ಮೈಸೂರು: ಇಲ್ಲಿನ ಸಿದ್ಧಾರ್ಥನಗರದಲ್ಲಿ ನಡೆದ ರೋಚಕ ಘಟನೆಯೊಂದರಲ್ಲಿ, ಮನೆಯೊಳಗೆ ನುಗ್ಗಿದ್ದ ಚಿರತೆಯಿಂದ ತನ್ನ ಅತ್ತೆಯನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಸೊಸೆ ಸುಜಾತಾ ಅವರ ಸಾಹಸಕ್ಕೆ ಇಡೀ ರಾಜ್ಯವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಈ ಅಪ್ರತಿಮ ಧೈರ್ಯವನ್ನು ಗುರುತಿಸಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುಜಾತಾ ಅವರಿಗೆ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ ನೀಡುವುದಾಗಿ ಘೋಷಿಸಿದ್ದಾರೆ.
ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಮಂಚದ ಕೆಳಗೆ ಚಿರತೆಯೊಂದು ಅಡಗಿ ಕುಳಿತಿತ್ತು. ಕೊಠಡಿಯಲ್ಲಿದ್ದ ವೃದ್ಧ ಅತ್ತೆಗೆ ಈ ವಿಷಯ ತಿಳಿದಿರಲಿಲ್ಲ. ಮನೆಯೊಳಗೆ ಚಿರತೆ ಇರುವುದನ್ನು ಅರಿತ ಸೊಸೆ ಸುಜಾತಾ, ಕಿಂಚಿತ್ತೂ ಭಯಪಡದೆ ತಕ್ಷಣವೇ ಕೊಠಡಿಗೆ ನುಗ್ಗಿ, ಮಂಚದ ಕೆಳಗಿದ್ದ ಮೃತ್ಯುರೂಪಿ ಚಿರತೆಯ ದವಡೆಯಿಂದ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಎಳೆದುಕೊಂಡು ಬರುವಲ್ಲಿ ಯಶಸ್ವಿಯಾದರು.
ಈ ಸಾಹಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ಸುಜಾತಾ ಅವರ ಸಮಯಪ್ರಜ್ಞೆ ಮತ್ತು ಧೈರ್ಯ ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ವಿಷಯ. ಅತ್ತೆ-ಸೊಸೆಯ ಬಾಂಧವ್ಯದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನು ಅಳಿಸಿ ಅವರು ಮಾದರಿಯಾಗಿದ್ದಾರೆ. ಅವರ ಈ ಅಸಾಧಾರಣ ಶೌರ್ಯವನ್ನು ಗೌರವಿಸಲು ಮುಂದಿನ ವರ್ಷದ ‘ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿ’ಗೆ ಅವರ ಹೆಸರನ್ನು ಪರಿಗಣಿಸಲು ಇಲಾಖೆಗೆ ಸೂಚನೆ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


