ಕುಣಿಗಲ್: ತಾಲೂಕಿನ ಬಿಳಿದೇವಾಲಯ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಬಲಾಢ್ಯ ವ್ಯಕ್ತಿಗಳು ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿರುವ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಗ್ರಂಥಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವಂತೆ ಒತ್ತಾಯಿಸಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ, ಬೋರಲಿಂಗನಪಾಳ್ಯ ಗ್ರಾಮಸ್ಥರು ಇಲ್ಲಿನ ತಾಲೂಕು ಪಂಚಾಯಿತಿ ಮುಂಭಾಗ ತಮಟೆ ಹೊಡೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ನಂತರ ತಾಪಂ ಇಒ ವಸಂತ್ ಕುಮಾರ್ಗೆ ಮನವಿ ಸಲ್ಲಿಸಿ, ಒತ್ತುವರಿ ತೆರವಿಗೆ ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾ.ಪಂ ಇಒ ವಸಂತ್ಕುಮಾರ್, ಗ್ರಾ.ಪಂಗೆ ಸೇರಿದ ಜಾಗದಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಎಂದು ಗ್ರಾ.ಪಂ ಆಡಳಿತ ಹಾಗೂ ಗ್ರಾಮಸ್ಥರಿಂದ ದೂರು ಬಂದ ಕಾರಣ ದಾಖಲೆಗಳನ್ನು ಪರಿಶೀಲಿಸಲಾಗಿ ಈ ಜಾಗ ಪಂಚಾಯ್ತಿ ಸ್ವತ್ತಾಗಿದೆ.
ಈ ಹಿಂದೆ ಈ ಜಾಗದಲ್ಲಿ ಗ್ರಾ.ಪಂ. ಕಟ್ಟಡ ಇರುವ ಬಗ್ಗೆ ಫೋಟೋ ಸಹ ಇದೆ. ಮಳಿಗೆ ತೆರವು ಗೊಳಿಸಲಾಗುವುದು ಎಂದರು.
ತಾ.ಪಂ. ಇಒ ವಸಂತ್ ಕುಮಾರ್ ಮಾತನಾಡಿ, ಪೊಲೀಸರ ರಕ್ಷಣೆಯೊಂದಿಗೆ ಅಂಗಡಿ ಮಳಿಗೆಗಳನ್ನು ಗ್ರಾ.ಪಂ ವಶಕ್ಕೆ ಪಡೆದು, ಬೀಗ ಮುದ್ರೆ ಹಾಕಲಾಗಿತ್ತು. ಆದರೆ ಮೂರು ತಿಂಗಳ ನಂತರ ಮತ್ತೆ ಒತ್ತುವರಿದಾರರು ಅಕ್ರಮ ಪ್ರವೇಶ ಮಾಡಿ ಬೀಗ ಮುದ್ರೆ ಹೊಡೆದಿದ್ದಾರೆ. ವ್ಯಕ್ತಿಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಧಿಕಾರಿಗಳು ಹಾಕಿದ್ದ ಬೀಗ ಮುದ್ರೆ ಹೊಡೆದಿದ್ದಾರೆ ಎಂದು, ಆ ವ್ಯಕ್ತಿಗಳನ್ನು ಕಚೇರಿಗೆ ಬರ ಮಾಡಿಕೊಂಡು ಬೀಗ ಮುದ್ರೆ ಹೊಡೆದಿದ್ದು ತಪ್ಪು, ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿ ಎಂದು ಮನವರಿಕೆ ಮಾಡಿದೆವು. ಆದರೆ ಆ ವ್ಯಕ್ತಿಗಳು ನಮ್ಮ ಸಲಹೆ ಒಪ್ಪಲಿಲ್ಲ. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಹೋದರೆ ಅಂಗಡಿ ಒಳಗೆ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಇಟ್ಟು ಹಾಗೂ ಹೆಂಗಸರು, ಮಕ್ಕಳನ್ನು ಮುಂದೆ ಬಿಟ್ಟು ಅಂಗಡಿ ತೆರವುಗೊಳಿಸಲು ಅಡ್ಡಿ ಪಡಿಸಿರುತ್ತಾರೆ. ಪೊಲೀಸ್ ರಕ್ಷಣೆಯೊಂದಿಗೆ ಜಾಗವನ್ನು ಪಂಚಾಯ್ತಿ ವಶಕ್ಕೆ ಪಡೆದು, ಆ ಜಾಗದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು ಎಂದರು.
ಮಾಜಿ ಗ್ರಾ.ಪಂ. ಅಧ್ಯಕ್ಷ ಆನಂದ ಸ್ವಾಮಿ ಮಾತನಾಡಿ, ಬೋರಲಿಂಗನಪಾಳ್ಯ ಗ್ರಾಮದ ಗಂಗಕರಿಯಪ್ಪ, ಲಂಕೇಶ್ ಎ, ರಾಜಣ್ಣ ಪಿ. ರಾಜೇಶ್, ಸಿದ್ದಾರ್ಥ ಅನುದಾನಿತ ಪ್ರೌಢಶಾಲೆ ಸರ್ಕಾರಿ ಗ್ರೂಪ್ ಡಿ.ದರ್ಜೆ ನೌಕರ ನಾಗರಾಜು ಸೇರಿದಂತೆ ಹಲವು ವ್ಯಕ್ತಿಗಳು ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಕೊಂಡಿದ್ದಾರೆ. ಈ ಸಂಬಂಧ ಕ್ರಮಕೈಗೊಂಡು ಮಳಿಗೆಗಳನ್ನು ತೆರವು ಗೊಳಿಸುವಂತೆ ಗ್ರಾಮಸ್ಥರು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ತಾ.ಪಂ ಇಒ ವಸಂತ್ ಕುಮಾರ್, ಗ್ರಾ.ಪಂ ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಅಕ್ರಮ ಅಂಗಡಿ ಮಳಿಗೆಗಳನ್ನು ವಶಕ್ಕೆ ಪಡೆದು ಬೀಗಮುದ್ರೆ ಹಾಕಿದ್ದರು. ಆದರೆ ಮೇಲ್ಕಂಡ ವ್ಯಕ್ತಿಗಳು ಬೀಗ ಮುದ್ರೆಯನ್ನು ಹೊಡೆದು, ಅಕ್ರಮವಾಗಿ ಮತ್ತೆ ಅಂಗಡಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ತಾ.ಪಂ ಮಾಜಿ ಸದಸ್ಯ ಎಸ್.ಟಿ.ರಾಜು, ಮುಖಂಡರಾದ ತಿಮ್ಮಪ್ಪ, ಜೈಕುಮಾರ್, ರಂಗರಾಜು, ಪ್ರಹ್ಲಾದ್, ರಮೇಶ್, ದೇವರಾಜು, ಉಳೇಹಳ್ಳಿ ರಾಜು, ಲಲಿತಮ್ಮ, ಲಕ್ಷ್ಮಮ್ಮ, ಪುಷ್ಪಲತಾ, ತಾರಾ, ಗೌರಮ್ಮ, ಅಂಜನಮ್ಮ, ಹನುಮಮ್ಮ ಮತ್ತಿತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


