ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದ ಸರ್ಕಾರ ಅದನ್ನು ಮರೆತಿದೆ. ಇದರ ವಿರುದ್ಧ ಮಾ.28ರಂದು ಅನಿರ್ದಿಷ್ಟಾವ ಉಪವಾಸ ಸತ್ಯಾಗ್ರಹವನ್ನು ಬಳ್ಳಾರಿಯಲ್ಲಿ ಸಾರಿಗೆ ಸಚಿವರ ಮನೆ ಬಳಿ ಮಾಡಲಿದ್ದೇವೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2020ರಲ್ಲಿ ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ ಸರ್ಕಾರ ನೀಡಿದ 9 ಲಿಖಿತ ಭರವಸೆಗಳ ಪೈಕಿ ಅದರಲ್ಲೂ ಮುಖ್ಯವಾಗಿ ಸರ್ಕಾರಿ ನೌಕರರಿಗೆ ಚಾಲ್ತಿಯಲ್ಲಿರುವ ಆರನೇ ವೇತನ ಆಯೋಗದ ಮಾದರಿಯಲ್ಲಿ ಸಾರಿಗೆ ನೌಕರರಿಗೂ ವೇತನ ನಿಗದಿ ಮಾಡುವುದಾಗಿ ಮೂರು ತಿಂಗಳ ಕಾಲಾವಕಾಶ ಪಡೆಯಲಾಗಿತ್ತು.
ಸರ್ಕಾರ ಕೊಟ್ಟ ಅವಧಿಯಲ್ಲಿ ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದರಿಂದಾಗಿ ಮತ್ತೆ ಸಾರಿಗೆ ಮುಷ್ಕರ ಮಾಡಿದ್ದು, ಇದನ್ನೇ ನೆಪವಾಗಿಸಿಕೊಂಡ ಸರ್ಕಾರ ನಿಗಮಗಳಲ್ಲಿ ಸಾವಿರಾರು ನೌಕರ ರನ್ನು ವಜಾ ಮಾಡಿ, ಅನೇಕರನ್ನು ವರ್ಗಾವಣೆ ಮಾಡಲಾಯಿತು ಹಾಗೂ ಅಮಾನತಿನಂತಹ ಕ್ರೂರ ಶಿಕ್ಷೆಯನ್ನು ನೌಕರರಿಗೆ ಕೊಡಲಾಯಿತು. ಸುಳ್ಳು ಪ್ರಕರಣಗಳನ್ನು ದಾಖಲಿಸಿ ನೂರಾರು ಕುಟುಂಬಗಳಿಗೆ ತೊಂದರೆ ಕೊಡಲಾಯಿತು. ಇದರ ಕುರಿತು ಸಾರಿಗೆ ಸಚಿವರಿಗೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಎಲ್ಲಾ ಸಮಸ್ಯೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ದೂರಿದರು.
ಸದ್ಯ ಅಮಾನತುಗೊಂಡಿರುವ ನೌಕರರನ್ನು ಮತ್ತೆ ಸೇವೆಗೆ ಸೇರಿಸಿಕೊಂಡು, ನಮಗೆ ಬರಬೇಕಾದ ಸಂಬಳವನ್ನು ಸರಿಯಾದ ಸಮಯದಲ್ಲಿ ನೀಡಿ, ಸಾರಿಗೆ ನೌಕರರ ಮೇಲೆ ಇರುವ ಪೊಲೀಸ್ ಪ್ರಕರಣಗಳನ್ನು ತ್ವರಿತವಾಗಿ ತೆಗೆದು, ಆರನೇ ವೇತನ ಆಯೋಗಕ್ಕೆ ನಮ್ಮನ್ನು ಪರಿಗಣಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಮಾ.27ರ ಒಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ 28 ರಂದು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ ಎಂದು ಸರ್ಕಾರವನ್ನು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಘು, ಅನಿಲ, ಶ್ರೀಧರ್, ಸಂತೋಷ್ ಉಪಸ್ಥಿತರಿದ್ದರು.
ವರದಿ ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB