ಕೊರಟಗೆರೆ: ಯೋಧನೋರ್ವ ತನ್ನ ಮನೆಗೆ ತೆರಳಲು ದಾರಿ ಕೇಳಿದ್ದಕ್ಕೆ ಸಿಟ್ಟಿಗೆದ್ದ 5 ಜನ ಪುಡಿರೌಡಿಗಳ ತಂಡವೊಂದು ಬಿಯರ್ ಬಾಟಲಿನಿಂದ ಯೋಧನಿಗೆ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಮೇ 21ರ ಮಂಗಳವಾರ ತಡರಾತ್ರಿ ಬೈರೇನಹಳ್ಳಿಯ ಎನ್ ಟಿ ಆರ್ ಕಂಪರ್ಟ್ ಮತ್ತು ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾ.ಪಂ. ವ್ಯಾಪ್ತಿಯ ಬೈರೇನಹಳ್ಳಿಯ ಎನ್ ಟಿಆರ್ ಕಂಪರ್ಟ್ ಮತ್ತು ಬಾರ್ ರೆಸ್ಟೋರೆಂಟ್ ನಲ್ಲಿ ಘಟನೆ ನಡೆದಿದೆ. ರಾಯವಾರದ ಯೋಧ ಗೋವಿಂದರಾಜು(30) ತಲೆ ಮತ್ತು ಕೈಕಾಲುಗಳಿಗೆ ತೀವ್ರ ತರದ ಗಾಯಗಳಾಗಿ ಕೊರಟಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜಮ್ಮು ಕಾಶ್ಮಿರದ ಭಾರತೀಯ ಭೂ ಸೇನೆ ಸಿಪಾಯಿಯಾಗಿ ಜಮ್ಮುಕಾಶ್ಮಿರದ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಯವಾರದ ಯೋಧ ಗೋವಿಂದರಾಜು ರಜೆಯ ಪ್ರಯುಕ್ತ ತನ್ನ ಸ್ವಗ್ರಾಮಕ್ಕೆ ಆಗಮಿಸಿದ್ದಾನೆ.
ಮದ್ಯಪಾನ ಮಾಡುವ ಹವ್ಯಾಸ ಇರುವ ಯೋಧ ಬೈರೇನಹಳ್ಳಿ ತೆರಳಿ ಮದ್ಯಪಾನ ಮಾಡಿ ಮನೆಗೆ ಹಿಂದಿರುಗುವ ವೇಳೆ ಯುವಕರ ಗುಂಪು ಹಲ್ಲೆ ನಡೆಸಿದೆ.
ಅಣ್ಣ ದಾರಿ ಬಿಡಿ ನಾನು ಮನೆಗೆ ಹೋಗಬೇಕಿದೆ ಎಂದು ಯೋಧ, ರಸ್ತೆಗೆ ಅಡ್ಡಲಾಗಿ ನಿಂತಿದ್ದ ಯುವಕರಿಗೆ ಮನವಿ ಮಾಡಿದ್ದಾನೆ. ನನ್ನ ಮಗನೇ ನಮ್ಮನ್ನೇ ದಾರಿ ಬಿಡು ಎಂದು ಕೇಳುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಪುನೀತಾ ಎಂಬಾತ ನಿಂದಿಸಿದ್ದಾನೆ ಎನ್ನಲಾಗಿದೆ, ದಾರಿ ಕೇಳಿದ್ರೇ ನನ್ನನ್ನೇ ಏಕೆ ಹೀಗೆ ಬೈಯ್ತಿರಾ ಎಂದು ಯೋಧ ಮರು ಪ್ರಶ್ನೆ ಮಾಡಿದ ವೇಳೆ, ನಮ್ಮನ್ನೇ ಪ್ರಶ್ನೆ ಮಾಡ್ತಿಯಾ ಎಂದು ಬಿಯರ್ ಬಾಟಲಿಂದ ತಲೆಗೆ ಹೊಡೆದ ಪುನೀತಾ ತನ್ನ ಸ್ನೇಹಿತರ ಜೊತೆಸೇರಿ ಯೋಧನ ಕೊಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ರಾಯವಾರದ ಯೋಧ ಗೋವಿಂದರಾಜು ದೂರಿನ ಅನ್ವಯ ಮಧುಗಿರಿಯ ಕೊಡಗದಾಲದ ಪುನೀತ(32), ಹುಣಸವಾಡಿಯ ಗೌರಿಶಂಕರ(32), ಶಿವಾ(32), ಕೊರಟಗೆರೆಯ ಅರಸಾಪುರದ ಭರತ್(29), ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್(35) ಎಂಬವರ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ 10 ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA