ತುಮಕೂರು: ಗಾಂಧೀಜಿಯವರ ಮಾತು ಮತ್ತು ಕೃತಿಯ ಮಧ್ಯೆ ವ್ಯತ್ಯಾಸವಿರಲಿಲ್ಲ. ಅವರು ಆತ್ಮವಂಚನೆಯಿಲ್ಲದೆ ಬದುಕಿದ್ದರು. ಎಂತಹದೇ ಪ್ರತಿಕೂಲ ಸನ್ನಿವೇಶದಲ್ಲೂ ಅಂತಃಸಾಕ್ಷಿಗೆ ಬದ್ಧರಾಗಿರಬೇಕು ಎಂಬುದನ್ನು ನಾವು ಗಾಂಧೀಜಿಯವರಿಂದ ಕಲಿಯಬೇಕು ಎಂದು ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಭಾರತೀಯ ವಿದ್ಯಾಭವನದ ಗಾಂಧಿ ಕೇಂದ್ರದ ನಿರ್ದೇಶಕಿ ಡಾ. ಮೀನಾ ದೇಶಪಾಂಡೆ ಮಹಿಷಿ ತಿಳಿಸಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯವು ಬುಧವಾರ ಆಯೋಜಿಸಿದ್ದ ‘ಗಾಂಧಿ ಭಾರತ’– ವಿವಿ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರು ವಿಶಿಷ್ಟವಾದ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಸತತ ಪ್ರಯತ್ನ, ಶ್ರಮ ಹಾಗೂ ತಪಸ್ಸಿನ ಫಲವಾಗಿ ಸ್ವಾತಂತ್ರ್ಯದ ಗಮ್ಯವನ್ನು ತಲುಪಿದರು. ಅವರು ಸತ್ಯದ ಅನ್ವೇಷಣೆಯನ್ನು ತಮ್ಮ ಬದುಕಿನ ಹಾದಿಯನ್ನಾಗಿಸಿಕೊಂಡಿದ್ದರು ಎಂದು ನೆನಪಿಸಿಕೊಂಡರು.
ನಮ್ಮ ಅಂತರಾಳದ ಮಾತುಗಳನ್ನು ಕೇಳಿಸಿಕೊಂಡಾಗ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆಂತರಿಕವಾಗಿ ಬೆಳೆಯಬೇಕಾದರೆ ಮನಸ್ಸಿನ ಮಾತು ಕೇಳಬೇಕು. ಗಾಂಧೀಜಿ ಒಳಗಿನಿಂದ ಸದೃಢರಾಗಿದ್ದರಿಂದಲೇ ಅವರ ನಡೆನುಡಿಗಳಲ್ಲಿ ಸೌಮ್ಯಸ್ವಭಾವ ಇತ್ತು. ಅವರೆಂದು ದನಿ ಎತ್ತರಿಸಿ ಮಾತನಾಡಿರಲಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಶ್ರೀನಿವಾಸ ಮಾತನಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW