ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಸರಣಿ ಟ್ವೀಟ್ ಹಾಗೂ ಹೇಳಿಕೆಗಳ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅಧಿಕಾರಕ್ಕಾಗಿ ಕುರುಬ ಸಮಾಜವನ್ನು ಎಳೆದು ತರುವುದು ನ್ಯಾಯವಲ್ಲ, ಸಿದ್ದರಾಮಯ್ಯ ಅವರಿಗೆ ಕುರ್ಚಿ ಬಿಟ್ಟುಕೊಡುವ ಜಾಯಮಾನವೇ ಇಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಜಾತಿ ರಾಜಕಾರಣದ ಆರೋಪ: ಸಿದ್ದರಾಮಯ್ಯ ಅವರು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳುವಾಗ ಕುರುಬ ಸಮುದಾಯದ ಹೆಸರನ್ನು ಬಳಸುತ್ತಿರುವುದಕ್ಕೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಸಿದ್ದರಾಮಯ್ಯ ಬೆಳೆಯಲು ಕೇವಲ ಒಂದು ಸಮುದಾಯವಲ್ಲ, ಎಲ್ಲಾ ಸಮುದಾಯಗಳ ಬೆಂಬಲವಿದೆ. ಈಗ ಅಧಿಕಾರ ಉಳಿಸಿಕೊಳ್ಳಲು ಜಾತಿ ಕಾರ್ಡ್ ಬಳಸುವುದು ಸರಿಯಲ್ಲ” ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು ಈ ಸಂದೇಶವನ್ನು ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ, ತಮ್ಮನ್ನು ಸಿಎಂ ಸ್ಥಾನದಿಂದ ಇಳಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ನಾಯಕರಿಗೇ ನೀಡಿದಂತಿದೆ. ಅವರು ಈಗ ಕಾಂಗ್ರೆಸ್ನ ಹಳೆಯ ನಾಯಕರನ್ನೇ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಎಚ್ಡಿಕೆ ಆರೋಪಿಸಿದ್ದಾರೆ.
ಅಧಿಕಾರ ದಾಹ: “ನಾನು ಸಿದ್ದರಾಮಯ್ಯ ಅವರ ನಡವಳಿಕೆಯನ್ನು ಜೆಡಿಎಸ್ನಲ್ಲಿದ್ದ ಕಾಲದಿಂದಲೂ ನೋಡಿದ್ದೇನೆ. ಅವರಿಗೆ ವೈಯಕ್ತಿಕ ಕುರ್ಚಿ ಮುಖ್ಯವೇ ಹೊರತು ಅಹಿಂದ ಅಥವಾ ರಾಜ್ಯದ ಜನರ ಹಿತವಲ್ಲ. ಆಶ್ರಯ ಕೊಟ್ಟ ಪಕ್ಷವನ್ನೇ ಆವರಿಸಿಕೊಳ್ಳುವುದು ಅವರ ಗುಣ” ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಹೊಸ ಅಸ್ತ್ರ: ಸಿದ್ದರಾಮಯ್ಯ ಅವರು ‘ನಾನು ಇಲ್ಲದಿದ್ದರೆ ಕಾಂಗ್ರೆಸ್ ಇಲ್ಲ’ ಎಂಬ ವಾತಾವರಣ ನಿರ್ಮಿಸುತ್ತಿದ್ದಾರೆ. ಇದು ಸಿಎಂ ಸ್ಥಾನ ಬಿಡದಿರಲು ಅವರು ಹೂಡಿರುವ ಹೊಸ ಅಸ್ತ್ರವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಮೈತ್ರಿ ಸಮನ್ವಯ ಸಮಿತಿ: ಇದೇ ವೇಳೆ ಬಿಜೆಪಿ–ಜೆಡಿಎಸ್ ಮೈತ್ರಿಯ ಬಗ್ಗೆ ಮಾತನಾಡಿದ ಅವರು, ಎರಡೂ ಪಕ್ಷಗಳ ನಡುವಿನ ಗೊಂದಲ ನಿವಾರಿಸಲು ಸಮನ್ವಯ ಸಮಿತಿ ರಚನೆಯಾಗಬೇಕು ಎಂಬುದು ಮೊದಲಿನಿಂದಲೂ ನಮ್ಮ ಆಶಯವಾಗಿದೆ. ಮೈತ್ರಿಗೆ ಧಕ್ಕೆ ಬಾರದಂತೆ ನಾವು ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯವಾಗಿದೆ, ಅವರ ಇಂದಿನ ನಡವಳಿಕೆಯನ್ನು ಅವರನ್ನು ಬೆಳೆಸಿದವರೂ ಸಹ ಊಹೆ ಮಾಡಿರಲಿಲ್ಲ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಲೇವಡಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


