ತುಮಕೂರು: ಮುಂದೆ ರಾಜ್ಯದಲ್ಲಿ ಜನತಾದಳ ಸರ್ಕಾರ ಅಧಿಕಾರಕ್ಕೆ ಬರಬೇಕು. ಅದಕ್ಕೆ ಈಗಿನಿಂದಲೇ ತಳಮಟ್ಟದಿಂದ ಪಕ್ಷ ಸಂಘಟಿಸಬೇಕು. ಜಿಲ್ಲೆಯಲ್ಲಿ ಈ ಹಿಂದೆ 11 ವಿಧಾನಸಭಾ ಕ್ಷೇತ್ರಗಳಲ್ಲಿ 9 ಸ್ಥಾನಗಳನ್ನು ಗೆಲ್ಲಿಸಿ ತುಮಕೂರು ಜಿಲ್ಲೆ ಕೊಡುಗೆ ನೀಡಿದೆ ಅಂತಹ ಸುವರ್ಣ ಕಾಲ 2028ಕ್ಕೆ ಮರುಕಳಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ನಾಗವಲ್ಲಿಯಲ್ಲಿ ಶನಿವಾರ ನಡೆದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರೊಂದಿಗೆ ಜನತಾದಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕಟ್ಟಿದ ಜೆಡಿಎಸ್ 25 ವರ್ಷ ಪೂರೈಸಿದೆ. ಇದರ ಯಶಸ್ಸು ಕಾರ್ಯಕರ್ತರಿಗೆ ಸಲ್ಲಬೇಕು. ಎಂತಹ ಕಷ್ಟಕಾಲದಲ್ಲೂ ಕಾರ್ಯಕರ್ತರು ಪಕ್ಷವನ್ನು ಬಿಡದೆ ಬೆಂಬಲಿಸಿದ್ದಾರೆ. ಆದರೆ ಇಲ್ಲಿ ಬೆಳೆದು ಉನ್ನತ ಸ್ಥಾನಕ್ಕೆ ಏರಿದವರು ಪಕ್ಷ ಬಿಟ್ಟುಹೋಗಿದ್ದಾರೆ. ಆದರೆ ಪಕ್ಷದ ತತ್ವದಡಿ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ಸಿಗಬೇಕು. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಬೇಕು ಎಂದು ಸಲಹೆ ನೀಡಿದರು.
ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿಗಾಗಿ ತಾವು ರಾಜ್ಯಾದ್ಯಂತ ಜನರೊಂದಿಗೆ ಜನತಾದಳ ಸಮಾವೇಶ ನಡೆಸುತ್ತಿದ್ದು, ಇದುವರೆಗೆ 54 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳಾಗಿವೆ. ಈ ತಿಂಗಳ 27ರಂದು ವಿಜಯಪುರದಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಸಮಾವೇಶ ಹಾಗೂ ಪಕ್ಷದ ಬೆಳ್ಳಿ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ. ತುಮಕೂರು ಜಿಲ್ಲೆಯ 11 ಕ್ಷೇತ್ರಗಳು ಒಳಗೊಂಡ ಬೆಳ್ಳಿ ಹಬ್ಬ ಸಮಾವೇಶ ಆಯೋಜಿಸಲು ಚರ್ಚೆ ನಡೆದಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ, ಬದ್ಧತೆ ಇಲ್ಲ. ರೈತರ ಯಾವ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಈ ಸರ್ಕಾರದ ಅವಧಿಯಲ್ಲಿ 2800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಜಿಲ್ಲೆಯ 40ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟದ ರೈತರಿಗೆ ಪರಿಹಾರ ನೀಡಿ, ಅವರಿಗೆ ಸ್ಪಂದಿಸುವ ಪ್ರಯತ್ನವನ್ನು ಈ ಸರ್ಕಾರ ಮಾಡಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ನಾಯಕರನ್ನು ತಯಾರಿಸುವ ಕಾರ್ಖಾನೆಯಾಗಿದೆ. ಇಲ್ಲಿ ನಾಯಕರಾಗಿ ಬೆಳೆದು ಉನ್ನತ ಸ್ಥಾನ ಪಡೆದ ಸುಮಾರು 50ಕ್ಕೂ ಹೆಚ್ಚು ನಾಯಕರು ಜೆಡಿಎಸ್ ಬಿಟ್ಟುಹೋಗಿ ಬೇರೆ ಪಕ್ಷ ಸೇರಿದ್ದಾರೆ. ಚುನಾವಣೆಗಳಲ್ಲಿ ತಮ್ಮನ್ನು ಗೆಲ್ಲಿಸಿದ, ರಾಜಕೀಯವಾಗಿ ಬೆಳೆಸಿದ ಕಾರ್ಯಕರ್ತರನ್ನು ಬೀದಿಯಲ್ಲಿ ಬಿಟ್ಟುಹೋಗುವುದು ನಾಯಕನಾದವನಿಗೆ ಶೋಭೆತರುವುದಿಲ್ಲ. ನಾಯಕರು ಹೋದರೂ ನಾಯಕರನ್ನು ರೂಪಿಸುವ ಶಕ್ತಿವಂತ, ಚಿನ್ನದಂತಹ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ಯಾರೇ ಕೈ ಬಿಟ್ಟರೂ ನಾವು ನಿಮ್ಮನ್ನು ಬಿಡುವುದಿಲ್ಲ, ನಿಮ್ಮ ಜೊತೆಗಿರುತ್ತೇವೆ ಎಂದು ಕಾರ್ಯಕರ್ತರು ಪಕ್ಷದ ಪರ ಗಟ್ಟಿಯಾಗಿ ನಿಂತಿದ್ದಾರೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಹಿಂದೆ ನಾನು 9 ವರ್ಷ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ದೇವೇಗೌಡರು, ಕುಮಾರಸ್ವಾಮಿಯವರು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಅಧ್ಯಕ್ಷನಾಗುವ ಅವಕಾಶ ನೀಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಆಡಳಿತಾವಧಿ ಅಭಿವೃದ್ಧಿಯಲ್ಲಿ ದಾಖಲೆ ಮಾಡಿದ ಕಾಲಘಟ್ಟ. ಗ್ರಾಮಾಂತರ ಕ್ಷೇತ್ರದಲ್ಲಿ ಆ ಅವಧಿಯಲ್ಲಿ ಗೂಳೂರು, ಹೆಬ್ಬೂರು ಪೀಠಾಂತರದವರಿ, ತುಮಕೂರು ವಿವಿಗೆ ಬಿಡದರಕಟ್ಟೆಯಲ್ಲಿ ಜಾಗ, ಆಸ್ಪತ್ರೆಗಳು, 6 ಉಪವಿದ್ಯುತ್ ಸ್ಥಾವರಗಳ ಸ್ಥಾಪನೆ, ಶಾಲಾ, ಕಾಲೇಜುಗಳ ಸ್ಥಾಪನೆ, ನೀರಾವರಿ ಕಾರ್ಯಕ್ರಮಗಳು, ರಸ್ತೆಗಳ ಅಭಿವೃದ್ಧಿ ಹೀಗೆ ಹಲವಾರು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಚ್ಡಿಕೆ ಕಾರಣರಾದರು. ಮತ್ತೊಮ್ಮೆ ಅಂತಹ ಅಭಿವೃದ್ಧಿಪರ್ವ ಮರುಕಳಿಸಬೇಕೆಂದರೆ 2028ರಲ್ಲಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಗುಬ್ಬಿ ನಾಗರಾಜು, ಹೊದಿಕೆರೆ ಮಂಜುನಾಥ್, ಗಂಗಣ್ಣ, ವಿಜಯ್ ಗೌಡ, ಬೆಳಗುಂಬ ವೆಂಕಟೇಶ್, ತಿಮ್ಮಪ್ಪಗೌಡರು, ಯೋಗಾನಂದಕುಮಾರ್, ಗೂಳೂರು ನವೀನ್, ಲೀಲಾವತಿ, ಹನುಮಂತರಾಯಪ್ಪ ಮೊದಲಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


