ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಚುರುಕುಗೊಂಡಿದ್ದು, ಜಂಬೂಸವಾರಿಗೆ ಗಜಪಡೆಯನ್ನು ಸಜ್ಜುಗೊಳಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಮೊದಲ ಹಂತದ 9 ಆನೆಗಳ ತೂಕ ಪರೀಕ್ಷೆಯನ್ನು ಭಾನುವಾರ ಮೈಸೂರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಪ್ರಭುಗೌಡ ಅವರ ಮಾಹಿತಿ ಪ್ರಕಾರ, ಮೊದಲ ಹಂತದ ಗಜಪಡೆಯ ತೂಕ ಪರೀಕ್ಷೆಯಲ್ಲಿ ‘ಶ್ರೀಕಂಟ’ ಆನೆಯು 5,770 ಕೆಜಿ ತೂಕದೊಂದಿಗೆ ಅತ್ಯಂತ ಭಾರವಾದ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ನಂತರ ‘ಏಕಲವ್ಯ’ ಆನೆಯು 5,610 ಕೆಜಿ ತೂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.
ಜಂಬೂಸವಾರಿ ಮೆರವಣಿಗೆಯ ನಿತ್ಯದ ತರಬೇತಿ ಆರಂಭವಾಗುವ ಮುನ್ನ ಈ ತೂಕ ಪರೀಕ್ಷೆಯನ್ನು ನಡೆಸಲಾಗಿದೆ. ಈ ಕುರಿತು ಮಾತನಾಡಿದ ಡಿಸಿಎಫ್ ಪ್ರಭುಗೌಡ, “ಆನೆಗಳ ತೂಕವನ್ನು ಹೆಚ್ಚಿಸುವುದು ನಮ್ಮ ಗುರಿಯಲ್ಲ. ಅವುಗಳ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅದಕ್ಕೆ ತಕ್ಕಂತೆ ವಿಶೇಷ ಆಹಾರ ಪದ್ಧತಿಯನ್ನು (ಡಯಟ್) ಒದಗಿಸಲು ಈ ತೂಕ ಪರೀಕ್ಷೆ ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.ಈ ಪ್ರಕ್ರಿಯೆಯ ಬಳಿಕ ಆನೆಗಳಿಗೆ ಬೆಳಗಿನ ಜಾವ ಹಾಗೂ ಸಂಜೆ ವೇಳೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ನಿತ್ಯದ ತರಬೇತಿ ಆರಂಭವಾಗಲಿದೆ.
ಪಾರಂಪರಿಕ ಗಜಪಯನದ ಮೂಲಕ ಈಗಾಗಲೇ ಮೊದಲ ಹಂತದ ಆನೆಗಳು ಮೈಸೂರು ಅರಮನೆ ಆವರಣವನ್ನು ಪ್ರವೇಶಿಸಿವೆ. ದಸರಾ ಮೆರವಣಿಗೆಗೆ ಮುಂಚಿತವಾಗಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಮತ್ತು ತರಬೇತಿ ಸೆಷನ್ಗಳಿಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲು ಹಲವಾರು ಆನೆಗಳು ದೈಹಿಕವಾಗಿ ಸದೃಢವಾಗಿವೆ ಎಂದು ಪ್ರಭುಗೌಡ ತಿಳಿಸಿದ್ದು, ತರಬೇತಿಯ ಸಮಯದಲ್ಲಿ ಆನೆಗಳ ಕಾರ್ಯಕ್ಷಮತೆಯನ್ನು ಅವಲೋಕಿಸಿ ಅಂತಿಮವಾಗಿ ಜಂಬೂಸವಾರಿಯ ನೇತೃತ್ವ ವಹಿಸಲಿರುವ (ಕ್ಯಾಪ್ಟನ್) ಆನೆಯನ್ನು ಅಂತಿಮಗೊಳಿಸಲಾಗುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
