ಕುಣಿಗಲ್: ವಿಪಕ್ಷಗಳು ಸರ್ಕಾರ ದಿವಾಳಿಯಾಗಿದೆ ಎಂದು ಆರೋಪ ಮಾಡುತ್ತಿದ್ದು, ಈ ಆರೋಪಗಳು ಶುದ್ಧ ಸುಳ್ಳು ಎಂದು ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಲೂಕಿನ ಅಮೃತೂರು ಹೋಬಳಿ ಹೊಸಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಕುಣಿಗಲ್ ಕ್ಷೇತ್ರದ ವಿವಿಧ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಿದೆ. ವಿಪಕ್ಷಗಳ ಸರ್ಕಾರದ ವಿರುದ್ಧದ ದಿವಾಳಿ ಆರೋಪ ಶುದ್ಧ ಸುಳ್ಳು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಆ ಮೂಲಕ ಮನೆ ಒಡತಿಯ ಖಾತೆಗೆ ಎರಡು ಸಾವಿರ, ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವ ನಿಧಿ ಜಾರಿಗೆ ತಂದು ಇದಕ್ಕಾಗಿ ಪ್ರತಿ ವರ್ಷ 56 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಇದರಿಂದ ರೈತರು, ದೀನ ದಲಿತರು, ಮಹಿಳೆಯರು ಮತ್ತು ಬಡ ವರ್ಗದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ನನ್ನ ಕ್ಷೇತ್ರದ ನೀರಾವರಿ, ರಸ್ತೆ, ಸೇತುವೆ, ವಿವಿಧ ಇಲಾಖೆಯ ಸರ್ಕಾರಿ ಕಟ್ಟಡ, ಕುಡಿಯುವ ನೀರು ಸೇರಿ ಜನರ ಮೂಲಭೂತ ಸೌಲಭ್ಯಕ್ಕಾಗಿ ಈವರೆಗೂ ಸುಮಾರು 1,500 ಕೋಟಿ ರೂ.ಗಳು ಅನುದಾನ ನೀಡಿದೆ, ಇನ್ನೆಲ್ಲಿ ಸರ್ಕಾರ ದಿವಾಳಿಯಾಗಿದೆ? ಅವರ ಹತಾಶೆ ಮತ್ತು ಸುಳ್ಳು ಆರೋಪಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
15 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ: ಬಸವನ ಮತ್ತಿಕೆರೆ ರಸ್ತೆ 70 ಲಕ್ಷ, ಹೊಸಪುರ ಗೊಲ್ಲರಹಟ್ಟಿ ಸಿ.ಸಿ. ರಸ್ತೆ, ಚರಂಡಿ 50 ಲಕ್ಷ, ಕೊಡಗಿಹಳ್ಳಿ ಮಲ್ಲಾಪುರ ರಸ್ತೆ ಅಭಿವೃದ್ಧಿಗೆ 30 ಲಕ್ಷ, ಪಡುವಗೆರೆ ರಸ್ತೆ, ಚರಂಡಿ 1 ಕೋಟಿ, ಯಡವಾಣಿ ರಸ್ತೆ, ಚರಂಡಿಗೆ 4.50 ಕೋಟಿ, ಅರ್ಜುನಹಳ್ಳಿಯಿಂದ ಎಮ್ಮೆ ಕಾಲೋನಿ ರಸ್ತೆ 1 ಕೋಟಿ, ತೂಬು ದುರಸ್ತಿಗೆ 4.50 ಕೋಟಿ ಹಾಗೂ ಸರ್ಕಾರಿ ಆಸ್ಪತ್ರೆ ದುರಸ್ತಿಗೆ 2 ಕೋಟಿ ಸೇರಿದಂತೆ 15 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಹೇಮಾವತಿ ವಿವಿ ಐ ಇ ರುದ್ರೇಶ್, ಗ್ರಾ.ಪಂ ಮಾಜಿ ಅಧ್ಯಕ್ಷ ಅನಂತರಾಮು ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


