ನೆಲಮಂಗಲ: ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಸುಮಾರು 20 ಕಾರ್ಮಿಕರಿಗೆ ತೀವ್ರವಾದ ಗಾಯಗಳಾದ ಘಟನೆ ಇಲ್ಲಿನ ಚಿಕ್ಕ ಪಾಲನಹಳ್ಳಿ ಗೇಟ್ ಬಳಿ ಗುರುವಾರ ಸಂಜೆ ನಡೆದಿದೆ.
ತಾಲ್ಲೂಕಿನ ಮಾರತ್ಹಳ್ಳಿ ಬಳಿಯಿರುವ ಟೆಕ್ಸ್ ಪೋರ್ಟ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಣ್ಣುಮಕ್ಕಳು ಸಂಜೆ ಕೆಲಸ ಮುಗಿಸಿ ತಮ್ಮ ಊರುಗಳಿಗೆ ಈ ಬಸ್ಸಿನಲ್ಲಿ ವಾಪಸ್ ಬರುತ್ತಿದ್ದರು ಎನ್ನಲಾಗಿದೆ. ಬಸ್ಸಿನ ಚಾಲಕ ಮದ್ಯದ ಅಮಲಿನಲ್ಲಿದ್ದು, ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದಾನೆ ಎನ್ನಲಾಗಿದೆ.
ಚಿಕ್ಕ ಪಾಲನಹಳ್ಳಿ ಗೇಟ್ ಬಳಿ ಎದುರಿನಿಂದ ಬಂದ ಕಾರನ್ನು ತಪ್ಪಿಸುವ ಭರದಲ್ಲಿ ಈ ಅಪಘಾತ ಸಂಭವಿಸಿದ್ದು, ಬಸ್ 3 ಪಲ್ಟಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ 20ಕ್ಕೂ ಅಧಿಕ ಮಹಿಳೆಯರಿಗೆ ಗಾಯಳಾಗಿದ್ದು, ಕೆಲವು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.
ಬಸ್ಸಿನಲ್ಲಿದ್ದ ಮಹಿಳೆಯರು ಎಷ್ಟೇ ಹೇಳಿದರೂ ಕೇಳದ ಚಾಲಕ, ನಿಮ್ಮೆಲ್ಲರ ಪ್ರಾಣ ನನ್ನ ಕೈಲಿದೆ ಎಂದು ಉಡಾಫೆ ಉತ್ತರವನ್ನು ನೀಡಿ, ಕುಡಿದ ಅಮಲಿನಲ್ಲಿ ಅತಿ ವೇಗದಿಂದ ಚಾಲನೆ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಚಾಲಕ ಸ್ಥಳದಲ್ಲಿಯೇ ಬಸ್ಸನ್ನು ಬಿಟ್ಟು ಪರಾರಿಯಾಗಿದ್ದಾನೆ ..
ಫ್ಯಾಕ್ಟರಿ ಮಾಲೀಕರು ಇಂತಹ ಚಾಲಕರನ್ನು ನೇಮಿಸುವುದುಕ್ಕೂ ಮುಂಚೆ ಎಚ್ಚರವಹಿಸಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ . ಘಟನೆ ಸಂಬಂಧ ಕೋಳಾಲ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ ..
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB