ತುಮಕೂರು: ಪ್ರತಿಯೊಬ್ಬರು ಖಾದಿ ಬಟ್ಟೆಗಳನ್ನು ಧರಿಸುವ ಮೂಲಕ ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಬೇಕು ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಹೇಳಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು (ಕೈಮಗ್ಗ) ಜವಳಿ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳ ನಿ., ಕಾವೇರಿ ಹ್ಯಾಂಡ್ಲೂಮ್ಸ್, ಬೆಂಗಳೂರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿ.ಪಂ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ 14 ದಿನಗಳ ಕಾಲ ಏರ್ಪಡಿಸಲಾಗಿರುವ ರಾಜ್ಯ ಹ್ಯಾತ್ಕರ್ಗ ವಿಶೇಷ ಕೈಮಗ್ಗ ಮೇಳ ವಸ್ತು ಭಂಡಾರ-2026 ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರರು ಬಹಳ ಕಷ್ಟಪಟ್ಟು ಬಟ್ಟೆಗಳನ್ನು ನೆಯ್ಗೆ ಮಾಡುತ್ತಾರೆ. ಅವರು ನೆಯ್ಗೆ ಮಾಡುವ ಬಟ್ಟೆಗಳನ್ನು ಪ್ರತಿಯೊಬ್ಬರೂ ಖರೀದಿಸಿ ತೊಟ್ಟರೆ ಆ ಸಮುದಾಯದ ಬೆಳವಣಿಗೆಗೆ ಸಹಕರಿಸಿದಂತಾಗುತ್ತದೆ. ಹಾಗಾಗಿ ನಾವೆಲ್ಲರೂ ಹೆಚ್ಚು ಹೆಚ್ಚು ಖಾದಿ ಬಟ್ಟೆಗಳನ್ನು ಧರಿಸಲು ಮುಂದಾಗಬೇಕು ಎಂದರು. ವ್ಯಕ್ತಿತ್ವದಲ್ಲಿ ತೂಕ ಇದ್ದರೆ ನಾವು ತೊಡುವ ಬಟ್ಟೆಗೂ ಮೌಲ್ಯ ಬರುತ್ತದೆ. ಬಣ್ಣ ಬಣ್ಣದ ಬಟ್ಟೆಗಳಿಂದ ವ್ಯಕ್ತಿಯ ಮೌಲ್ಯ ಹೆಚ್ಚುವುದಿಲ್ಲ. 14 ದಿನಗಳ ಕಾಲ ನಡೆಯುವ ನೇಕಾರರ ಮಾರಾಟ ಮೇಳ ಯಶಸ್ವಿಯಾಗಲಿ, ತುಮಕೂರಿನ ಮನೆ ಮನೆಗೆ ತಲುಪಲಿ ಎಂದು ಅವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳ ನಿ. ಹಾಗೂ ಕಾವೇರಿ ಹ್ಯಾಂಡ್ಲೂಮ್ ಅಧ್ಯಕ್ಷ ಬಿ.ಜೆ. ಗಣೇಶ್ ಮಾತನಾಡಿ, ರಾಜ್ಯದಲ್ಲಿ ಕೈಮಗ್ಗ ಉತ್ಪನ್ನಗಳನ್ನು ಜನತೆ ಹೆಚ್ಚು ಹೆಚ್ಚು ಬಳಸುವ ಮೂಲಕ ನೇಕಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಕೈಮಗ್ಗ ನೇಕಾರ ಸಹಕಾರ ಸಂಘಗಳು / ಕೈಮಗ್ಗ ನೇಕಾರರಿಂದ ಉತ್ಪಾದಿಸಲ್ಪಟ್ಟ ಕೈಮಗ್ಗ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದಾಗಿದೆ. ಈ ಮೂಲಕ ಕೈಮಗ್ಗ ನೇಕಾರರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಹಾಗೂ ನೇಕಾರರಿಗೆ ನಿರಂತರ ಉದ್ಯೋಗ ಕಲ್ಪಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದರು.
ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದ ಕೈಮಗ್ಗ ಸಂಸ್ಥೆಗಳು ತಮ್ಮ ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರ ಪ್ರದೇಶ, ಛತ್ತೀಸ್ಗಡ, ಜಾರ್ಖಂಡ್, ಹರಿಯಾಣ, ದೆಹಲಿ, ಗೋವಾ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯದ ಕೈಮಗ್ಗ ನೇಕಾರರ ಸಂಘದವರು ಮತ್ತು ನೇಕಾರರು ಸೇರಿ 60 ಮಳಿಗೆಗಳನ್ನು ತೆರೆಯಲಾಗಿದ್ದು, ಕೈಮಗ್ಗ ಉತ್ಪನ್ನಗಳ ಮಾರಾಟ ನಡೆಯುತ್ತಿದೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಜಿ.ಜಿ. ಸಂತೋಷ್ ಅವರು, ಸದರಿ ಮೇಳದಲ್ಲಿ ತುಮಕೂರು ಜಿಲ್ಲೆಯ ಪ್ರಸಿದ್ಧ ಕಲ್ಲೂರು ರೇಷ್ಮೆ ಅಪ್ಪಟ ಸೀರೆಗಳು, ವೈ.ಎನ್.ಹೊಸಕೋಟೆ ಅಪ್ಪಟ ರೇಷ್ಮೆ ಸೀರೆಗಳು, ಮೊಳಕಾಲ್ಮೂರು ಅಪ್ಪಟ ರೇಷ್ಮೆ ಸೀರೆಗಳು, ಇಳಕಲ್ ಸೀರೆಗಳು, ಗುಳೇದಗುಡ್ಡ ಕಣ ಸೀರೆಗಳು, ಪಟ್ಟದ ಅಂಚು ಸೀರೆಗಳು ಹಾಗೂ ಹೊರ ರಾಜ್ಯದ ಕಾಶ್ಮೀರಿ ಶಾಲುಗಳು, ಪೋಚಂಪಲ್ಲಿ ಸೀರೆಗಳು, ಮಂಗಳಗಿರಿ ಸೀರೆಗಳು, ಉಲ್ಲನ್ ಬ್ಲಾಂಕೆಟ್ ಇತ್ಯಾದಿ ಸೇರಿದಂತೆ ಎಲ್ಲ ರೀತಿಯ ಕೈಮಗ್ಗ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ. ಇದರ ಸದುಪಯೋಗವನ್ನು ತುಮಕೂರಿನ ಜನತೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


