ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಈ. ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜಾನಪದ ಉತ್ಸವಕ್ಕೆ ಮೆರುಗು ನೀಡಿದೆ. ಶುಕ್ರವಾರ ನಡೆದ ಜಾನಪದ ಉತ್ಸವವು ಗ್ರಾಮೀಣ ಸಂಸ್ಕೃತಿಯ ಸಡಗರದಿಂದ ಉಳುಮೆಯ ಹಬ್ಬದಂತೆಯೇ ನಡೆಯಿತು.
ಮುಖ್ಯ ಅತಿಥಿಗಳಾದ ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ಹಾಗೂ ಪ್ರಾಂಶುಪಾಲ ಡಾ.ಎನ್.ಶ್ರೀಧರ್ ಅವರನ್ನು ಎತ್ತಿನಗಾಡಿಯಲ್ಲಿ ಚಳ್ಳಕೆರೆ ಕ್ರಾಸ್ ನಿಂದ ಮೆರವಣಿಗೆ ಮೂಲಕ ಕಾಲೇಜಿಗೆ ಕರೆತರಲಾಯಿತು. ಡೋಲು, ತಮಟೆ, ನಾದಸ್ವರ, ಉರಿಮೆ ಸದ್ದಿಗೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಹೆಜ್ಜೆ ಹಾಕಿದರು.
ಕಾಲೇಜಿನ ಆವರಣದಲ್ಲಿ ರಾಗಿ, ಭತ್ತ, ಗೋದಿ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ಅಲಂಕಾರಗೊಳಿಸಿ ಧಾನ್ಯ ಪೂಜೆಯೊಂದಿಗೆ ಹಬ್ಬದ ಆರಂಬವಾಯಿತು. ಗ್ರಾಮೀಣ ಸಂಪ್ರದಾಯದಂತೆ ಹಾಲೋಯ್ಯುವ ಹಬ್ಬ, ಮಾರಮ್ಮನ ಉತ್ಸವ, ಗೌರಿ ಪೂಜೆ ಮುಂತಾದ ಆಚರಣೆಗಳು ದಿನವಿಡೀ ಕಾಲೇಜು ಆವರಣವನ್ನು ಹಬ್ಬದಮಯವಾಗಿಸಿತು.
ವೇದಿಕೆ ಕಾರ್ಯಕ್ರಮವನ್ನು “ರಾಗಿ ಕಲ್ಲು ಬೀಸುವ” ಮೂಲಕ ಉದ್ಘಾಟಿಸಲಾಯಿತು. ಪ್ರಮುಖ ಭಾಷಣಕಾರರಾಗಿ ಸಣ್ಣ ನಾಗಪ್ಪ ಗ್ರಾಮೀಣ ಜಾನಪದ ಸಂಸ್ಕೃತಿ ಮತ್ತು ಪಾವಗಡದ ಜಾನಪದ ಹಿನ್ನೆಲೆಯನ್ನು ಮೆಲುಕು ಹಾಕಿದರು.
ಪ್ರಾಂಶುಪಾಲ ಡಾ.ಎನ್.ಶ್ರೀಧರ್, ಸಾಂಸ್ಕೃತಿಕ ಸಂಚಾಲಕರಾದ ಎ.ಕಂಪಯ್ಯ, ಸಹ ಪ್ರಾಧ್ಯಾಪಕರಾದ ಲಿಂಗರಾಜು, ರಾಮಾಂಜಿನಿ, ಗಿರೀಶ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW