ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಉಷ್ಣಾಂಶದ ಏರಿಕೆ, ಅಸ್ಥಿರ ಹವಾಮಾನ, ಭಾರೀ ಗುಡುಗು–ಮಿಂಚು ಹಾಗೂ ಆಲಿಕಲ್ಲು ಮಳೆಯಂತಹ ಅಸಾಮಾನ್ಯ ಹವಾಮಾನ ಬದಲಾವಣೆಗಳು ಜನರನ್ನು ಕಂಗೆಡಿಸುತ್ತಿವೆ. ನಗರದಲ್ಲಿ ಹೆಚ್ಚುತ್ತಿರುವ ಕಾಂಕ್ರೀಟ್ ಕಟ್ಟಡಗಳು, ವಾಹನಗಳ ಸಂಖ್ಯೆ ಮತ್ತು ಹಸಿರು ಪ್ರದೇಶಗಳ ಕುಸಿತದ ಜೊತೆಗೆ ಈಗ ವೇಗವಾಗಿ ವಿಸ್ತರಿಸುತ್ತಿರುವ ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್ ಗಳು ನಗರದ “ಹೀಟ್ ಐಲ್ಯಾಂಡ್” (Heat Island) ಪರಿಣಾಮವನ್ನು ತೀವ್ರಗೊಳಿಸುತ್ತಿವೆ ಎಂದು ಪರಿಸರ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ವರದಿಗಳ ಆಧಾರದ ಪ್ರಕಾರ, ಡೇಟಾ ಸೆಂಟರ್ ಎಂದರೆ ಅತಿ ದೊಡ್ಡ ಗಣಕ ಶಕ್ತಿ (Computational Power) ಹೊಂದಿರುವ ವಿಶೇಷ ತಾಂತ್ರಿಕ ಕೇಂದ್ರ. ಕೃತಕ ಬುದ್ಧಿಮತ್ತೆ (AI) ಹಾಗೂ ಮೆಷಿನ್ ಲರ್ನಿಂಗ್ (Machine Learning) ಮಾದರಿಗಳಿಗೆ ತರಬೇತಿ ನೀಡಲು, ಅವುಗಳನ್ನು ಕಾರ್ಯಗತಗೊಳಿಸಲು ಹಾಗೂ ವೇಗವಾಗಿ ಡೇಟಾ ಸಂಸ್ಕರಣೆ ಮತ್ತು ವಿಶ್ಲೇಷಣೆ ಮಾಡಲು ಈ ಕೇಂದ್ರಗಳನ್ನು ಬಳಸಲಾಗುತ್ತದೆ. ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಮಾಹಿತಿ ಪ್ರಕಾರ, ಪ್ರಸ್ತುತ ಬೆಂಗಳೂರಿನಲ್ಲಿ 31 ಡೇಟಾ ಸೆಂಟರ್ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಎರಡು ಹೊಸ ಸೆಂಟರ್ಗಳು ನಿರ್ಮಾಣ ಹಂತದಲ್ಲಿವೆ. ಬೆಂಗಳೂರನ್ನು ಹೊರತುಪಡಿಸಿದರೆ ಸದ್ಯ ಮಂಗಳೂರಿನಲ್ಲಿ ಮಾತ್ರ ಒಂದು ಡೇಟಾ ಸೆಂಟರ್ ಇದೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ AI ಡೇಟಾ ಸೆಂಟರ್ಗಳು ನಿರಂತರವಾಗಿ ಕಾರ್ಯನಿರ್ವಹಿಸಲು ಕೋಟ್ಯಂತರ ಲೀಟರ್ ನೀರು ಹಾಗೂ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿರುತ್ತದೆ. ಸಾವಿರಾರು ಸರ್ವರ್ಗಳು ದಿನದ 24 ಗಂಟೆಯೂ ಕೆಲಸ ಮಾಡುವುದರಿಂದ ಭಾರೀ ಪ್ರಮಾಣದ ಉಷ್ಣ (Heat) ಉತ್ಪತ್ತಿಯಾಗುತ್ತದೆ. ಈ ಸರ್ವರ್ಗಳನ್ನು ತಂಪಾಗಿಡಲು (Cooling) ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತದೆ. ಜಾಗತಿಕ ಅಂಕಿಅಂಶಗಳ ಪ್ರಕಾರ, 1 ಮೆಗಾವಾಟ್ ಸಾಮರ್ಥ್ಯದ AI ಡೇಟಾ ಸೆಂಟರ್ ವರ್ಷಕ್ಕೆ ಸರಾಸರಿ 2.5 ಕೋಟಿ ಲೀಟರ್ ನೀರನ್ನು ಬಳಸುತ್ತದೆ. 1 ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ ಪ್ರತಿ ಗಂಟೆಗೆ ಸುಮಾರು 1,000 ಯೂನಿಟ್ ವಿದ್ಯುತ್ ಬಳಸುತ್ತದೆ. ಅಂದರೆ ದಿನಕ್ಕೆ ಬರೋಬ್ಬರಿ 24,000 ಯೂನಿಟ್ ವಿದ್ಯುತ್ ವ್ಯಯವಾಗುತ್ತದೆ.
“AI ಡೇಟಾ ಸೆಂಟರ್ಗಳು ಕೇವಲ ವಿದ್ಯುತ್ ಮತ್ತು ನೀರನ್ನು ಮಾತ್ರ ಬಳಸುವುದಿಲ್ಲ, ಅವುಗಳಿಂದ ಹೊರಬರುವ ಎಲೆಕ್ಟ್ರಾನಿಕ್ ತ್ಯಾಜ್ಯವೂ (E-waste) ದೊಡ್ಡ ಸಮಸ್ಯೆಯಾಗಿದೆ. ಎಲ್ಲ ಕ್ಷೇತ್ರಗಳಿಗೂ ಅನಿಯಂತ್ರಿತವಾಗಿ AI ಬಳಸುವ ಅಗತ್ಯವಿಲ್ಲ. ಅಗತ್ಯವಿರುವ ಪ್ರಮುಖ ಕ್ಷೇತ್ರಗಳಿಗೆ ಮಾತ್ರ ಇದರ ಬಳಕೆಯನ್ನು ಮಿತಿಗೊಳಿಸಲು ಸರ್ಕಾರ ವಿಶೇಷ ನೀತಿ ರೂಪಿಸಬೇಕು” ಎಂದು ಸಲಹೆ ನೀಡಿದ್ದಾರೆ.
ಅಲಯನ್ಸ್ ವಿಶ್ವವಿದ್ಯಾಲಯದ ನೈಸರ್ಗಿಕ ಪರಿಹಾರಗಳ ಕೇಂದ್ರದ ಮುಖ್ಯಸ್ಥ ಮಿಥುನ್ ಹನುಮೇಶ್ ಕಳವಳ ವ್ಯಕ್ತಪಡಿಸಿ, “ಬೆಂಗಳೂರು ಈಗಾಗಲೇ ನೀರಿನ ಕೊರತೆ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಡೇಟಾ ಸೆಂಟರ್ಗಳು ದಿನಕ್ಕೆ ಕೋಟ್ಯಂತರ ಲೀಟರ್ ನೀರು ಬಳಸಿದರೆ ಪರಿಸ್ಥಿತಿ ಇನ್ನಷ್ಟು ಕೈಮೀರಬಹುದು. ಜಾಗತಿಕವಾಗಿ ಅನೇಕ ದೇಶಗಳಲ್ಲಿ ಡೇಟಾ ಸೆಂಟರ್ಗಳನ್ನು ಕಡಲ ತೀರ ಪ್ರದೇಶಗಳು ಅಥವಾ ತಂಪಾದ ಹವಾಮಾನ ಇರುವಲ್ಲಿ ನಿರ್ಮಿಸಲಾಗುತ್ತಿದೆ” ಎಂದಿದ್ದಾರೆ.
ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಈ ಹಿಂದೆ ಎಚ್ಚರಿಸಿದ್ದು, “ನಾವು ಚಾಟ್ ಜಿಪಿಟಿಗೆ ಕೇವಲ ಐದು ಪ್ರಶ್ನೆಗಳನ್ನು ಕೇಳಿದರೂ ಸುಮಾರು 500 ಮಿಲಿ ನೀರು ಬಳಕೆಯಾಗುತ್ತದೆ. ಹೀಗಾಗಿ ಲಕ್ಷಾಂತರ ಜನ ಬಳಸುವಾಗ ಇದರ ಒಟ್ಟು ನೀರಿನ ಬಳಕೆ ಎಷ್ಟಿರಬಹುದು ಎಂಬುದನ್ನು ಯೋಚಿಸಬೇಕು” ಎಂದಿದ್ದರು.
ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್. ಅವರ ಪ್ರಕಾರ, “ಡೇಟಾ ಸೆಂಟರ್ ಗಳು ಇಂದಿನ ತಂತ್ರಜ್ಞಾನ ಯುಗಕ್ಕೆ ಅನಿವಾರ್ಯ. ಆದರೆ, ಹೊಸದಾಗಿ ರೂಪಿಸಲಾಗುತ್ತಿರುವ ನೀತಿಯಲ್ಲಿ ನೀರು ಮತ್ತು ವಿದ್ಯುತ್ ನ ಸಮರ್ಥ ಬಳಕೆ, ಶಾಖ ಹೊರಸೂಸುವಿಕೆ ನಿಯಂತ್ರಣ ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ಈಗಾಗಲೇ ಟ್ರಾಫಿಕ್, ಮಾಲಿನ್ಯ ಹಾಗೂ ತಾಪಮಾನ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿಗೆ, AI ಡೇಟಾ ಸೆಂಟರ್ ಗಳ ಅತಿಯಾದ ವಿಸ್ತರಣೆ ಪರಿಸರ ಸಮತೋಲನಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


