ತಿಪಟೂರು: ವ್ಯಸನಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ, ತಾಲ್ಲೂಕಿನ ಮಣಕಿಕೆರೆ ಗ್ರಾಮದ ಶ್ರೀ ಕರಿಯಮ್ಮದೇವಿ ಕಲ್ಯಾಣ ಮಂಟಪದ ಆವರಣದಲ್ಲಿ 2078ನೇ ಮದ್ಯವರ್ಜನ ಶಿಬಿರಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.
ತಾಲ್ಲೂಕಿನ ಕುಮಾರ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಶ್ರೀಧರ್ ಅವರ ನೇತೃತ್ವದಲ್ಲಿ ಈ ಶಿಬಿರವು ಆಯೋಜನೆಗೊಂಡಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಶ್ರೀಧರ್ ಅವರು, “ಸಪ್ತ ವ್ಯಸನಗಳಲ್ಲಿ ಅತ್ಯಂತ ಅಪಾಯಕಾರಿಯಾದ ಮದ್ಯವ್ಯಸನವು ಕೇವಲ ವ್ಯಸನಿಯ ಆರೋಗ್ಯವನ್ನು ಮಾತ್ರವಲ್ಲದೆ, ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತದೆ. ಈ ಗಂಭೀರ ಪರಿಸ್ಥಿತಿಯನ್ನು ಅರಿತ ಪೂಜ್ಯ ಖಾವಂದರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮದ್ಯದಂಗಡಿಗಳನ್ನು ಮುಚ್ಚಿಸುವ ಬದಲು ಮದ್ಯಪಾನಿಗಳಲ್ಲಿ ಅಂತರಾಳದ ಶುದ್ಧೀಕರಣ ಉಂಟುಮಾಡಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಮನಗಂಡರು. ಭಗವಾನ್ ಮಂಜುನಾಥ ಸ್ವಾಮಿಯ ಕೃಪೆಯಿಂದ 1992ರಲ್ಲಿ ಬೆಳ್ತಂಗಡಿಯಲ್ಲಿ ಆರಂಭವಾದ ಈ ಮದ್ಯವರ್ಜನ ಶಿಬಿರ ಇಂದು ರಾಜ್ಯಾದ್ಯಂತ ದೊಡ್ಡ ಆಂದೋಲನವಾಗಿ ಬೆಳೆದಿದೆ. ಇದುವರೆಗೆ 2077 ಶಿಬಿರಗಳು ಯಶಸ್ವಿಯಾಗಿ ನಡೆದು, ಸುಮಾರು 1.60 ಲಕ್ಷ ಕುಟುಂಬಗಳಲ್ಲಿ ಹೊಸ ಬೆಳಕು ಮೂಡಿಸಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಈ ಪುಣ್ಯದ ಕಾರ್ಯದಲ್ಲಿ ಪರಮಪೂಜ್ಯರ ಚಿಂತನೆ ಎಷ್ಟು ವಿಸ್ತಾರವಾಗಿದೆಯೋ, ಕಾರ್ಯಕರ್ತರ ಪರಿಶ್ರಮವೂ ಅಷ್ಟೇ ದೊಡ್ಡದಾಗಿದೆ. 2078ನೇ ಶಿಬಿರದ ಮೂಲಕ ವ್ಯಸನಿಗಳ ಸೇವೆ ಮಾಡುವ ಯೋಗಭಾಗ್ಯ ಸಾರ್ಥವಳ್ಳಿ ವಲಯಕ್ಕೆ ದೊರೆತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ವ್ಯಸನಮುಕ್ತರಾಗಬೇಕು ಎಂದು ಕರೆ ನೀಡಿದರು.
ತುಮಕೂರು-1 ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಅವರು ಮಾತನಾಡಿ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯದ ಬಡತನ ನಿರ್ಮೂಲನೆ ಹಾಗೂ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಕೈಗೊಂಡಿರುವ ಜನಪರ ಕಾರ್ಯಕ್ರಮಗಳನ್ನು ಸವಿಸ್ತಾರವಾಗಿ ವಿವರಿಸಿ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯನಾಯ್ಕ್ ಅವರು ಶಿಬಿರದ 8 ದಿನಗಳ ದಿನಚರಿ ಹಾಗೂ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಯಾನಂದ್ ಟಿ.ಎಸ್. ಅವರು ಮಾತನಾಡಿ, “ಆಡು ಮುಟ್ಟದ ಸೊಪ್ಪಿಲ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡದ ಸಾಮಾಜಿಕ ಕಾರ್ಯಗಳಿಲ್ಲ ಎನ್ನುವಂತೆ ಸಂಸ್ಥೆಯು ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ವಿಶೇಷವಾಗಿ ಮದ್ಯವರ್ಜನ ಶಿಬಿರದಂತಹ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ,” ಎಂದರು.
ಶಿಬಿರದ ಅಧ್ಯಕ್ಷತೆಯನ್ನು ರವಿಕುಮಾರ್ ಎಂ.ಡಿ. ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಉದಯ್ ಕೆ., ಶಿಬಿರಾಧಿಕಾರಿ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತರಕಾರಿ ಗಂಗಾಧರ್, ಮಲ್ಲಿಗಪ್ಪಾಚಾರ್, ರೇಖಾ, ಮಹದೇವಮ್ಮ, ಶಂಕರಯ್ಯ, ಶ್ರೀಧರ್, ಅನಿಲ್ ಕುಮಾರ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಪ್ರಶಾಂತ್, ಆರೋಗ್ಯ ಸಹಾಯಕಿ ತುಷಾರ, ಧರ್ಮಸ್ಥಳ ಯೋಜನೆಯ ತಾಲ್ಲೂಕಿನ ಸರ್ವ ಸಿಬ್ಬಂದಿ ವರ್ಗದವರು, ನವಜೀವನ ಸಮಿತಿ ಸದಸ್ಯರು, ಪ್ರಗತಿಬಂಧು ಸ್ವಸಹಾಯ ಸಂಘದ ಪಾಲುದಾರರು ಹಾಗೂ ಮಣಕಿನಕೆರೆ ಗ್ರಾಮಸ್ಥರು ಉಪಸ್ಥಿತರಿದ್ದು, ಶಿಬಿರದಲ್ಲಿ ಭಾಗವಹಿಸಿರುವ 60 ಶಿಬಿರಾರ್ಥಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


