ಪಾವಗಡ : ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ್ ಅವರು ತಮ್ಮದೇ ಕಚೇರಿಯಲ್ಲಿ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ.
ಪಟ್ಟಣದ ಆಪ್ ಬಂಡೆ ಪ್ರದೇಶದಲ್ಲಿರುವ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಸಾವಿಗೆ ಮುನ್ನ ಮಲ್ಲಿಕಾರ್ಜುನ್ ಅವರು ವಿಡಿಯೋ ಸಂದೇಶವನ್ನು ದಾಖಲಿಸಿ, ತಮ್ಮ ಸಹೋದ್ಯೋಗಿಗಳಿಗೆ ಕಳುಹಿಸಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.
ಆ ವಿಡಿಯೋದಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ ಕಿರುಕುಳವೇ ತಮ್ಮ ಸಾವಿಗೆ ಕಾರಣ ಎಂದು ಆರೋಪಿಸಿರುವುದಾಗಿ ಮೂಲಗಳು ತಿಳಿಸಿವೆ.
ಕಳೆದ ಮೂರು ವರ್ಷಗಳಿಂದ ಪಾವಗಡದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ್ ಅವರ ಸೇವಾ ಅವಧಿ ಇನ್ನೂ ಒಂದೇ ವಾರದಲ್ಲಿ ಮುಕ್ತಾಯಗೊಳ್ಳಬೇಕಿತ್ತು. ನಿವೃತ್ತಿಗೆ ಮುನ್ನವೇ ಇಂತಹ ದುರಂತ ಸಂಭವಿಸಿರುವುದು ಎಲ್ಲರಲ್ಲೂ ಆಘಾತ ಮೂಡಿಸಿದೆ.
ಇವರು ಮೂಲತಃ ಪಾವಗಡ ತಾಲ್ಲೂಕಿನ ಗುಂಡರ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಮಲ್ಲಿಕಾರ್ಜುನ್ ಅವರ ನಿಧನದಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಮಗನ ಮುಂದೆ ತಾಯಿ ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಮನಕಲಕುವಂತಿವೆ.
ಇನ್ನೂ ಘಟನಾ ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತ ಮಲ್ಲಿಕಾರ್ಜುನ್ ಕೊನೆಯ ಸಂದೇಶ
“ನಮ್ಮ ತಾಯಿ, ಹೆಂಡತಿ, ಮಕ್ಕಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರಿಗೆ ನಾನು ಇನ್ನೂ ಸಹಾಯ ಮಾಡಬೇಕಿತ್ತು, ಆದರೆ ಅದು ಆಗುತ್ತಿಲ್ಲ. ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ನನಗೆ ತೊಂದರೆ ಕೊಟ್ಟ ಕಾರಣದಿಂದಲೇ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವರಿಗೆ ದೇವರು ಶಿಕ್ಷೆ ಕೊಡುತ್ತಾನೆ. ನಮ್ಮ ಕುಟುಂಬದವರು ಯಾವುದೇ ಪ್ರತೀಕಾರಕ್ಕೆ ಹೋಗಬಾರದು, ಕಾನೂನು ಮತ್ತು ದೇವರೇ ನ್ಯಾಯ ಕೊಡುತ್ತಾರೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ಘಟನೆ ಅಧಿಕಾರಿಗಳ ನಡುವಿನ ಒತ್ತಡ, ಕಿರುಕುಳ ಮತ್ತು ಮಾನಸಿಕ ಒತ್ತಡದ ಪ್ರಶ್ನೆಗಳನ್ನು ಮತ್ತೆ ಮುಂದಿಟ್ಟಿದೆ. ತನಿಖೆಯ ನಂತರವೇ ನಿಖರ ಕಾರಣಗಳು ಬಹಿರಂಗವಾಗಲಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


