ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: 35ಕ್ಕೂ ಅಧಿಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ನೇರವಾಗಿ ನಿಮ್ಮ ಗ್ರಾಮಕ್ಕೇ ಆಗಮಿಸಿ, ಸಾರ್ವಜನಿಕರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಬಗೆಹರಿಸುವ ವಿನೂತನ ಕಾರ್ಯಕ್ರಮವೇ ‘ಪ್ರಜಾಸೇವಾ ಅಭಿಯಾನ’ ಎಂದು ಕೊರಟಗೆರೆ ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.
ತಾಲೂಕಿನ ಚನ್ನರಾಯನದುರ್ಗ ಹೋಬಳಿ ತೋವಿನಕೆರೆಯ ಖಾಸಗಿ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ಪ್ರಜಾಸೇವಾ ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ ಮಾತನಾಡಿ, “ಪ್ರಜಾಸೇವಾ ಅಭಿಯಾನವು ರಾಜ್ಯ ಸರ್ಕಾರದ ಉತ್ತಮ ಯೋಜನೆಯಾಗಿದೆ. ಸರ್ಕಾರದ ಸೌಲಭ್ಯಗಳು ಜನರ ಮನೆಬಾಗಿಲಿಗೆ ಬಂದು ತಲುಪಿದಾಗ, ಸಾರ್ವಜನಿಕರು ಅದರ ಸದುಪಯೋಗ ಪಡೆದುಕೊಂಡರೆ ಮಾತ್ರ ಈ ಅಭಿಯಾನಕ್ಕೆ ನಿಜವಾದ ಯಶಸ್ಸು ಸಿಗುತ್ತದೆ” ಎಂದರು.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, “ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಗ್ರಾಮೀಣ ಜನರಿಗೆ ವರದಾನವಾಗಿವೆ. ಆದರೆ ತೋವಿನಕೆರೆ ಭಾಗದ ರೈತರಿಗೆ ವಿದ್ಯುತ್ ಅಭಾವ ಹೆಚ್ಚಾಗಿದೆ. ಜೊತೆಗೆ ಸಾಗುವಳಿ ಚೀಟಿ ನೀಡುವಲ್ಲಿ ವಿಳಂಬವಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆಯನ್ನು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಆದ್ಯತೆಯ ಮೇಲೆ ಮಾಡಬೇಕು” ಎಂದು ಸೂಚಿಸಿದರು.
“ಪ್ರಜಾಸೇವಾ ಅಭಿಯಾನವು ಗ್ರಾಮೀಣ ಜನರಿಗೆ ವರದಾನ. ಸರ್ಕಾರಿ ಕಚೇರಿಗಳಿಗೆ ರೈತರು ಅಲೆಯುವ ಬದಲು ಅಧಿಕಾರಿಗಳೇ ಜನರ ಬಳಿಗೆ ಬರುವುದು ವಿಶೇಷ. ತೋವಿನಕೆರೆಯಲ್ಲಿ ರೈತರ ಸಾಗುವಳಿ ಚೀಟಿ ಹಾಗೂ ವಿದ್ಯುತ್ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಬೇಕಿದೆ.”
— ಪ್ರಸನ್ನಕುಮಾರ್, ಮಾಜಿ ಜಿ.ಪಂ. ಸದಸ್ಯ, ತೋವಿನಕೆರೆ
203 ಅರ್ಜಿಗಳ ಸ್ವೀಕಾರ – ಅಧಿಕಾರಿಗಳಿಗೆ ಗಡುವು:
ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 203 ಅರ್ಜಿಗಳು ಸ್ವೀಕಾರಗೊಂಡವು. ಇವುಗಳಲ್ಲಿ:
- ತಾಲ್ಲೂಕು ಪಂಚಾಯಿತಿ: 87
- ಕಂದಾಯ ಇಲಾಖೆ: 86
- ಸರ್ವೆ ಇಲಾಖೆ: 8
- ಸಣ್ಣ ನೀರಾವರಿ: 7
- ಆಹಾರ ಇಲಾಖೆ: 6
- ಅರಣ್ಯ ಇಲಾಖೆ: 3
- ಕೃಷಿ ಇಲಾಖೆ: 3
- ಬೆಸ್ಕಾಂ: 1
- ಸಮಾಜ ಕಲ್ಯಾಣ: 1
- ಎತ್ತಿನಹೊಳೆ ಯೋಜನೆ: 1
- ಪ್ರವಾಸೋದ್ಯಮ ಇಲಾಖೆ: 1
ಸ್ವೀಕೃತಗೊಂಡ ಅರ್ಜಿಗಳಲ್ಲಿ 10 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಯಿತು. ಉಳಿದ ಅರ್ಜಿಗಳನ್ನು ಮುಂದಿನ 4 ದಿನಗಳ ಒಳಗಾಗಿ ಪರಿಹರಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ತಹಶೀಲ್ದಾರ್ ಅವರು ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಓ ಅಪೂರ್ವ, ಸಿಪಿಐ ಪುರುಷೋತ್ತಮ, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಸಮಾಜ ಕಲ್ಯಾಣಾಧಿಕಾರಿ ಯಮುನಾ, ಗ್ರೇಡ್-2 ತಹಶೀಲ್ದಾರ್ ವೆಂಕಟರಂಗನ್, ಶಿರಸ್ತೇದಾರ್ ವೆಂಕಟೇಶ್, ಉಪ ತಹಶೀಲ್ದಾರ್ ಪ್ರತಾಪ್ ಕುಮಾರ್, ಪಿಡಿಓಗಳಾದ ಸುನೀಲ್, ರವಿಕುಮಾರ್, ರಘುನಂದನ್, ರಂಗನರಸಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
