ಚಿಕ್ಕನಾಯಕನಹಳ್ಳಿ: ಸಂವಿಧಾನ ಪೀಠಿಕೆಯಲ್ಲಿ ಶಿಕ್ಷಣ ಕ್ಷೇತ್ರವನ್ನು ಕೈ ಬಿಡಲಾಗಿದೆ. ಈ ಬಗ್ಗೆ ಸದನದಲ್ಲಿ ಮಾತನಾಡಲಾಗುವುದು. ಈ ವಿಷಯವಾಗಿ ಇಂದೇ ಸರ್ಕಾರಕ್ಕೆ ಪತ್ರ ಬರೆದು ಶಿಕ್ಷಣವನ್ನು ಸಂವಿಧಾನ ಪೀಠಿಕೆಯಲ್ಲಿ ಸೇರಿಸಲು ಒತ್ತಾಯಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಅವರು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜನ್ಮ ದಿನ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ರವರ 119ನೇ ಜನ್ಮ ದಿನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಎಲ್ಲಾ ದಾರ್ಶನಿಕರ ಜಯಂತಿಯನ್ನು ಒಂದೇ ದಿನ ಮಾಡಿದ್ದೆವು. ಅದರಿಂದ ನಾವೆಲ್ಲರು ಒಂದೇ ಎಂಬ ಭಾವನೆ ಮೂಡಿತ್ತು. ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು, ಅದೇ ರೀತಿ ನಾವೂ ಸಹ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಿದ್ದೇವೆ, ಎಲ್ಲಾ ಸಮುದಾಯದವರನ್ನು ಒಟ್ಟಿಗೆ ತೆಗೆದು ಕೊಂಡು ಹೋಗುತ್ತಿದ್ದೇವೆ ಎಂದರು.
ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಆ ವ್ಯಕ್ತಿಗೆ ಸಿಗದೇ ಇರುವಂತಹ ಸೌಲಭ್ಯವನ್ನು ನೀಡಿದಾಗಲೇ ಅಂಬೇಡ್ಕರ್ ಕಂಡಂತಹ ಸಮಾನತೆಯ ಕನಸು ಸಾರ್ಥಕವಾಗುತ್ತದೆ. ಮೊಬೈಲ್ ಬಳಕೆ ಇರದ ದಿನಗಳಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಅಪಾರ ಜ್ಞಾನದಿಂದ ಸಂವಿಧಾನ ರಚಿಸಿ ಜಗತ್ತಿಗೆ ನೀಡಿದವರು. ಬಾಬು ಜಗಜೀವನ್ ರಾಮ್ ದಮನಿತರಿಗೆ ಶಕ್ತಿ ತುಂಬಿದ್ದಾರೆ. ರಾಜಕಾರಣದಲ್ಲಿ ಅಂಬೇಡ್ಕರ್ ರಂತಹ ಮಹಾನ್ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದರೆ ಜನರು ಸೋಲಿಸುತ್ತಾರೆ. ರಾಜಕಾರಣದಲ್ಲಿ ಹಣವೇ ಪ್ರಬಲ ಎಂದು ಸಾಬೀತಾಗಿದೆ ಎಂದು ಶಾಸಕರು ಹೇಳಿದರು.
ತಹಶೀಲ್ದಾರ್ ಮಮತಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರವರು ಹಾಗೂ ಡಾ.ಬಾಬು ಜಗಜೀವನರಾಂ ರವರು ಇಬ್ಬರೂ ಮಹನೀಯರು ನಮಗೆ ಹಾಕಿಕೊಟ್ಟಂತಹ ಆದರ್ಶಗಳು ನಮಗೆ ಪ್ರೇರಣಾದಾಯಕ. ಅಂಬೇಡ್ಕರ್ ರವರು ಹೇಳುತ್ತಿದ್ದರು ನನ್ನನ್ನು ಅಪ್ಪಿಕೊಂಡಿದ್ದು ಪುಸ್ತಕ ಮಾತ್ರ, ಅವರ ಮಾತುಗಳು ಸತ್ಯ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ರವಿಕುಮಾರ್ ನೀಹ ಡಾ.ಬಾಬು ಜಗಜೀವನರಾಮರ ಕುರಿತು ಹಾಗೂ ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಸಿ.ಜಿ.ಲಕ್ಷ್ಮೀಪತಿ ಡಾ.ಬಿ.ಆರ್.ಅಂಬೇಡ್ಕರ್ ರವರ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೇವಿನಹಳ್ಳಿ ಚನ್ನಬಸಪ್ಪ, ರಘುನಾಥ್ ಭದ್ರನಾಯಕನ ತಾಂಡ್ಯ, ರುದ್ರೇಶ್ ದಬ್ಬಗುಂಟೆ, ಚನ್ನಿಗರಾಯಪ್ಪ ಅಳೇಕಟ್ಟೆ, ವೆಂಕಟೇಶಯ್ಯ ದಬ್ಬಘಟ್ಟ, ಹನುಮಂತಪ್ಪ ಮೈಲಕಟ್ಟೆ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಕಳ್ಳೇನಹಳ್ಳಿ ಸಣ್ಣಮ್ಮ ಶಂಕರ್ ಬರಕನಾಹಾಲ್, ಮುಂಬಭಾಗವಿ, ದಿಲೀಪ್ ಅಳೇಕೆರೆ ಹಾಗೂ 2024–25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭಕ್ಕೂ ಮೊದಲು ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಹಾಗೂ ಮಹಾತ್ಮ ಗಾಂಧೀಜಿಯವರ ಪುತ್ಥಳಿಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ, ಸಮಾಜ ಕಲ್ಯಾಣಾಧಿಕಾರಿ ಶ್ರೀ ಧರ್ಮಮೂರ್ತಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


