ತುಮಕೂರು: ನಗರದ ಅಮಾನಿಕೆರೆ ಗಾಜಿನ ಮನೆ ಉದ್ಯಾನವನದ ಆವರಣದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ 5ನೇ ಪುಣ್ಯ ಸ್ಮರಣೆ ಹಾಗೂ ದಲಿತ ಚಳುವಳಿಯ ಹರಿಕಾರ ಪ್ರೊ. ಬಿ. ಕೃಷ್ಣಪ್ಪನವರ ಜನ್ಮದಿನಾಚರಣೆಯನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚುವ ಮೂಲಕ ಗೌರವ ಸಮರ್ಪಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಎನ್. ಕೆ. ನಿಧಿ ಕುಮಾರ್, “ಡಾ. ಸಿದ್ದಲಿಂಗಯ್ಯನವರು ಬಂಡಾಯ ಸಾಹಿತ್ಯದ ಸಾರಥಿ ಹಾಗೂ ಸರಳತೆ ಮತ್ತು ಹಾಸ್ಯಪ್ರಜ್ಞೆಯ ಅಪರೂಪದ ಕವಿ. ತಮ್ಮ ಕಾವ್ಯ ಹಾಗೂ ಸಾಮಾಜಿಕ ಹೋರಾಟಗಳ ಮೂಲಕ ಶೋಷಿತ ಸಮುದಾಯಗಳ ಧ್ವನಿಯಾಗಿ ಅವರು ಹೊರಹೊಮ್ಮಿದರು,” ಎಂದರು.
“ನಿಮ್ಮ ಬೇಟೆಯುತ್ಸವದಲಿ ಕುರಿಗಳಾಗಿ ಸತ್ತ ಜನರು ಬಂದಿರುವರು ಹುಲಿಗಳಾಗಿ ಗರ್ಜನೆಯನು ಕೇಳಿರಿ” ಎಂಬ ಸಾಲುಗಳ ಮೂಲಕ ಅಸಮಾನ ಸಮಾಜ ಮತ್ತು ರಾಜಕಾರಣಿಗಳ ವಿರುದ್ಧ ಕಾವ್ಯವನ್ನೇ ಖಡ್ಗವಾಗಿಸಿ ಸಿದ್ದಲಿಂಗಯ್ಯನವರು ಹೋರಾಡಿದ್ದರು. ಅವರ ಸರಳ ವ್ಯಕ್ತಿತ್ವ ಮತ್ತು ಜನಸಾಮಾನ್ಯರ ನೋವು-ನಲಿವುಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ಸದಾ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿರುತ್ತದೆ ಎಂದು ಅವರು ತಿಳಿಸಿದರು.
ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ರವಿಕುಮಾರ್ ಎನ್. ಮಾತನಾಡಿ, “ಶೋಷಣೆ, ಅವಮಾನ ಹಾಗೂ ಅಸ್ಪೃಶ್ಯತೆಯ ಕತ್ತಲೆಯಲ್ಲಿದ್ದ ತಳಸಮುದಾಯಗಳ ಬದುಕಿಗೆ ಸ್ವಾಭಿಮಾನ ಮತ್ತು ಸಂಘಟನೆಯ ಬೆಳಕು ತಂದ ಅಪರೂಪದ ನಾಯಕ ಪ್ರೊ. ಬಿ. ಕೃಷ್ಣಪ್ಪ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಸಂದೇಶವನ್ನು ಕರ್ನಾಟಕದ ಕೇರಿ-ಕೇರಿಗಳಿಗೆ ತಲುಪಿಸಿದ ಧೀಮಂತ ಶಕ್ತಿ ಅವರು. ಅವರ ಹೋರಾಟದ ಕರೆಗೆ ಸ್ಪಂದಿಸಿ ಸಾವಿರಾರು ಯುವಕರು ಸಾಮಾಜಿಕ ಪರಿವರ್ತನೆಯ ಹಾದಿ ಹಿಡಿದರು,” ಎಂದು ಬಣ್ಣಿಸಿದರು.
ಇನ್ನೂ ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ್ ಕೆ. ಮಾತನಾಡಿ, “ದಲಿತರ ಗುಡಿಸಲಿನಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ, ಅದನ್ನು ಆರದಂತೆ ಕಾಪಾಡಿ’ ಎಂದು ಜಾಗೃತಿಯ ಕರೆ ನೀಡಿದ ಪ್ರೊ. ಬಿ. ಕೃಷ್ಣಪ್ಪನವರ ತತ್ವಗಳು ಹಾಗೂ ಕನ್ನಡ ಸಾಹಿತ್ಯ ಲೋಕದ ಬಂಡಾಯ ಕವಿ ಡಾ. ಸಿದ್ದಲಿಂಗಯ್ಯನವರ ಕೊಡುಗೆಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣಾದಾಯಕ ಮತ್ತು ಚಿರಸ್ಮರಣೀಯ,” ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ತಾಲೂಕು ಅಧ್ಯಕ್ಷರಾದ ಹನುಮ ನರಸಯ್ಯ, ತುಮಕೂರು ನಗರ ಕಾರ್ಯದರ್ಶಿ ವಿಜಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ನಗರ ಪ್ರಧಾನ ಕಾರ್ಯದರ್ಶಿ ನರಸಿಂಹ ಕೋತಿ ತೋಪು, ಮಾರ್ಕೆಟ್ ಮಣ್ಣೆಪ್ಪ ಸೇರಿದಂತೆ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


