ಗುಬ್ಬಿ: ಸಮಾಜದಲ್ಲಿ ಶೋಷಣೆಗೆ ಒಳಗಾದ ಅಹಿಂದ ವರ್ಗದ ಮಕ್ಕಳು ಪ್ರಸ್ತುತ ದಿನಮಾನದಲ್ಲಿ ಶೇ.97 ಅಂಕ ಗಳಿಕೆಯಲ್ಲಿ ಕಾಣಿಸಿಕೊಂಡಿದ್ದು ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ಎನ್ನಬಹುದು. ಇದರ ಸಾಧನೆ ಶಿಕ್ಷಣ ಇಲಾಖೆಗೆ ಸಲ್ಲುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಗುಬ್ಬಿ ಹೊರ ವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆ ಆಯೋಜನೆ ಮಾಡಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ 139 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಸ್ ಸಿ, ಎಸ್ ಟಿ ಸಮುದಾಯದ ಮಕ್ಕಳು ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬಂದಿರುವುದು ದೇಶದ ಬದಲಾವಣೆ ಎನ್ನಬಹುದಾಗಿದೆ ಎಂದರು.
ಎಲ್ಲಾ ರಂಗವೂ ಭ್ರಷ್ಟಾಚಾರದಿಂದ ತುಂಬಿದೆ. ಇದ್ದಿದ್ದರೆ ಶಿಕ್ಷಣ ಇಲಾಖೆ ಕೊಂಚ ಸಮಾಧಾನ ತರುವ ಲಂಚಮುಕ್ತ ರಂಗವಾಗಿದೆ. ಶಿಕ್ಷಣ ಎನ್ನುವುದು ದೇಶದ ಅಭಿವೃದ್ಧಿ. ಶಿಕ್ಷಕ ವರ್ಗ ಉತ್ತಮ ನಾಗರೀಕ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದೆ. ಹಾದಿ ತಪ್ಪುವ ಮಕ್ಕಳಿಗೆ ಸರಿ ದಾರಿ ತೋರಿ ಸುಂದರ ದೇಶ ಕಟ್ಟುವ ಕೆಲಸ ಶಿಕ್ಷಕರು ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗಾಗಿ ಜಯಂತಿ ದಿನಾಚರಣೆ ಅರ್ಥಪೂರ್ಣ ಎಂದರು.
ತುಮಕೂರು ಓರೇ ಮಠದ ಶ್ರೀ ಶಿವಾನಂದ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಶಿಕ್ಷಕ ಕೇವಲ ವೃತ್ತಿಯಾಗದೆ ಪ್ರವೃತ್ತಿಯಾಗಿ ಸಮಾಜ ಕಟ್ಟಬೇಕು. ಅಪಾರ ಗೌರವ ಸಿಗುವ ಶಿಕ್ಷಕ ಹುದ್ದೆಗೆ ತನ್ನದೇ ವಿಶೇಷ ಬೆಲೆ ಇದೆ. ಈಗಿನ ಕಾಲದಲ್ಲೇ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಸಂದಿದೆ. ಸಾರ್ವಜನಿಕ ಆಸ್ತಿಯಾಗಿ ಶಿಕ್ಷಣ ಮನೆ ಬಾಗಿಳಿಗೆ ತಲುಪುತ್ತಿದೆ. ದಿನ ಕಳೆದಂತೆ ಶಿಕ್ಷಣ ಕ್ಷೇತ್ರ ಸಾಕಷ್ಟು ಸುಧಾರಣೆ ಕಂಡಿದೆ ಎಂದು ಹೇಳಿ ರಾಧಾಕೃಷ್ಣನ್ ಅವರ ಬಡತನದ ಜೀವನ ಚರಿತ್ರೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಪ್ರಾಸ್ತಾವಿಕ ಮಾತನಾಡಿ ಇಲಾಖೆಯ ಕಾರ್ಯದ ಬಗ್ಗೆ ತಿಳಿಸಿದರು. ಸರ್ಕಾರ ಒದಗಿಸುವ ಸವಲತ್ತು, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಪ್ರಗತಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಅನೇಕ ವಿಚಾರ ಪ್ರತಾಪ ಮಾಡಿದರು.
ಈ ಸಂದರ್ಭದಲ್ಲಿ ಸಾಧನೆಗೈದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ಲಕ್ಷ್ಮಣ್ ದಾಸ್, ಹಳೇ ಮಾಜಿ ಸದಸ್ಯ ಜಿ.ಆರ್.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಬಿಆರ್ಸಿ ಮಧುಸೂದನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
