ಭಾರತೀಯರು ಆಚರಿಸುವ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಹಬ್ಬದ ಕುರಿತು ಅನೇಕ ಕಥೆಗಳಿವೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಗೆ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ.
ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನ ಮಹಾಶಿವರಾತ್ರಿ. ಅಲ್ಲದೆ, ದೇವತೆ ಹಾಗೂ ಅಸುರರ ನಡುವೆ ನಡೆದ ಸಮುದ್ರ ಮಂಥನ ಕಾಲದಲ್ಲಿ ಉದ್ಭವವಾದ ವಿಷ ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜೊತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.
ಶಿವರಾತ್ರಿ ಆಚರಣೆಯ ಹಿನ್ನೆಲೆ:
ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡಿ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ಪ್ರತಿ ಸಂವತ್ಸರದಲ್ಲಿ, ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು, ರಾತ್ರಿ ವೇಳೆಯಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿಯಂದು ರಾತ್ರಿಯ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ.
ಮಹಾಶಿವರಾತ್ರಿಯ ಈ ಪವಿತ್ರ ದಿನದ ಮಧ್ಯರಾತ್ರಿಯಲ್ಲಿ ಶಿವ ಲಿಂಗ ರೂಪದಲ್ಲಿ ಆವಿರ್ಭವಿಸಿದನಂತೆ. ಹಿಂದೂಗಳಿಗೆ ಪ್ರಮುಖವಾಗಿ ಶಿವಭಕ್ತರಿಗೆ ಮಹಾ ಶಿವರಾತ್ರಿ ಉಪವಾಸದ ದಿನವಾದರೂ ಹಬ್ಬದ ಸಡಗರ ಮನೆ ಮಾಡುತ್ತದೆ. ಅಂದು ಪ್ರಾತಃಕಾಲದಲ್ಲಿಯೇ ಎದ್ದು, ಸ್ನಾನ ಮಾಡಿ, ಮಡಿ ವಸ್ತ್ರ ತೊಟ್ಟು, ಉಪವಾಸವಿದ್ದು, ಶಿವದೇವಾಲಯಗಳಿಗೆ ತೆರಳಿ, ಶಿವಾರ್ಚನೆ ಮಾಡಿದರೆ ಮತ್ತು ರಾತ್ರಿಯಿಡೀ ಜಾಗರಣೆ ಮಾಡಿ ಶಿವನ ಪೂಜೆ ಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರವಾಗಿ ಸುಖ, ಶಾಂತಿ, ಸಂಪತ್ತು ಲಭಿಸುತ್ತದೆ, ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಸಾಮಾನ್ಯವಾಗಿ ಎಲ್ಲ ಶಿವ ದೇವಾಲಯಗಳಲ್ಲೂ ಮಹಾ ರಾತ್ರಿಯಿಡೀ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನಡೆಯುತ್ತದೆ, ಗೋರೋಚನ, ವಿಭೂತಿ ಹಾಗೂ ರುದ್ರಾಕ್ಷಿ ಮಾಲೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಪುಷ್ಪಗಳಿಂದ ಹಾಗೂ ಬಿಲ್ವಪತ್ರೆಯಿಂದ ವಿಶೇಷ ಅಲಂಕಾರದೊಂದಿಗೆ, ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ.
ಮಹಾಶಿವರಾತ್ರಿ ಕಥೆ:
ಸಾಮಾನ್ಯವಾಗಿ ಎಲ್ಲ ಶಿವ ದೇವಾಲಯಗಳಲ್ಲೂ ಮಹಾ ರಾತ್ರಿಯಿಡೀ ಗಂಗಾಜಲಾಭಿಷೇಕ, ಪಂಚಾಮೃತ ಅಭಿಷೇಕ ನಡೆಯುತ್ತದೆ, ಗೋರೋಚನ, ವಿಭೂತಿ ಹಾಗೂ ರುದ್ರಾಕ್ಷಿ ಮಾಲೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಪುಷ್ಪಗಳಿಂದ ಹಾಗೂ ಬಿಲ್ವಪತ್ರೆಯಿಂದ ವಿಶೇಷ ಅಲಂಕಾರದೊಂದಿಗೆ, ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ.
ಇಕ್ಷ್ವಾಕು ವಂಶದ ರಾಜ ಚಿತ್ರಭಾನು ಸಂಪೂರ್ಣ ಜಂಬೂದ್ವೀಪದ ರಾಜನಾಗಿರುತ್ತಾನೆ. ಅವನು ಪ್ರತಿ ಶಿವರಾತ್ರಿಯಂದು ಉಪವಾಸ, ಜಾಗರಣೆ ಮಾಡುತ್ತಿರುತ್ತಾನೆ. ಒಂದು ಸಲ ರಾಜನನ್ನು ಭೇಟಿ ಮಾಡಲು ಬಂದ ಋಷಿ ಅಷ್ಟವಕ್ರ ರಾಜನನ್ನು ಕೇಳುತ್ತಾನೆ, “ರಾಜಾ, ನೀವು ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆಯನ್ನು ಯಾಕೆ ಮಾಡುತ್ತೀರಾ?” ಆಗ ರಾಜ ಚಿತ್ರಭಾನು ತನ್ನ ಹಿಂದಿನ ಜನ್ಮದ ಕತೆಯನ್ನು ಹೇಳುತ್ತಾನೆ. ಹಿಂದಿನ ಜನ್ಮದಲ್ಲಿ ಅವನು ಒಬ್ಬ ಬೇಡನಾಗಿದ್ದನು. ಜೀವನಕ್ಕಾಗಿ ಅವನು ಪ್ರಾಣಿ ಪಕ್ಷಿಗಳನ್ನು ಕೊಂದು ಮಾರಾಟ ಮಾಡುತ್ತಿದ್ದನು. ಒಂದು ದಿನ ಬೇಡನು ಕಾಡಿನಲ್ಲಿ ಎಷ್ಟು ಹುಡುಕಿದರೂ ಒಂದೂ ಪ್ರಾಣಿ ಸಿಗಲಿಲ್ಲ. ಬೇಟೆಗಾಗಿ ಕಾಯುತ್ತಾ ರಾತ್ರಿ ಆಗುತ್ತದೆ. ಕತ್ತಲೆಯಲ್ಲಿ ಕಾಡಿನಿಂದ ಹೊರ ಹೋಗಲು ದಾರಿ ತಿಳಿಯದೆ ಬೇಡನು ಬಿಲ್ವದ ವೃಕ್ಷ ಹತ್ತಿ ಕೂರುತ್ತಾನೆ. ಬೇಡನಿಗೆ ತುಂಬಾ ಹೊಟ್ಟೆ ಹಸಿಯುತ್ತಿರುತ್ತದೆ ಮತ್ತು ಬಾಯಾರಿಕೆ ಆಗುತ್ತಿರುತ್ತದೆ. ಬೇಡನು ಮನೆಯಲ್ಲಿ ಹೆಂಡತಿ ಮಕ್ಕಳು ಹಸಿದಿರುತ್ತಾರೆಂದು ದುಃಖಿಸುತ್ತಿರುತ್ತಾನೆ. ರಾತ್ರಿ ಕಾಡಿನಲ್ಲಿ ನಿದ್ದೆಯನ್ನು ಮಾಡಿದರೆ ಕಾಡು ಪ್ರಾಣಿಗಳು ಅವನನ್ನು ತಿಂದುಬಿಡಬಹುದೆಂದು ಅವನು ಸಂಪೂರ್ಣ ರಾತ್ರಿ ಎಚ್ಚರವಿರಲು ತೀರ್ಮಾನಿಸುತ್ತಾನೆ. ಸಮಯ ಕಳೆಯಲು ಅವನು ಬಿಲ್ವದ ಎಲೆಗಳನ್ನು ಒಂದೊಂದಾಗಿ ಕಿತ್ತು ನೆಲದ ಮೇಲೆ ಹಾಕುತ್ತಿರುತ್ತಾನೆ.
ಮಾರನೇ ದಿನ ಅವನು ಮನೆಗೆ ಹೋಗುತ್ತಾನೆ. ತುಂಬಾ ಹೊಟ್ಟೆ ಹಸಿಯುತ್ತಿದ್ದರಿಂದ ಅವನು ಕೂಡಲೇ ತನ್ನ ಉಪವಾಸ ಬಿಟ್ಟು ಊಟ ಮಾಡಬೇಕು ಎಂದು ಕೊಳ್ಳುತ್ತಾನೆ ಆದರೆ ಆಗಲೇ ಒಬ್ಬ ಭಿಕ್ಷುಕ ಬಂದು ಭಿಕ್ಷೆ ಬೇಡುತ್ತಾನೆ. ಬೇಡನು ಮೊದಲು ಭಿಕ್ಷುಕನಿಗೆ ಊಟ ನೀಡಿ ನಂತರ ತಾನು ಊಟ ಮಾಡುತ್ತಾನೆ.
ಇದಾಗಿ ಎಷ್ಟೋ ವರ್ಷಗಳ ನಂತರ ಬೇಡನ ಸಾವಿನ ಸಮಯ ಬರುತ್ತದೆ. ಬೇಡನನ್ನು ಕರೆದುಕೊಂಡು ಹೋಗಲು ಶಿವಲೋಕದಿಂದ ಇಬ್ಬರು ಶಿವ ಕಿಂಕರರು ಬರುತ್ತಾರೆ. ಬೇಡನಿಗೆ ತಾನು ಶಿವನ ಆರಾಧನೆಯನ್ನೂ ಮಾಡಿಲ್ಲ ಮೇಲಾಗಿ ನಾನು ಪ್ರಾಣಿ ಪಕ್ಷಿಗಳನ್ನು ಕೊಂದು ಬದುಕಿದವನು, ಹೀಗಿದ್ದರೂ ಇವರೇಕೆ ನನ್ನನ್ನು ಶಿವಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಆಶ್ಚರ್ಯವಾಗುತ್ತದೆ. ಇವನ ವಿಚಾರವನ್ನು ಅರಿತ ಶಿವ ಕಿಂಕರರು,”ನೀನು ನಿನಗೆ ತಿಳಿಯದಂತೆ ಶಿವರಾತ್ರಿಯಂದು ಶಿವನ ಆರಾಧನೆಯನ್ನು ಮಾಡಿದ್ದೀಯ. ತುಂಬಾ ವರ್ಷಗಳ ಹಿಂದೆ ನೀನು ಕಾಡಿನಲ್ಲಿ ಒಬ್ಬನೇ ರಾತ್ರಿ ಸಿಕ್ಕಿ ಹಾಕಿಕೊಂಡಿದ್ದಾಗ ಬೇಲದ ಮರದ ಮೇಲೆಕುಳಿತು ಜಾಗರಣೆ ಮಾಡಿರುವೆ. ಬಿಲ್ವದ ಎಲೆಗಳನ್ನು ಕಿತ್ತು ನೆಲದ ಮಲೆ ಹಾಕುತ್ತಿದ್ದೆ. ಆದರೆ ನೀನು ಹಾಕಿದ ಬಿಲ್ವದ ಎಲೆಗಳು ಮರದಡಿ ಇದ್ದ ಶಿವಲಿಂಗಕ್ಕೆ ಅರ್ಪಣೆಯಾಗುತ್ತಿದ್ದವು. ನೀನು ಅರಿವಿಲ್ಲದಂತೆಯೇ ರಾತ್ರಿ ಇಡೀ ಉಪವಾಸವನ್ನೂ ಮಾಡಿದೆ. ಈ ಕಾರಣದಿಂದಾಗಿ ನಿನಗೆ ಶಿವಲೋಕದ ಆನಂದ ಅನುಭವಿಸಲು ಸಿಗುತ್ತಿದೆ ಮತ್ತು ತುಂಬಾ ವರ್ಷಗಳ ನಂತರ ನೀನು ರಾಜಾ ಚಿತ್ರಭಾನು ಆಗಿ ಹುಟ್ಟುವೆ”ಎಂದುಹೇಳುತ್ತಾರೆ.
ಶಿವರಾತ್ರಿ ಆಚರಣೆಯ ವೈಜ್ಞಾನಿಕ ಹಿನ್ನೆಲೆ:
ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಮುಖ್ಯವಾಗಿದೆ. ಈ ಸಮಯದಲ್ಲಿ ಚಳಿಗಾಲವು ಮುಗಿದು ಬೇಸಿಗೆ ಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು.
ಶಿವರಾತ್ರಿಯಂದು ಕರ್ತವ್ಯಗಳು:
ಶಿವನ ಭಕ್ತರು ಶಿವರಾತ್ರಿಯಂದು ಈ ಕೆಳಗಿನ ಮೂರು ನಿಯಮಗಳನ್ನು ಪಾಲಿಸಿದರೆ ಶ್ರೇಷ್ಠ
1: ಶಿವಾಭಿಷೇಕಾದಿ ಪೂಜೆ
2:ಜಾಗರಣೆ
3: ಉಪವಾಸ
ಶಿವಲಿಂಗಕ್ಕೆ ಅರ್ಧಪ್ರದಕ್ಷಿಣೆಯನ್ನು ಏಕೆ ಹಾಕುತ್ತಾರೆ?:
ಶಿವನಿಗೆ ಹಾಕುವ ಪ್ರದಕ್ಷಿಣೆಯು ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿರುತ್ತದೆ.
ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಶಿವಲಿಂಗದ ಎದುರು ನಿಂತಾಗ ಬಲಬದಿಗೆ ಅಭಿಷೇಕದ ನೀರು ಹೋಗುವ ಹರಿನಾಳವಿರುತ್ತದೆ. ಪ್ರದಕ್ಷಿಣೆಯ ಮಾರ್ಗವು ಅಲ್ಲಿಂದ ಆರಂಭವಾಗುತ್ತದೆ. ಪ್ರದಕ್ಷಿಣೆ ಹಾಕುವಾಗ ಹರಿನಾಳದಿಂದ ಆರಂಭಿಸಿ ತಮ್ಮ ಎಡಬದಿಯಿಂದ ಹರಿನಾಳದ ಇನ್ನೊಂದು ಬದಿಯವರೆಗೆ ಹೋಗಬೇಕು. ನಂತರ ಹರಿನಾಳವನ್ನು ದಾಟದೇ ಹಿಂತಿರುಗಿ ಪುನಃ ಹರಿನಾಳದ ಮೊದಲ ಬದಿಯವರೆಗೆ ಬಂದು ಪ್ರದಕ್ಷಿಣೆ ಪೂರ್ಣಗೊಳಿಸಬೇಕು.
ಈ ನಿಯಮವು ಶಿವಲಿಂಗವು ಮಾನವಸ್ಥಾಪಿತ ಅಥವಾ ಮಾನವನಿರ್ಮಿತವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚರಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ.
ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ 5 ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ. ಬುದ್ಧಿಪ್ರಾಮಾಣ್ಯವಾದಿಗಳಿಗೆ, ಹರಿನಾಳವನ್ನು ದಾಟುವಾಗ ನಮ್ಮ ಕಾಲುಗಳಲ್ಲಿನ ಕೊಳೆಯು ಅದರಲ್ಲಿ ಬಿದ್ದರೆ, ಆ ನೀರನ್ನು ತೀರ್ಥವೆಂದು ಸೇವಿಸುವ ಭಕ್ತರಿಗೆ ರೋಗಗಳು ಬರುತ್ತವೆ, ಆದುದರಿಂದ ಅದನ್ನು ದಾಟುವುದಿಲ್ಲವೆಂದು ಅನಿಸುತ್ತದೆ.
ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ. ಹೀಗೆ ಮಹಾಶಿವರಾತ್ರಿಯ ಆಚರಣೆಗೆ ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳೂ ಇವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296