ಕೊರಟಗೆರೆ: ರಾಜ್ಯದಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.
ಕೊರಟಗೆರೆಯ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೈ ಶ್ರೀ ರಾಮ್ ಎಂದು ಕೂಗಿದರೆ ಧಮ್ಕಿ ಹಾಕ್ತಾರೆ, ಮೋದಿ ಅವರ ಹೆಸರನ್ನು ಕೂಗಿದರೆ ಸಾಕು ಅವರ ಮೇಲೆ ಹಲ್ಲೆ ಮಾಡುತ್ತಾರೆ, ಕಾಲೇಜ್ ಕ್ಯಾಂಪಸ್ ಒಳಗೆ ನುಗ್ಗಿ ಹಾಡ ಹಗಲೇ ಹೆಣ್ಣು ಮಗಳನ್ನು ಕೊಲೆ ಮಾಡುತ್ತಾರೆ, ವಿಧಾನಸೌಧದ ಒಳಗೆ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗ್ತಾರೆ, ಬೆಂಗಳೂರಿನಲ್ಲಿ ಎಲ್ಲಂದರೆ ಅಲ್ಲಿ ಬಾಂಬ್ ಹಾಕ್ತಾರೆ..? ರಾಜ್ಯದಲ್ಲಿ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.
ನೇಹಾ ಹೆಣ್ಣು ಮಗಳ ಕೊಲೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಯಕ್ತಿಕ ಕಾರಣದಿಂದ ಕೊಲೆ ನಡೆದಿದೆ ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡುವುದಕ್ಕೂ ಮುಂಚೆ ಸ್ವಲ್ಪ ಯೋಚಿಸಬೇಕು, ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.
ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದು ಅಷ್ಟೇ ಕಾಂಗ್ರೆಸ್ ಸಾಧನೆಯಾಗಿದೆ. ನಮ್ಮ ಕರ್ನಾಟಕ ಪಶ್ಚಿಮ ಬಂಗಾಳ ಆಗುತ್ತಿದೆ ಎಂದು ನಮಗೆ ಭಯ ಆಗುತ್ತಿದೆ. ಚುನಾವಣೆಯನ್ನು ಬದಿಗೆ ಇಡೋಣ ಮುಂದೆ ಇದೇ ರೀತಿ ನಡೆದುಕೊಂಡರೆ ರಾಜ್ಯದ ಜನತೆ ದಂಗೆ ಹೇಳುವ ಪರಿಸ್ಥಿತಿ ನಿರ್ಮಾಣವಾದೀತು ಎಂದು ಅವರು ಎಚ್ಚರಿಕೆ ನೀಡಿದರು
ಚೆಂಬು ರಾಜಕೀಯ :
ಇನ್ನೂ ಚೆಂಬು ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು, ಅದು ಚೆಂಬು ಅಲ್ಲಾ ಬಿಜೆಪಿಗೆ ಕಲ್ಪವೃಕ್ಷ. ಅವರಿಗೆ ಚೆಂಬು ಕಾಣುತಿದೆ ಅಷ್ಟೇ, ರಾಜ್ಯದ ಜನ ಈ ಬಾರಿ ಕಾಂಗ್ರೆಸ್ ಗೆ ಚೊಂಬು ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಬರ ಇತ್ತು, ಆಗ ನಾವು ಬರ ಪರಿಹಾರ ನೀಡಲು ಕೇಂದ್ರದ ಮೊರೆ ಹೋಗಲಿಲ್ಲ. ಆದರೆ ಇವರು ಎಸ್ ಸಿ / ಎಸ್ ಟಿ ಹಣ ಸಹ ಬೇರೆಯ ಕೆಲಸಕ್ಕೆ ಬಳಕೆ ಮಾಡಿದ್ದಾರೆ. ರಾಜ್ಯದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆಗಳು ನಿರ್ಮಾಣವಾಗಿವೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಯಲ್ಲಿ ರಾಜ್ಯಾದ್ಯಂತ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಕೆಲಸ ಆಗಿದೆ. ಇಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಮೋದಿಜಿ. ಇದು ತಿಳಿಯಬೇಕು ಎಂದು ಅವರು ಹೇಳಿದರು.
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296