ಸರಗೂರು: ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ತಾಲೂಕು ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷ ಪಿ. ಚಿನ್ನಣ್ಣ ಹೇಳಿದರು.ಪಟ್ಟಣದ ಬಿಡುಗಲು 11ನೇ ವಾರ್ಡ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಾನವ ಹಕ್ಕುಗಳ ಮಿಷನ್ ವತಿಯಿಂದ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಬುಧವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನಿಗಳನ್ನು ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವರ್ಷಪೂರ್ತಿ ಶ್ರದ್ಧೆಯಿಂದ ಅಧ್ಯಯನ ಮಾಡಿ ಶಾಲೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತಂದುಕೊಟ್ಟಾಗ ಮಾತ್ರ ಇಂತಹ ನೋಟ್ಬುಕ್ ವಿತರಣೆ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ. ಬಾಲ್ಯದಿಂದಲೇ ದೇಶಭಕ್ತಿ, ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರು ಹಾಗೂ ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.
ಎಚ್.ಡಿ. ಕೋಟೆ ಮಾನವ ಹಕ್ಕುಗಳ ಮಿಷನ್ ನಿರ್ದೇಶಕ ತುಂಬಸೋಗೆ ನಾಗಣ್ಣ ಮಾತನಾಡಿ, ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕರು ಇಂದು ಸಮಾಜದಲ್ಲಿ ಉನ್ನತ ಹುದ್ದೆ ಹಾಗೂ ಸ್ಥಾನಮಾನಗಳನ್ನು ಅಲಂಕರಿಸಿರುವುದು ಶಾಲೆಯ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಕರು ಮತ್ತು ಪಾಲಕರು ಆರಂಭದಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟರೆ ಮಾತ್ರ ಅವರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮರೀಲಿಂಗಯ್ಯ, ಮಾನವ ಹಕ್ಕುಗಳ ಮಿಷನ್ ಮಾಜಿ ಅಧ್ಯಕ್ಷ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ದೇವಲಾಪುರ, ಸಹ ಕಾರ್ಯದರ್ಶಿ ಸೂರ್ಯಕುಮಾರ್ ಮಸಹಳ್ಳಿ, ಉಪಾಧ್ಯಕ್ಷರಾದ ಶಿವಣ್ಣ ಚೆನ್ನಿಪುರ, ಸೋಮಣ್ಣ ಹೆಗ್ಗುಡಿಲು, ಸಂಘಟನೆ ಸಂಚಾಲಕ ಶಿವರಾಜು ಚೆನ್ನಿಪುರ, ನಿರ್ದೇಶಕರಾದ ಚೆಲುರಾಜು ನರಸೀಪುರ, ಸೋಮಣ್ಣ ಲಂಕೆ, ರಾಮಚಂದ್ರ ನಿಲುವಾಗಿಲು, ಈಶ್ವರ ಲಂಕೆ, ದಡದಹಳ್ಳಿ ಪುಟ್ಟಯ್ಯ, ಶಿವಮಲು, ಶಿಕ್ಷಕರಾದ ನಾಗರಾಜು, ವಿಷಕಂಠ, ಮಹೇಶ್ ಹಾಗೂ ಶಾಲಾ ಸಿಬ್ಬಂದಿ, ಮಕ್ಕಳು ಮತ್ತು ಮುಖಂಡರು ಉಪಸ್ಥಿತರಿದ್ದರು.
ವರದಿ:ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


