ ಶೇ.15 ಮೀಸಲನ್ನು ಶೇ.17ಕ್ಕೆ ಹಾಗೂ ಪ.ಪಂಗಡಗಳಿಗೆ ಇದ್ದ ಶೇ.3ರ ಮೀಸಲು ಪ್ರಮಾಣವನ್ನು ಶೇ.7ಕ್ಕೆ ಏರಿಕೆ ಮಾಡಿ ಮೂರುವರೆ ವರ್ಷಗಳೇ ಕಳೆದಿದ್ದರೂ, ಕೇಂದ್ರ ಸರ್ಕಾರ ಸಂವಿಧಾನದ ಷೆಡ್ಯೂಲ್ ಗೆ ಸೇರಿಸದ ಪರಿಣಾಮ ಈವರೆಗೆ ಜಾರಿಯಾಗಿಲ್ಲ. ಹಾಗಾಗಿ ಸಿಎಂ, ಕೇಂದ್ರ ಸಚಿವರು, ಸಂಸದರು ಈ ವಿಷಯವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನವನ್ನು ಗಂಭೀರವಾಗಿ ಮಾಡಬೇಕು ಎಂದು ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022ರಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ವಯ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಿ ಆದೇಶ ಮಾಡಿದ್ದರು. ಇದರ ಜಾರಿ ಸಂಬಂಧ 2023ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದು, ಈಗ ಮೀಸಲು ಪ್ರಮಾಣ ಹೆಚ್ಚಳದ ಚೆಂಡು ಕೇಂದ್ರದ ಅಂಗಳದಲ್ಲಿದೆ. ಸಂವಿಧಾನದ ಷೆಡ್ಯೂಲ್ 9ಕ್ಕೆ ಮೀಸಲು ಹೆಚ್ಚಳವನ್ನು ಸೇರಿಸದ ಹೊರತು ಅದರ ಜಾರಿ ಸಾಧ್ಯವಿಲ್ಲ. ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ.50 ಮೀಸಲು ಮೀರಬಾರದೆಂಬ ನಿಯಮ ಕರ್ನಾಟಕಕ್ಕೆ ಮಾತ್ರ ಏಕೆ? ತಮಿಳುನಾಡಿನಲ್ಲಿ ಈಗಾಗಲೇ ಜನಸಂಖ್ಯೆ ಆಧಾರದಲ್ಲಿ ಶೇ.69ರಷ್ಟು ಮೀಸಲು ಕಲ್ಪಿಸಲಾಗಿದೆ.
2017ರಲ್ಲಿ ಕೇವಲ 48 ಗಂಟೆಯಲ್ಲೇ ಸಂಸತ್ತಿನಲ್ಲಿ ಚರ್ಚೆ ಮಾಡಿ ಬ್ರಾಹ್ಮಣ ಸೇರಿ ಮೇಲ್ವರ್ಗಗಳಿಗೆ ಶೇ.10ರಷ್ಟು ಇಡಬ್ಲ್ಯುಎಸ್ ಮೀಸಲು ಜಾರಿಗೊಳಿಸಲಾಯಿತು. ಆದರೆ ಪ.ಜಾತಿ, ವರ್ಗ, ಹಿಂದುಳಿದವರ ವಿಷಯದಲ್ಲಿ ಮಾತ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಷೆಡ್ಯೂಲ್ 9ಕ್ಕೆ ಸೇರಿಸುವ ವಿಚಾರದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಸಚಿವರು, ಶಾಸಕರೇ, ಕೇಂದ್ರದ ಮಂತ್ರಿಗಳು, ಸಂಸದರೇ ನಿಮಗೆ ಕೈ ಮುಗಿಯುತ್ತೇವೆ. ಮೀಸಲಾತಿ ಎಂಬುದು ಭಿಕ್ಷೆಯಲ್ಲ, ಅಂಬೇಡ್ಕರ್ ಅವರು ಹೇಳಿರುವಂತೆ ಅದು ನಮ್ಮ ಸಾಂವಿಧಾನಿಕ ಹಕ್ಕು. ಹಾಗಾಗಿ ಸದನದ ಹೊರಗೆ ಮತ್ತು ಒಳಗೆ ಈ ಬಗ್ಗೆ ಧ್ವನಿ ಎತ್ತಿ. ಈ ಸಮುದಾಯದ ಮತಗಳಿಂದ ನೀವು ಅಧಿಕಾರದಲ್ಲಿದ್ದೀರಿ ಎಂಬುದನ್ನು ಮರೆಯಬೇಡಿ ಎಂದು ಉಗ್ರಪ್ಪ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


